ಕೋಲಾರ, ೧೭ ಜೂನ್ (ಹಿ.ಸ) :
ಆ್ಯಂಕರ್ : ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರಗಳ ಖರೀದಿಗೆ ಅನಗತ್ಯವಾಗಿ ತೊಂದರೆ ನೀಡದೆ ಅವರಿಗೆ ಬೇಕಾದಂತಹ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕಗಳು ಸೇರಿದಂತಹ ಇನ್ನಿತರ ಸೇವೆಗಳನ್ನು ಒದಗಿಸುವ ಕೆಲಸವನ್ನು ಅಂಗಡಿಗಳ ಮಾಲೀಕರು ಮತ್ತು ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯ ಸಹಯೋಗದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಪೂರಕ ಸಿದ್ಧತೆ ಸಭೆಯನ್ನು ಆಯೋಜಿಸಿ ರೈತರಿಗೆ ಸರ್ಕಾರದಿಂದ ಸಿಗುವಂತಹ ಯೋಜನೆಗಳು ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ಕೃಷಿ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಮ ಮಾತನಾಡಿ ಈ ವರ್ಷ ಮುಂಗಾರು ಹಂಗಾಮಿನ ತಾಲ್ಲೂಕುವಾರು ಧಾನ್ಯಗಳ ಬೆಳೆ ವಿಸ್ತೀರ್ಣ :ಬಂಗಾರಪೇಟೆ ತಾಲ್ಲೂಕಿನಲ್ಲಿ ೧೧೯೯೯, ಕೆಜಿಎಫ್ ತಾಲ್ಲೂಕಿನಲ್ಲಿ ೬೩೭೬, ಕೋಲಾರ ತಾಲ್ಲೂಕಿನಲ್ಲಿ ೧೪೩೩೪, ಮಾಲೂರು ತಾಲ್ಲೂಕಿನಲ್ಲಿ ೧೧೯೮೭, ಮುಳಬಾಗಿಲು ತಾಲೂಕಿನಲ್ಲಿ ೧೮೧೩೬, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೧೦೦೬೮ ಒಟ್ಟು ೭೨೯೦೦ ಮುಂಗಾರು ಗುರಿ ವಿಸ್ತೀರ್ಣ ಹೊಂದಿದೆ ಎಂದು ತಿಳಿಸಿದರು.
ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ಕಾರ್ಯಕ್ರಮದ ಅಡಿಯಲ್ಲಿ ರಾಗಿ ೧೫೨.೪೦ ರಷ್ಟು ದಾಸ್ತಾನು ೨೪.೪೫ ವಿತರಣೆ ಮಾಡಲಾಗಿದೆ, ತೊಗರಿ ೨೭.೯೫ ರಷ್ಟು ದಾಸ್ತಾನು ೧೧.೫೦ ರಷ್ಟು ವಿತರಣೆ ಮಾಡಲಾಗಿದೆ,ಅಲಸಂದಿ ೨೬.೮೦ ರಷ್ಟು ದಾಸ್ತಾನು ೨.೫೦ ವಿತರಣೆ ಮಾಡಲಾಗಿದೆ,ನೆಲಗಡಲೆ ೪೯೯.೮೦ ರಷ್ಟು ದಾಸ್ತಾನು ಮಾಡಿದ್ದು ೨೮೦.೨೦ ಬಿತ್ತನೆ ಬೀಜಗಳ ದಾಸ್ತಾನು ಮತ್ತು ವಿತರಣೆ ಮಾದಲಾಗಿದೆ ಎಂದು ತಿಳಿಸಿದರು.
ಬೆಳೆ ಸಮೀಕ್ಷೆ: ಜಿಪಿಎಸ್ ಮೂಲಕ ಬೆಳೆಯನ್ನು ಸಮೀಕ್ಷೆ ಮಾಡಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಮತ್ತು ವಾರ್ಷಿಕವಾಗಿ ೩ ಅವಧಿಗಳಲ್ಲಿ ಸಮೀಕ್ಷೆಯನ್ನು ಪಿ.ಆರ್. ಗಳು ತಮ್ಮ ಮೊಬೈಲ್ನಲ್ಲಿ ಬೆಲೆ ಸಮೀಕ್ಷೆಯ ಅಪ್ ಮೂಲಕ ಮಾಡುತ್ತಾರೆ. ರೈತರು ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಇದರಲ್ಲಿ ಅವರ ಬೆಳೆ ನಮೂದಿಸಿರ ಬೇಕಾಗಿರುತ್ತದೆ ಎಂದರು.
ಕೃಷಿ ಇಲಾಖೆ, ಕಂದಾಯ ಇಲಾಖೆ, ನೀರಾವರಿ ಇಲಾಖೆಗಳು ಸೇರಿ ಬೆಳೆಗಳ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿತ್ತು, ಇದರಿಂದ ಬೆಳೆ ಪ್ರದೇಶದ ಅಂಕಿ ಅಂಶಗಳು ಪರಿಪೂರ್ಣ ಮತ್ತು ಸಮರ್ಪಕವಾದ ಚಿತ್ರಣ ಸಿಗುತ್ತಿರಲಿಲ್ಲ. ಆದ್ದರಿಂದ ಸರ್ವೇ/ಉಪಸರ್ವೆ ಸಂಖ್ಯೆವಾರು ಬೆಳೆ ಮಾಹಿತಿಯನ್ನು ಪರಿಣಾಮಕಾರಿಯಾಗಿ ಸಂಗ್ರಹಿಸುವ ವ್ಯವಸ್ಥೆ ತರಲು ನಿರ್ಧರಿಸಲಾಗಿದ್ದು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಬೆಳೆಸಮೀಕ್ಷೆ ಅನುಷ್ಠಾನ ಸಮಿತಿಗಳ ಕುರಿತು ಜವಾಬ್ದಾರಿಗಳನ್ನು ತಿಳಿಸಿದರು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಆತ್ಮನಿರ್ಭಾರ ಭಾರತ ಯೋಜನೆ ಅಡಿ ಗ್ರಾಮೀಣ ಪ್ರದೇಶದಲ್ಲಿ ಆಹಾರ ಉತ್ಪನ್ನಗಳ ಸಂಸ್ಕರಣೆಯನ್ನು ಪ್ರೋತ್ಸಾಹಿಸಲು ಯುವಕರಿಗೆ ಉದ್ಯೋಗಾವಕಾಶ ಮತ್ತು ಮೂಲಸೌಕರ್ಯ ಸೃಷ್ಟಿ ಮಾಡುವ ಸಲುವಾಗಿ ಹೊಸ ಹಾಗೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಬಲವರ್ಧನೆ ಮತ್ತು ಔಪಚಾರಿಕರಣ ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಹೊಸ ಆಹಾರ ಸಂಸ್ಕರಣ ಉದ್ದಿಮೆ ಪ್ರಾರಂಭಿಸಲು ಅಥವಾ ಚಾಲ್ತಿಯಲ್ಲಿರುವ ಉದ್ಯಮಗಳನ್ನು ವಿಸ್ತರಿಸಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ೧೮ ವರ್ಷ ಮೇಲ್ಪಟ್ಟವರು ಮತ್ತು ಕನಿಷ್ಠ ಯಾವುದೇ ವಿದ್ಯಾರ್ಹತೆ ಇಲ್ಲದವರು ಅಥವಾ ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಸಂಪರ್ಕಿತ ಬ್ಯಾಂಕ್ ಸಾಲ ಪಡೆದಿದ್ದರೂ ಸಹ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ಉಪಕರಣಗಳ ಖರೀದಿಗೆ ಪ್ರತಿ ಸದಸ್ಯರಿಗೆ ಗರಿಷ್ಠ ೪೦,೦೦೦ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುವುದು ಮತ್ತು ಒಂದು ಗುಂಪು ಸ್ವ ಸಹಾಯ ಸಂಘಕ್ಕೆ ಗರಿಷ್ಠ ನಾಲ್ಕು ಲಕ್ಷ ಸಾಲ ಪಡೆಯಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಕಾಧ್ಯಾತೆಯಿಲ ಅಭಿಯಾನ ಎಣ್ಣೆ ಕಾಳು ಬೆಳೆ ಯೋಜನೆ:-ಕೇಂದ್ರ ಪುರಸ್ಕೃತ ಕೃಷಿಯನ್ನುತಿ ಅಭಿಯಾನ ಎಣ್ಣೆ ಕಾಳು ಬೆಳೆಯೋಜನೆಯನ್ನು ಹೊಸದಾಗಿ ೨೦೨೪-೨೫ರಿಂದ ೨೦೩೦-೩೧ ರವರೆಗೆ ಅನುಷ್ಠಾನ ಮಾಡಲು ಅನುಮೋದನೆ ನೀಡಿದ್ದು ಆದ್ಯತೆಲಗಳ ಆಮದು ಮಾಡಿಕೊಳ್ಳುವಳ್ಳಿ ದೇಶದ ಅವಲಂಬನೆ ಕಡಿಮೆ ಮಾಡುವುದು, ದೇಶಿ ಎಣ್ಣೆ ಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವುದು ಹಾಗೂ ರೈತರ ಆದಾಯವನ್ನು ಸುಧಾರಿಸುವುದು, ಎಣ್ಣೆ ಕಾಳು ಬೆಳೆಗಳಲ್ಲಿ ಇಳುವರಿ ಅಂತರದ ವ್ಯತ್ಯಾಸದ ೬೦ರಷ್ಟು ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವುದು ಈ ಯೋಜನೆಯ ಉದ್ದೇಶಗಳಾಗಿವೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಪಿ.ಬಾಗೇವಾಡಿ, ತೋಟಗಾರಿಕೆ ಇಲಾಖೆಯ ಕುಮಾರಸ್ವಾಮಿ, ಕೈಗಾರಿಕೆ ಇಲಾಖೆಯ ನಾಗೇಶ್, ಸೇರಿದಂತೆ ಜಿಲ್ಲೆಯ ರಸ ಗೊಬ್ಬರ ಮಳಿಗೆಗಳ ಮಾಲೀಕರು ಮತ್ತು ಇತರರು ಭಾಗವಹಿಸಿದ್ದರು.
ಚಿತ್ರ : ಕೃಷಿ ಹಂಗಾಮಿನ ಕಾರ್ಯ ಚಟುವಟಿಕೆಗಳ ಬಗ್ಗೆ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಸುಮ ಹಾಗೂ ಇತರರು ಕರಪತ್ರಗಳನ್ನು ಬಿಡುಗಡೆ ಮಾಡಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್