ಬಳ್ಳಾರಿ, 16 ಜೂನ್ (ಹಿ.ಸ.) :
ಆ್ಯಂಕರ್ : ಪಂಡಿತ ಪಂಚಾಕ್ಷರಿ ಗವಾಯಿಗಳು ಹಾನಗಲ್ಲು ಕುಮಾರಸ್ವಾಮಿಗಳ ಆರ್ಶಿವಾದ ಪಡೆದು ಸಂಗೀತದಲ್ಲಿ ಸಾಧನೆ ಮಾಡಿ ಅಂಧ ಅಂಗವಿಕಲ ಮಕ್ಕಳಿಗಾಗಿ ಸಂಗೀತ ಶಾಲೆಯನ್ನೇ ತೆರೆದು ಅನೇಕರ ಬಾಳಿಗೆ ಬೆಳಕಾಗಿ ಅಮರರಾಗಿದ್ದಾರೆ ಎಂದು ಜಗದೀಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಲ ಭಾರತಿ ಶಾಲೆಯಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಟ್ರಸ್ಟ್ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಗಾನಯೋಗಿ ಶಿವಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ 81ನೇ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಅವರು ಮಾತನಾಡಿದರು.
ಪಂಡಿತ ಪುಟ್ಟರಾಜ ಕವಿ ಗವಾಯಿಗಳಂಥಹ ಶ್ರೇಷ್ಠ ಶಿಷ್ಯರನ್ನು ಸಮಾಜಕ್ಕೆ ನೀಡಿದ ಕೀರ್ತಿ ಪಂಚಾಕ್ಷರಿ ಗವಾಯಿಗಳದ್ದು. ಈ ಮಹಾನೀಯರ ನಿಸ್ವಾರ್ಥ ಸೇವೆ ಸದಾ ಸ್ಮರಣೀಯ ಎಂದರು.
ತುಂಗಭದ್ರ ರೈತ ಸಂಘದ ಅಧ್ಯಕ್ಷ ಡಾ. ದರೂರು ಪುರುಷೋತ್ತಮಗೌಡ ಅವರು, ಸಂಗೀತ ಕ್ಷೇತ್ರಕ್ಕೆ ಪೂಜ್ಯರ ಕೊಡುಗೆ ಬಹಳ ದೊಡ್ಡದು. ಬಳ್ಳಾರಿ ಜಿಲ್ಲೆಯ ಹಲವಾರು ಸಂಗೀತಗಾರರು ಪೂಜ್ಯರು ಸ್ಥಾಪಿಸಿದ ಶ್ರೀ ವಿರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಕಲಿತು ಸಾಧನೆ ಮಾಡಿದ್ದಾರೆ ಎಂದರು.
ರೈತ ಮುಖಂಡರಾದ ಜಾಲಿಹಾಳ್ ಶ್ರೀಧರಗೌಡ, ಚಂದ್ರಶೇಖರ್ಗೌಡ, ಗಾದಿಲಿಂಗಪ್ಪ, ಷಡಾಕ್ಷರಿ, ಎಚ್.ಎಂ. ಅಮರೇಶ್, ಶಿವಾನಂದ ಹಡಪದ, ಶ್ರೀನಿವಾಸ ಆಚಾರಿ ಇನ್ನಿತರರು ವೇದಿಕೆಯಲ್ಲಿದ್ದರು.
ಕರಾಟೆ ವಿದ್ಯಾರ್ಥಿ ಚೇತನ್ ಪ್ರಾರ್ಥನೆ ಗೀತೆ ಹಾಡಿದರು. ಪೂಜ್ಯರ ಪುಣ್ಯಸ್ಮರಣೆಯ ನಿಮಿತ್ತ ನಗರದ ಸಮರ್ಥನಂ ಟ್ರಸ್ಟ್ನ ಅಂಗವಿಕಲ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಟ್ರಸ್ಟ್ನ ಅಧ್ಯಕ್ಷ ಬಂಡ್ರಾಳ್ ಮೃತ್ಯುಂಜಯಸ್ವಾಮಿ ಅವರು ಕಾರ್ಯಕ್ರಮ ನಿರ್ವಹಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್