ಗದಗ, 17 ಜೂನ್ (ಹಿ.ಸ.) :
ಆ್ಯಂಕರ್ : ಹಿರಿಯ ನಾಗರಿಕರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಹಸೀಲ್ದಾರ ವಾಸುದೇವ ಸ್ವಾಮಿ ಮೂಲಕ ಮನವಿ ಸಲ್ಲಿಸಲಾಯಿತು.
ಹಿರಿಯ ನಾಗರಿಕ ಸಂಘದ ತಾಲೂಕಾ ಗೌರವಾಧ್ಯಕ್ಷ ಚನ್ನಪ್ಪ ಕೋಲಕಾರ, ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಹಿರಿಯ ಮುಖಂಡ ಚಂಬಣ್ಣ ಬಾಳಿಕಾಯಿ ಮಾತನಾಡಿ, ಹಿರಿಯ ನಾಗರಿಕರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಣೆ ಮಾಡಬೇಕು.
ಆರ್ಥಿಕವಾಗಿ ದುರ್ಬಲರಾದ ಎಲ್ಲಾ ಹಿರಿಯ ನಾಗರಿಕರಿಗೆ ಮಾಸಿಕ 10 ಸಾವಿರ ರೂ ವೃದ್ಧಾಪ್ಯ ವೇತನ, ಸರ್ಕಾರಿ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ, ಆದಾಯ ಮಿತಿ ರೂ 33 ಸಾವಿರದಿಂದ 1.20 ಲಕ್ಷ ಬಿಪಿಎಲ್ ಆದಾಯ ಮಿತಿ ಕ್ಕೆ ಹೆಚ್ಚಿಸುವುದು, 7ನೇ ವೇತನ ಆಯೋಗದ ವರದಿಯ 2ನೇ ಭಾಗವನ್ನು ತಕ್ಷಣ ಬಿಡುಗಡೆ ಮಾಡಬೇಕು, ಜಿಲ್ಲೆಗೊಂದು ಹಿರಿಯರ ನಾಗರಿಕರ ಭವನ ನಿರ್ಮಾಣ ಹಾಗೂ ಪಟ್ಟಣದಲ್ಲಿ ಪಂಪ ವೃತ್ತದ ಹತ್ತಿರ ಇರುವ ಪುರಸಭೆಯ ಕಟ್ಟಡವನ್ನು ಹಿರಿಯ ನಾಗರಿಕರ ಕಾರ್ಯಾಲಯಕ್ಕೆ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಈ ವೇಳೆ ಕುಬೇರಪ್ಪ ಮಹಾಂತಶೆಟ್ಟರ, ಎಸ್.ಪಿ. ಪಾಟೀಲ, ಸಿ.ಎಸ್. ಕೋಟಿಮಠ, ಎಸ್.ಜಿ. ತಾಳಿಕೋಟಿಮಠ, ದ್ಯಾಮನಗೌಡ ಪಾಟೀಲ, ನೀಲಪ್ಪ ಕರ್ಜಕಣ್ಣವರ, ಚಂದ್ರಶೇಖರ ಹೂಗಾರ, ಶಕುಂತಲಾ ಅಳಗವಾಡಿ, ಈರಣ್ಣ ಮಡಿವಾಳರ, ಸುರೇಶ ರಾಚನಾಯ್ಕರ, ಗೂಳಪ್ಪ ಮೆಕ್ಕಿ, ಭರಮಪ್ಪ ಕೊಡ್ಲಿ, ಎನ್.ಎಂ. ವಡಕಣ್ಣವರ ಮುಂತಾದವರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP