ಬಳ್ಳಾರಿ, 12 ಜೂನ್ (ಹಿ.ಸ.) :
ಆ್ಯಂಕರ್ : ಕಳೆದ 11 ವರ್ಷಗಳಲ್ಲಿ 193 ಇಡಿ (ಜಾರಿ ನಿರ್ದೇಶನಾಲಯ) ದಾಳಿಗಳು ನಡೆದಿದ್ದು, ಎರಡದಲ್ಲಿ ಮಾತ್ರ ಶಿಕ್ಷೆಯಾಗಿದ್ದು ಒಟ್ಟು ಪ್ರಕರಣಗಳಲ್ಲಿ ಶೇ. 98 ರಷ್ಟು ವಿರೋಧ ಪಕ್ಷಗಳನ್ನೇ ಗುರಿ ಮಾಡಿಕೊಂಡು ತನಿಖೆ ನಡೆಸಿರುವ ಇಡಿ, ಐಟಿ, ಸಿಬಿಐ ಸೇರಿ ವಿವಿಧ ಏಜೆನ್ಸಿಗಳನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ದುರ್ಬಳಕೆ ಮಾಡಿಕೊಂಡು ರಾಜಕೀಯ ಪ್ರತೀಕಾರವನ್ನು ತೋರುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಳ್ಳಾರಿ ಸಂಸದ ಇ. ತುಕಾರಾಂ, ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್, ಜೆ.ಎನ್. ಗಣೇಶ್, ನಾರಾ ಭರತರೆಡ್ಡಿ ಮತ್ತು ಬಿ. ನಾಗೇಂದ್ರ ಅವರ ಮೇಲೆ ಬೆದರಿಕೆ ತಂತ್ರವನ್ನು ಬಿಜೆಪಿ ಬಳಸುತ್ತಿದೆ. ಈ ಜನಪ್ರತಿನಿಧಿಗಳು ಉತ್ತಮ ಆಡಳಿತ ನೀಡುತ್ತಿದ್ದು, ಇವರ ಜನಪ್ರಿಯತೆಯನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಹಿಸುತ್ತಿಲ್ಲ ಎಂದರು.
ಕರ್ನಾಟಕದಲ್ಲಿ ದಲಿತರು, ಅದರಲ್ಲೂ ಎಸ್ಸಿ - ಎಸ್ಟಿ, ಒಬಿಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪರವಾಗಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರ ದಲಿತ ಮತ್ತು ಒಬಿಸಿ ಶಾಸಕರನ್ನು ಗುರಿ ಮಾಡಿಕೊಂಡು ಇಡಿ ದಾಳಿ ಮಾಡಿರುವುದು ಖಂಡನೀಯ. ಕಾಂಗ್ರೆಸ್ನಲ್ಲಿ ಎಸ್ಸಿ ಮತ್ತು ಎಸ್ಟಿಗಳ ನಾಯಕತ್ವ ದಿನೇ ದಿನೇ ಗಟ್ಟಿಗೊಳ್ಳುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಎಸ್ಸಿ -ಎಸ್ಟಿ ಮತ್ತು ಒಬಿಸಿ ಮತಗಳ ಭದ್ರಕೋಟೆ ರೂಪುಗೊಂಡಿದೆ. ಕಾರಣ ಕರ್ನಾಟಕದ ಕಾಂಗ್ರೆಸ್ ಪಕ್ಷದ ಶಾಸಕರು ಇಡಿ, ಸಿಬಿಐ ಮತ್ತು ಐಟಿ ಇನ್ನಿತರೆ ತನಿಖೆಗಳಿಗೆ ಒಳಗಾಗುತ್ತಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರನ್ನು ಬೆದರಿಸುವ, ನಿರುತ್ಸಾಹಗೊಳಿಸುವ - ನಿಸ್ತೇಜಗೊಳಿಸುವ, ಅಭದ್ರಗೊಳಿಸುವ ಕೆಲಸವನ್ನು ಬಿಜೆಪಿ ನಿರಂತರ ನಡೆಸುತ್ತಿದೆ. ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಒಡೆಯಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ, ಒಂದಾಗಿದ್ದೇವೆ. ಮುಂದಿನ ದಿನಗಳಲ್ಲಿ, ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಆಗ, ವಿರೋಧ ಪಕ್ಷಗಳನ್ನು ನ್ಯಾಯಯುತವಾಗಿ - ಜನಸಮ್ಮತವಾಗಿ ಗೌರಿಸುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ. ಮಾನಯ್ಯ, ಮೇಯರ್ ಮುಲ್ಲಂಗಿ ನಂದೀಶ್, ಎಪಿಎಂಸಿ ಅಧ್ಯಕ್ಷ ಕಟ್ಟೇಮನಿ ನಾಗೇಂದ್ರ, ಬಗರ್ ಹುಕುಂ ಅಧ್ಯಕ್ಷ ಎಚ್. ತಿಮ್ಮನಗೌಡ, ಮುಖಂಡರಾದ ಬಿ. ರಾಂಪ್ರಸಾದ್, ಕಲ್ಲುಕಂಭ ಪಂಪಾಪತಿ, ವೆಂಕಟೇಶ್ ಹೆಗಡೆ ಸೇರಿ ಅನೇಕರು ವೇದಿಕೆಯಲ್ಲಿದ್ದರು.
ಮೌನಾಚರಣೆ
ಏರ್ ಇಂಡಿಯಾ ವಿಮಾನ ದುರ್ಘಟನೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಆಚರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್