ಪವನ ಶಕ್ತಿ ಉತ್ಪಾದನೆಯಲ್ಲಿ ಕರ್ನಾಟಕ ಮೊದಲು : ಪ್ರಹ್ಲಾದ್ ಜೋಶಿ
ಬೆಂಗಳೂರು, 15 ಜೂನ್ (ಹಿ.ಸ.) : ಆ್ಯಂಕರ್ : ಪವನ ವಿದ್ಯುತ್‌ ಉತ್ಪಾದನೆ ನವೀಕರಿಸಬಹುದಾದ ಇಂಧನ ವಲಯದ ಕೇಂದ್ರಬಿಂದುವಾಗಿದೆ. 1331.48 ಮೆಗಾವ್ಯಾಟ್ ಪವನ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಸಾಧಿಸಿದ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ
Joshi


ಬೆಂಗಳೂರು, 15 ಜೂನ್ (ಹಿ.ಸ.) :

ಆ್ಯಂಕರ್ : ಪವನ ವಿದ್ಯುತ್‌ ಉತ್ಪಾದನೆ ನವೀಕರಿಸಬಹುದಾದ ಇಂಧನ ವಲಯದ ಕೇಂದ್ರಬಿಂದುವಾಗಿದೆ. 1331.48 ಮೆಗಾವ್ಯಾಟ್ ಪವನ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಸಾಧಿಸಿದ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ನಡೆದ ʼಗ್ಲೋಬಲ್‌ ವಿಂಡ್‌ ಡೇʼ ಸಮ್ಮೇಳನ ಉದ್ದೇಶಿಸಿ ಮಾತನಾಡಿ, ಪವನ ವಿದ್ಯುತ್‌ ಉತ್ಪಾದನೆಯಲ್ಲಿ ತಮಿಳುನಾಡು 1136.37 ಮೆಗಾವ್ಯಾಟ್ ಉತ್ಪಾದಿಸಿ ದ್ವಿತೀಯ ಮತ್ತು ಗುಜರಾತ್ 954.76 ಮೆಗಾವ್ಯಾಟ್ ಉತ್ಪಾದಿಸಿ ತೃತೀಯ ಸ್ಥಾನದಲ್ಲಿದ್ದು, ಭಾರತದ ನವೀಕರಿಸಬಹುದಾದ ಇಂಧನ ವಲಯದ ಕಾರ್ಯತಂತ್ರದ ಕೇಂದ್ರಬಿಂದುವಾಗಿವೆ ಎಂದು ಹೇಳಿದರು.

ಸರ್ಕಾರದ ಪಿಎಂ ಕುಸುಮ್‌, ಕುಸುಮ್‌ ಬಿ ಮತ್ತು ಕುಸುಮ್‌ ಸಿ ಯೋಜನೆಗಳು ರೈತರಿಗೆ ವರವಾಗಿದ್ದು, ವಿದ್ಯುತ್‌ ಸಮಸ್ಯೆ ನೀಗಿಸುವ ಜತೆಗೆ ಆರ್ಥಿಕ ಉಳಿತಾಯ ಮತ್ತು ಆದಾಯದ ದಾರಿಯಾಗಿದೆ. ಈ ಯೋಜನೆಗಳ ಜತೆಗೆ ಸೂರ್ಯ ಘರ್‌ ಸಹ ವಿದ್ಯುತ್‌ ಸ್ವಾವಲಂಬನೆ ತಂದಿದೆ. ಜನರೂ ಇದನ್ನು ಅಪೇಕ್ಚಿಸುತ್ತಿದ್ದು, ರಾಜ್ಯ ಸರ್ಕಾರಗಳು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು. ಕೇಂದ್ರದೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ, ಇಚ್ಛಾಶಕ್ತಿಯಂತೆ ಕೇಂದ್ರ ಸರ್ಕಾರ ನವೀಕರಿಸಬಹುದಾದ ಇಂಧನ ವಲಯಕ್ಕೆ ಪ್ರಮುಖ ಆದ್ಯತೆ ನೀಡಿದೆ. ಪ್ರಸಕ್ತ ವರ್ಷ ನವೀಕರಿಸಬಹುದಾದ ಇಂಧನ ಬಜೆಟ್ ಅನ್ನು ಶೇ.53ರಷ್ಟು ಹೆಚ್ಚಿಸಿದೆ. ₹26,549 ಕೋಟಿ ಬಜೆಟ್‌ಗೆ ಏರಿದೆ. ಇದರಲ್ಲಿ ಹೆಚ್ಚಿನ ಪಾಲು ಪವನ ವಿದ್ಯುತ್‌ ಉತ್ಪಾದನೆಗೆ ಮೀಸಲಿರಿಸಲಾಗಿದೆ ಎಂದರು.

ಭಾರತದ ಪವನ ವಿದ್ಯುತ್ ಸಾಮರ್ಥ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಶೇ.10.5ಕ್ಕಿಂತ ಹೆಚ್ಚಾಗಿದ್ದು, 51.5 ಗಿಗಾವ್ಯಾಟ್‌ಗೆ ತಲುಪಿದೆ. ಇದರೊಂದಿಗೆ ದೇಶದ ನವೀಕರಿಸಬಹುದಾದ ಇಂಧನ ವಲಯ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ದೇಶದ ಸುಸ್ಥಿರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಪ್ರತಿ ವರ್ಷ ಶೇ.17.13 ರಷ್ಟು ಹೆಚ್ಚಾಗುತ್ತಿದೆ. ಸದ್ಯ 226.74 ಗಿಗಾವ್ಯಾಟ್‌ ತಲುಪಿದೆ ಎಂದು ಹೇಳಿದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಗಾಧ ಸಾಧನೆಗೈಯ್ಯುತ್ತಿದೆ. ಜಾಗತಿಕವಾಗಿ 4ನೇ ಅತಿ ದೊಡ್ಡ ಪವನ ವಿದ್ಯುತ್ ಸ್ಥಾಪಿತ ಹಾಗೂ 3ನೇ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. 10 ವರ್ಷಗಳಲ್ಲಿ ಯಾರೂ ಊಹಿಸದ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಎಂದು ಸಚಿವ ಜೋಶಿ ಪ್ರತಿಪಾದಿಸಿದರು.

ದೇಶಾದ್ಯಂತ 24/7 ವಿದ್ಯುತ್ ಮತ್ತು ಗ್ರಿಡ್ ಸ್ಥಿರತೆಗಾಗಿ ನಾವು ಮೊದಲು ಪವನ ಶಕ್ತಿ ಮತ್ತು ಸೌರಶಕ್ತಿ ಸಂಗ್ರಹಣೆ (BESS) ಸಂಯೋಜಿಸಬೇಕು. ವಿದ್ಯುತ್‌ ಸುಂಕ ಸ್ಪರ್ಧಾತ್ಮಕವಾಗಿರಬೇಕಿದ್ದು, ಪ್ರತಿ ಯೂನಿಟ್‌ಗೆ ₹3.90 ದರ ತುಂಬಾ ಹೆಚ್ಚಾಗಿದೆ. ಹಾಗಾಗಿ ವೆಚ್ಚವನ್ನು ಕಡಿಮೆ ಮಾಡಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ಅಲ್ಲದೇ, ಸ್ವಂತ ಗುರಿಗಳನ್ನು ಪೂರೈಸಿಕೊಳ್ಳುವ ಜತೆಗೆ ವಿದ್ಯುತ್‌ ರಫ್ತು ಹೆಚ್ಚಿಸಲು ಉತ್ಪಾದನೆ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ವೃದ್ಧಿಸಲು ರಾಜ್ಯಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

*ಸಂಘಟಿತ ಪ್ರಯತ್ನ ಅಗತ್ಯ:*

ಭಾರತ 225 kW ನಿಂದ 5.2 MW ವರೆಗಿನ ಪವನ ಶಕ್ತಿ ಟರ್ಬೈನ್‌ಗಳನ್ನು ಉತ್ಪಾದಿಸುತ್ತಿದೆ. 14 ಕಂಪನಿಗಳು 33 ಮಾದರಿಗಳಲ್ಲಿ ಉತ್ಪಾದಿಸುತ್ತಿವೆ. ಈ ಟರ್ಬೈನ್‌ಗಳು ನಮ್ಮ ದೇಶೀಯ ಅಗತ್ಯಗಳನ್ನು ಪೂರೈಸುತ್ತವೆ ಮತ್ತು ಜಾಗತಿಕವಾಗಿ ವೆಚ್ಚ ಸ್ಪರ್ಧಾತ್ಮಕವಾಗಿದೆ ಎಂದು ಸಚಿವರು, ರಾಷ್ಟ್ರೀಯ ಪವನ ಶಕ್ತಿ ಸಾಮರ್ಥ್ಯವನ್ನು ಸಂಪೂರ್ಣ ಅನ್‌ಲಾಕ್‌ ಮಾಡಲು ರಾಷ್ಟ್ರೀಯವಾಗಿ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದರು.

ಪವನ ವಿದ್ಯುತ್‌ ಉತ್ಪಾದನೆ ಯೋಜನೆಯನ್ನು ಮಧ್ಯಪ್ರದೇಶ, ತೆಲಂಗಾಣ ಮತ್ತು ಒಡಿಶಾದಂತಹ ಹೊಸ ರಾಜ್ಯಗಳಿಗೂ ವಿಸ್ತರಿಸಲಾಗುವುದು. ಗುಜರಾತ್ ಮತ್ತು ತಮಿಳುನಾಡಿನಲ್ಲಿ 4GW ಉತ್ಪಾದನೆಗೆ ಸ್ಥಳ ಗುರುತಿಸಿ ಟೆಂಡರ್‌ ಸಿದ್ಧಪಡಿಸಲಾಗುತ್ತಿದೆ. ಪವನ ವಿದ್ಯುತ್‌ ಮತ್ತು ಹಸಿರು ವಿದ್ಯುತ್ ತಂತ್ರಗಳಲ್ಲಿ 24 ತಾಸೂ ಸಂಯೋಜಿಸಲಾಗಯತ್ತದೆ. ಗ್ರಿಡ್ ಆಧುನೀಕರಣ, ಸ್ಥಳೀಯವಾಗಿ ಪವನ ವಿದ್ಯುತ್‌ ಉತ್ಪಾದನೆ ಉತ್ತೇಜಿಸಲು ಪ್ರಮುಖ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ನವೀಕರಿಸಬಹುದಾದ ಇಂಧನ ವಲಯದಲ್ಲಿ ನಮ್ಮ ರಾಷ್ಟ್ರೀಯ ಗುರಿಗಳು ಮತ್ತು ಮಹತ್ವಾಕಾಂಕ್ಷೆ ಸ್ಪಷ್ಟವಾಗಿದೆ. 2030ರ ವೇಳೆಗೆ ನಮ್ಮ ವಿದ್ಯುತ್ ಸಾಮರ್ಥ್ಯದ ಶೇ.50ರಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಭರಿಸಲಾಗುತ್ತದೆ. 2070ರ ವೇಳೆಗೆ ಸಂಪೂರ್ಣ ಸಾಧನೆಯ ಗುರಿ ಹೊಂದಿದ್ದೇವೆ. ಪವನ ಶಕ್ತಿ ಈ ಗುರಿ ಸಾಧನೆ ಮತ್ತು ಆತ್ಮನಿರ್ಭರ ಭಾರತದ ಕೇಂದ್ರಬಿಂದುವಾಗಿರಲಿದೆ ಎಂದರು.

*ಜಾಗತಿಕ ಉತ್ಪಾದನಾ ಹಬ್‌ ಆಗಲಿದೆ ಭಾರತ:*

ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಉತ್ಪಾದನಾ ಹಬ್‌ ಆಗುವಲ್ಲಿ ನವೀಕರಿಸಬಹುದಾದ ಇಂಧನ ವಲಯವೂ ಮಹತ್ತರ ಕೊಡುಗೆ ನೀಡಲಿದೆ. ದೇಶದ ಉತ್ಪಾದನಾ ವಲಯಕ್ಕೆ ಅಗತ್ಯ ಇಂಧನ ಬೇಡಿಕೆ ಪೂರೈಸುವಲ್ಲಿ ಸೌರ ಶಕ್ತಿ, ಪವನ ಶಕ್ತಿ, ಹಸಿರು ಇಂಧನ ಮೂಲಗಳಿಂದ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಸಚಿವ ಪ್ರಲ್ಹಾದ ಜೋಶಿ.

ಸಮ್ಮೇಳನದಲ್ಲಿ ಪವನ ವಿದ್ಯುತ್‌ ಉತ್ಪಾದನೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ರಾಜ್ಯಗಳನ್ನು ಪುರಸ್ಕರಿಸಲಾಯಿತು. ಸಚಿವ ಪ್ರಲ್ಹಾದ ಜೋಶಿ ಅವರು ಪವನ ಶಕ್ತಿ ಮಾರ್ಗಸೂಚಿ ಮತ್ತು ಉತ್ಪಾದನಾ ಮಾರ್ಗಸೂಚಿ ವರದಿ ಬಿಡುಗಡೆ ಮಾಡಿದರು. ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೊ ನಾಯಕ್ ಮತ್ತು ರಾಜ್ಯ ಇಂಧನ ಸಚಿವ ಕೆ.ಜಿ.ಜಾರ್ಜ್ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande