ಗದಗ, 14 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಭಾರಿ ಮಳೆ ಹಾಗೂ ಬೆಣ್ಣೆ ಹಳ್ಳದ ಆರ್ಭಟದಿಂದ ತೀವ್ರ ಹಾನಿಗೆ ಒಳಗಾಗಿದೆ. ಜಿಲ್ಲೆಯ ತಾಲೂಕುಗಳಲ್ಲಿ ಇತ್ತೀಚೆಗೆ ಸುರಿದ ಅತಿಯಾದ ಮಳೆಯಿಂದಾಗಿ ಹಾಗೂ ಬೆಣ್ಣೆ ಹಳ್ಳ ಸೇರಿದಂತೆ ಹಲವಾರು ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ರೈತರ ಬೆಳೆಗಳು ಹಾಗೂ ಪಂಪ್ಸೆಟ್ಗಳು ಸಂಪೂರ್ಣ ಜಲಾವೃತವಾಗಿವೆ.
ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಯಾವಗಲ್, ಹೊಳೆ ಹಡಗಲಿ, ಹೊಳೆ ಆಲೂರು ಗ್ರಾಮಗಳಲ್ಲಿ ಬೆಣ್ಣೆ ಹಳ್ಳದ ದಡದ ಭಾಗದಲ್ಲಿರುವ ರೈತರ ಪಂಪ್ ಸೆಟ್ಗಳು ನೀರಿನಲ್ಲಿ ಮುಳುಗಿದ್ದು, ಸಾವಿರಾರು ರೂಪಾಯಿಗಳ ಹಾನಿಯಾಗಿದೆ. ರೈತರು ನೀರಾವರಿ ಸಲಕರಣೆಗಳ ಮರುಸ್ಥಾಪನೆಗೆ ಹೆಚ್ಚಾದ ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿಲ್ಲ. “ಪ್ರತಿ ವರ್ಷ ಹಳ್ಳ ಉಕ್ಕಿ ಹರಿದಾಗ ಇಂತಹ ಪರಿಸ್ಥಿತಿ ಉಂಟಾಗುತ್ತೆ. ಈ ಸಲವೂ ನಮ್ಮ ಪಂಪ್ ಸೆಟ್ ಹಾಳಾಗಿದೆ,” ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳದ ಆರ್ಭಟದ ಹಿನ್ನಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ ಕಬ್ಬು, ಹೆಸರು, ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.
ಇದೇ ರೀತಿಯಲ್ಲಿ ಗಜೇಂದ್ರಗಡ ತಾಲೂಕಿನ ದ್ಯಾಮುಣಸಿ ಗ್ರಾಮದ ಹತ್ತಿರದ ಹಳ್ಳ ಕೂಡ ಉಕ್ಕಿ ಹರಿಯುತ್ತಿದ್ದು, ಗ್ರಾಮೀಣ ರಸ್ತೆ ಸಂಪರ್ಕ ಸಂಪೂರ್ಣ ಕಳೆದುಕೊಂಡಿದೆ. ಸಾರಿಗೆ ಸಂಸ್ಥೆಯ ಬಸ್ಗಳು ಹಳ್ಳದ ಪಕ್ಕದಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಪಾಯದ ಪರಿಸ್ಥಿತಿಯಲ್ಲಿ ಹಳ್ಳ ದಾಟುತ್ತಿದ್ದಾರೆ. ಅಬ್ಬರದ ಮಳೆಯಿಂದ ಗ್ರಾಮದಿಂದ ಗ್ರಾಮಕ್ಕೆ ಸಂಚಾರವೇ ಕಷ್ಟಕರವಾಗಿದೆ.
ಈ ಎಲ್ಲಾ ನೈಸರ್ಗಿಕ ತೊಂದರೆಗಳಿಂದಾಗಿ ರೈತರು ತಮ್ಮ ಇಡೀ ಭವಿಷ್ಯವನ್ನು ನಿರೀಕ್ಷಿಸಿದ ಬೆಳೆಗಳು ನಾಶವಾಗಿರುವುದರಿಂದ ತೀವ್ರ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದದಿಂದ ಶೀಘ್ರ ಪರಿಹಾರ, ವಿಮಾ ಮೊತ್ತ ಬಿಡುಗಡೆ ಹಾಗೂ ತುರ್ತು ನೆರವು ಕಾರ್ಯಾಚರಣೆ ನಡೆಯಬೇಕೆಂದು ರೈತ ಸಮೂಹಗಳು ಆಗ್ರಹಿಸುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / Lalita MP