ಅಧ್ಯಕ್ಷರಿಂದ ಮೂಲಭೂತ ಸೌಲಭ್ಯಗಳ ಪರಿಶೀಲನೆ
ರಾಯಚೂರು , 16 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶ್ರೀ ಕೆ. ನಾಗಣ್ಣ ಗೌಡ ಅವರು ರಾಯಚೂರು ನಗರದ ಸರ್ಕಾರಿ ಶಾಲೆ, ಖಾಸಗಿ ಶಾಲೆ, ವಸತಿ ನಿಲಯ ಹಾಗೂ ಆಸ್ಪತ್ರೆಗಳಿಗೆ ಜೂನ್ 16ರಂದು ಭೇಟಿ ನೀಡಿ ಮಕ್ಕಳ ಸುರಕ್ಷತೆ ಮತ್ತು ಮಕ್ಕಳಿಗೆ ಮೂಲಭೂತ ಸೌ
ಅಧ್ಯಕ್ಷರಿಂದ ಮೂಲಭೂತ ಸೌಲಭ್ಯಗಳ ಪರಿಶೀಲನೆ


ಅಧ್ಯಕ್ಷರಿಂದ ಮೂಲಭೂತ ಸೌಲಭ್ಯಗಳ ಪರಿಶೀಲನೆ


ರಾಯಚೂರು , 16 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶ್ರೀ ಕೆ. ನಾಗಣ್ಣ ಗೌಡ ಅವರು ರಾಯಚೂರು ನಗರದ ಸರ್ಕಾರಿ ಶಾಲೆ, ಖಾಸಗಿ ಶಾಲೆ, ವಸತಿ ನಿಲಯ ಹಾಗೂ ಆಸ್ಪತ್ರೆಗಳಿಗೆ ಜೂನ್ 16ರಂದು ಭೇಟಿ ನೀಡಿ ಮಕ್ಕಳ ಸುರಕ್ಷತೆ ಮತ್ತು ಮಕ್ಕಳಿಗೆ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದ್ದಾರೆ.

ಮೊದಲಿಗೆ ನಗರದ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಸಿಬಿಎಸ್‍ಇ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ಮಕ್ಕಳ ಕುಂದುಕೊರತೆಗಳ ಬಗ್ಗೆ, ಶುಲ್ಕದ ವಿವರ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಜಾರಿ ಬಗ್ಗೆ ಪರಿಶೀಲಿಸಿದರು. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು, ವಸತಿ ನಿಲಯ ಹಾಗೂ ಇತರೆ ಸರ್ಕಾರಿ ಕಟ್ಟಡಗಳ ಭಾಗದಲ್ಲಿ ಮಕ್ಕಳ ಸಹಾಯವಾಣಿ 1098 ಮತ್ತು ಸಹಾಯವಾಣಿ -112 ಕಡ್ಡಾಯವಾಗಿ ಬರೆಯಿಸಬೇಕು, ಮಕ್ಕಳ ಹಕ್ಕುಗಳ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ನಂತರ ಬೋಳಮಾನ ದೊಡ್ಡಿ ಅಲ್ಪಸಂಖ್ಯಾತ ವಸತಿ ನಿಲಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಆಹಾರ ಸಾಮಗ್ರಿಗಳ ಗುಣಮಟ್ಟ, ಸ್ವಚ್ಚತೆ, ಕುಡಿಯುವ ನೀರಿನ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ಮಕ್ಕಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಸೌಲತ್ತುಗಳನ್ನು ಸರಿಯಾಗಿ ತಲುಪಿಸಬೇಕು ಮಕ್ಕಳ ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪ ದೋಷಗಳು ಕಂಡು ಬಂದಲ್ಲಿ ಆಯೋಗವು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.

ನಂತರ ಮುನ್ನೂರುವಾಡಿ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಬಿಸಿ ಊಟ ವಿತರಣೆ, ಮೊಟ್ಟೆ ವಿತರಣೆಯನ್ನು ಪರಿಶೀಲಿಸಿದರು. ಶಾಲೆಗಳಿಗೆ ಬಿಸಿ ಊಟಕ್ಕಾಗಿ ಪೂರೈಕೆ ಆಗಿರುವ ಆಹಾರ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪಡೆದು ಮಕ್ಕಳಿಗೆ ವಿತರಿಸಲು ಸೂಚಿಸಿದರು.

ಶಾಲೆಯ ಆವರಣದಲ್ಲಿ ನೀರು ನಿಂತಿದ್ದು ಮಕ್ಕಳಿಗೆ ಆಟವಾಡಲು ಸಮಸ್ಯೆ ಆಗುತ್ತದೆ. ಕೂಡಲೇ ಮೈದಾನವನ್ನು ಸಮತಟ್ಟುಗೊಳಿಸಿ ಶಾಲೆಯ ನಿರ್ವಹಣೆಗೆ ಬಿಡುಗಡೆ ಆದ ಅನುದಾನವನ್ನು ಬಳಕೆ ಮಾಡಿಕೊಂಡು ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲು ಕ್ಷೇತ್ರ ಶಿಕ್ಷಣ ಅಧಿಕಾರಿ ಈರಣ್ಣ ಕೋಸಗಿ ಇವರಿಗೆ ಸೂಚಿಸಿದರು. ನಂತರ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಎನ್‍ಆರ್‍ಸಿ ಘಟಕಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಮರೇಶ್ ಹಾವಿನ್, ಕ್ಷೇತ್ರ ಶಿಕ್ಷಣ ಅಧಿಕಾರಿ ಈರಣ್ಣ ಕೊಸಗಿ, ರಕ್ಷಣಾಧಿಕಾರಿ ಹನುಮೇಶ ಇತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande