ಬೆಂಗಳೂರು, 16 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಬೈಕ್ ಟ್ಯಾಕ್ಸಿ ಸೇವೆಗೆ ಇಂದಿನಿಂದ ತಡೆ ಬಿದ್ದಿದೆ. ವೈಟ್ ಬೋರ್ಡ್ ನಂಬರ್ ಹೊಂದಿರುವ ಬೈಕ್ಗಳ ಮೂಲಕ ಉಬರ್, ಓಲಾ ಮುಂತಾದ ಅಗ್ರಿಗೇಟರ್ಗಳು ನೀಡುತ್ತಿದ್ದ ಸೇವೆಯ ವಿರುದ್ಧ ಹಲವು ಆಕ್ಷೇಪಗಳು ವ್ಯಕ್ತವಾಗಿದ್ದು, ಖಾಸಗಿ ಸಾರಿಗೆ ಒಕ್ಕೂಟ ಹಾಗೂ ಆಟೋ ಚಾಲಕರ ಸಂಘಗಳು ಈ ಸೇವೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದವು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 2ರಂದು ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ಈ ಸೇವೆಗೆ ತಾತ್ಕಾಲಿಕ ನಿಷೇಧ ವಿಧಿಸಿತ್ತು. ಇದರ ವಿರುದ್ಧ ಅಗ್ರಿಗೇಟರ್ಗಳು ಮೇಲ್ಮನವಿ ಸಲ್ಲಿಸಿದ್ದರು, ಇದೀಗ ವಿಭಾಗೀಯ ಪೀಠವು ನಿಷೇಧದ ಆದೇಶವನ್ನು ಮುಂದುವರಿಸಿ, ಮಧ್ಯಂತರ ತಡೆಯನ್ನು ನೀಡಲು ನಿರಾಕರಿಸಿದೆ ಇದರಿಂದಾಗಿ ಬೆಂಗಳೂರಿನಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದೆ.
ಇದೇ ವೇಳೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಂಚರಿಸುತ್ತಿರುವ ಬೈಕ್ ಗಳನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ ಮುಂದಾಗಿದ್ದು ಇಂದಿನಿಂದ ಕಾರ್ಯಾಚರಣೆ ಆರಂಭಿಸಿದೆ.
ಇಂದು ನಡೆದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿದ್ದ ಹಲವು ದ್ವಿಚಕ್ರ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರ ಸುರಕ್ಷತೆ, ಕಾನೂನುಬದ್ಧತೆ ಹಾಗೂ ಸಾರಿಗೆ ಶಿಸ್ತಿಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದ್ದು ಕಾನೂನು ಉಲ್ಲಂಘನೆ ಮಾಡದಂತೆ ಬೈಕ್ ಟ್ಯಾಕ್ಸಿ ಚಾಲಕರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ಮಧ್ಯೆ ನಮ್ಮ ಬೈಕ್ ಟ್ಯಾಕ್ಸಿ ಸಂಘಟನೆ ಬೈಕ್ ಟ್ಯಾಕ್ಸಿ ಸಂಚಾರ ನಿಷೇಧ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa