ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ : ಮುಖ್ಯಮಂತ್ರಿ
ಬೆಂಗಳೂರು, 12 ಜೂನ್ (ಹಿ.ಸ.) : ಆ್ಯಂಕರ್ : ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹತ್ತು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ 1995 ಸೆಕ್ಷನ್ 11 (2) ರಂತೆ ಮರುಸಮೀಕ್ಷೆ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ
Cabinet meeting


ಬೆಂಗಳೂರು, 12 ಜೂನ್ (ಹಿ.ಸ.) :

ಆ್ಯಂಕರ್ : ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹತ್ತು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ 1995 ಸೆಕ್ಷನ್ 11 (2) ರಂತೆ ಮರುಸಮೀಕ್ಷೆ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಹಿಂದುಳಿದ ಜಾತಿಗಳ ಶಾಶ್ವತ ಆಯೋಗ ಸಲ್ಲಿಸಿರುವ ವರದಿಯ ಮೇಲೆ ಇಂದು ಅಂತಿಮವಾಗಿ ಚರ್ಚೆ ಮಾಡಲು ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಇಂದು ಒಂದೇ ವಿಷಯದ ಮೇಲೆ ಚರ್ಚೆ ಮಾಡಲಾಗಿದೆ ಎಂದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು 54 ಮಾನದಂಡಗಳನ್ನು ಇಟ್ಟುಕೊಂಡು ಕೈಗೊಂಡು ಮನೆ ಮನೆಗೆ ಭೇಟಿ ನೀಡಿ ಸಲ್ಲಿಸಿರುವ ವರದಿಯಾಗಿದೆ. 2011 ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 6.11 ಕೋಟಿ ಜನರಿದ್ದರು. ಈ ಜನಸಂಖ್ಯೆ 2015 ರ ವೇಳೆಗೆ 6.35 ಕೋಟಿ ಎಂದು ಅಂದಾಜಿಸಲಾಗಿದೆ. 5.98 ಕೋಟಿ ಜನರು ಸಮೀಕ್ಷೆಗೆ ಒಳಪಟ್ಟಿದ್ದಾರೆ. ಸಮೀಕ್ಷೆ ಪ್ರಾರಂಭವಾಗಿದ್ದು 11.4.2015 ರಂದು ಹಾಗೂ 30-5-2015 ರಂದು ಮುಕ್ತಾಯವಾಗಿದೆ. 1.60 ಲಕ್ಷ ಸಿಬ್ಬಂದಿ ಹಾಗೂ 1.33 ಲಕ್ಷ ಉಪಾಧ್ಯಾಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಹಿಂದೆ 2013-2018 ರವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವರದಿ ಮತ್ತು ಅದರ ಶಿಫಾರಸ್ಸುಗಳು ಅಂತಿಮಗೊಂಡಿರಲಿಲ್ಲ. 2018 ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾದರು. ಪುಟ್ಟರಂಗಶೆಟ್ಟರು ಅವರು ಹಿಂದುಳಿದ ವರ್ಗಗಳ ಸಚಿವರಾದರು. ಆ ವೇಳೆಗೆ ವರದಿ ಪೂರ್ಣಗೊಂಡಿತ್ತು. ಅಂದಿನ ಆಯೋಗದ ಅಧ್ಯಕ್ಷರಾದ ಕಾಂತರಾಜು ಹಾಗೂ ಸದಸ್ಯರು ಸಚಿವ ಪುಟ್ಟರಂಗಶೆಟ್ಟರನ್ನು ಭೇಟಿ ಮಾಡಿ ವರದಿ ಪಡೆಯಬೇಕು ಎಂದು ಕೋರಿದಾಗ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಒತ್ತಡ ಹಾಕಿ ವರದಿಯನ್ನು ಪಡೆಯಬಾರದು ಎಂದಿದ್ದರಿಂದ ಅವರು ವರದಿ ಪಡೆಯಲಿಲ್ಲ. ಕಾಂತರಾಜು ಅವರ ಅವಧಿ ಮುಗಿದ ನಂತರ ಜಯಪ್ರಕಾಶ್ ಹೆಗಡೆಯವರನ್ನು ಬಿಜೆಪಿ ಸರ್ಕಾರ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಸದಸ್ಯರೂ ಕೂಡ ಬಿಜೆಪಿಯವರೇ ಆಗಿದ್ದರು. ಜಯಪ್ರಕಾಶ್ ಹೆಗಡೆಯವರು ಸಮೀಕ್ಷೆಯ ದತ್ತಾಂಶಗಳ ಆಧಾರದ ಮೇಲೆ ಶಿಫಾರಸ್ಸು ಮಾಡಿದರು. ಶಿಫಾರಸ್ಸುಗಳನ್ನು 29-2-2024 ರಂದು ಸರ್ಕಾರಕ್ಕೆ ಸಲ್ಲಿಸಿದರು. ಕಾಂತರಾಜು ಅವರು ಕೂಡ ಈ ಸಂದರ್ಭದಲ್ಲಿ ಇದ್ದರು ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಬಂದಿದ್ದರಿಂದ ವರದಿಯ ಬಗ್ಗೆ ಚರ್ಚೆ ಮಾಡಲಾಗಲಿಲ್ಲ. ನಂತರ ನಮ್ಮ ಸರ್ಕಾರ ವರದಿಯನ್ನು ಪಡೆದು 2025 ರಲ್ಲಿ ಸಚಿವ ಸಂಪುಟದಲ್ಲಿ ಮಂಡಿಸಲಾಗಿದೆ. ಸಚಿವ ಸಂಪುಟದಲ್ಲಿ ಮಂತ್ರಿ ಮಂಡಲದ ಸದಸ್ಯರು ಅಭಿಪ್ರಾಯಗಳನ್ನು ನೀಡಿದ್ದಾರೆ. ಅಂತಿಮವಾಗಿ ಇಂದು ವರದಿಯ ಬಗ್ಗೆ ಚರ್ಚೆ ಮಾಡಿದೆ ಎಂದರು.

ಪಕ್ಷದ ವರಿಷ್ಠರು ನನ್ನನ್ನು ಮತ್ತು ಉಪಮುಖ್ಯಮಂತ್ರಿಗಳನ್ನು ಕರೆದು ವರದಿ ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ಕಾನೂನು ಪ್ರಕಾರ ಅನೇಕ ಬದಲಾವಣೆಗಳು ಮತ್ತು ಬೆಳವಣಿಗೆಗಳು ಆಗಿರುತ್ತವೆ ಎಂದು ಸಲಹೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ತಿದ್ದುಪಡಿ ವಿಧೇಯಕ (2014) ಸೆಕ್ಷನ್ 11 ಕಲಂ (1) ರಂತೆ ರಾಜ್ಯ ಸರ್ಕಾರವು ಯಾವುದೇ ಸಮಯದಲ್ಲಿ ಈ ಅಧಿನಿಯಮ ಜಾರಿಗೆ ಬಂದ ದಿನಾಂಕದಿಂದ 10 ವರ್ಷಗಳ ಅವಧಿ ಮುಕ್ತಾಯವಾದಾಗ, ಮತ್ತು ಅದರ ನಂತರ ಬರುವ ಪ್ರತಿ 10 ವರ್ಷಗಳು ಮುಕ್ತಾಯವಾಗುವಾಗ ಹಿಂದುಳಿದ ವರ್ಗವಾಗಿ ಉಳಿಯದೇ ಹೋಗಿರುವ ವರ್ಗಗಳನ್ನು ಪಟ್ಟಿಯನ್ನು ತೆಗೆದುಹಾಕುವುದು ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಪಟ್ಟಿಗೆ ಸೇರಿಸುವದು ಎಂದು ಸ್ಪಷ್ಟವಾಗಿದೆ ಹೇಳಿದೆ. ಕಲಂ 2 ರಲ್ಲಿ ಹೇಳಿದಂತೆ ಆಯೋಗದ ಅಧ್ಯಕ್ಷರಾದ ಮಧುಸೂದನ ನಾಯಕ್ ಅವರ ಸಲಹೆಯನ್ನೂ ಪಡೆಯಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande