15 Jun 2025, 13:57 HRS IST

ರಾಯಚೂರು ಆಕಾಶವಾಣಿ ಮುಖ್ಯಸ್ಥ ಡಾ.ವಿ.ಜಿ.ಬಾವಲತ್ತಿ ಅವರಿಗೆ ಬೀಳ್ಕೊಡುಗೆ
ರಾಯಚೂರು, 30 ಮೇ (ಹಿ.ಸ.) : ಆ್ಯಂಕರ್ : ಆಕಾಶವಾಣಿಯಲ್ಲಿ ಕೃಷಿ ಕಾರ್ಯಕ್ರಮಗಳಿಗೆ ಖ್ಯಾತರಾಗಿರುವ ರಾಯಚೂರು ಆಕಾಶವಾಣಿ ಮುಖ್ಯಸ್ಥ ಡಾ.ವಿ.ಜಿ. ಬಾವಲತ್ತಿ ಅವರಿಗೆ ಆಕಾಶವಾಣಿಯಿಂದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭವು ಮೇ 29ರಂದು ರಾಯಚೂರಿನಲ್ಲಿ ಹೃದಯಸ್ಪರ್ಶಿಯಾಗಿ ನೆರವೇರಿತು. ತಳಿರು ತೋರಣದಿಂದ
e46e46099498c2155d22616ba8d048af_535561553.jpg


eeb0c36953d0414b36403b00253b1f4f_1818178865.jpg


ರಾಯಚೂರು, 30 ಮೇ (ಹಿ.ಸ.) :

ಆ್ಯಂಕರ್ : ಆಕಾಶವಾಣಿಯಲ್ಲಿ ಕೃಷಿ ಕಾರ್ಯಕ್ರಮಗಳಿಗೆ ಖ್ಯಾತರಾಗಿರುವ ರಾಯಚೂರು ಆಕಾಶವಾಣಿ ಮುಖ್ಯಸ್ಥ ಡಾ.ವಿ.ಜಿ. ಬಾವಲತ್ತಿ ಅವರಿಗೆ ಆಕಾಶವಾಣಿಯಿಂದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭವು ಮೇ 29ರಂದು ರಾಯಚೂರಿನಲ್ಲಿ ಹೃದಯಸ್ಪರ್ಶಿಯಾಗಿ ನೆರವೇರಿತು.

ತಳಿರು ತೋರಣದಿಂದ ಅಲಂಕೃತಗೊಳಿಸಿದ್ದ ಎತ್ತಿನ ಬಂಡಿಯಲ್ಲಿ ಡಾ.ವಿ.ಜಿ. ಭಾವಲತ್ತಿ ದಂಪತಿ ಮತ್ತು ಪರಿವಾರದವರನ್ನು ಕೂಡಿಸಿ ಕಾರ್ಯಕ್ರಮ ಸ್ಥಳಕ್ಕೆ ಮೆರವಣಿಗೆಯೊಂದಿಗೆ ಗೌರವದಿಂದ ಕರೆತಂದಿದ್ದು ವಿಶೇಷವಾಗಿತ್ತು.

ಇಂದಿನ ಆಧುನೀಕತೆಯ ಕಾಲದಲ್ಲಿ ಎತ್ತು ಬಂಡಿಗಳು ಕಣ್ಮರೆಯಾಗಿರುವಾಗ ಗ್ರಾಮೀಣ ಶೈಲಿಯಲ್ಲಿ ಮೆರವಣಿಗೆ ನಡೆದಿರುವುದನ್ನು ಸಾರ್ವಜನಿಕರು ಕಣ್ತುಂಬಿಕೊಂಡು ಅಭಿನಂದಿಸಿದರು.

ಬಳಿಕ ಆಕಾಶವಾಣಿಯ ಆವರಣದಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಡಾ.ಬಾವಲತ್ತಿ ಅವರಿಗೆ ನಡೆದ ಬೀಳ್ಕೊಡುಗೆ ಹಾಗು ಅಭಿನಂದನಾ ಸಮಾರಂಭವನ್ನು ಬಾವಲತ್ತಿ ಅವರ ಸಹಪಾಠಿಗಳಾಗಿರುವ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ಎಂ.ಹನುಮಂತಪ್ಪ ಅವರು ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಈ ವೇಳೆ ಹನುಮಂತಪ್ಪ ಅವರು ಮಾತನಾಡಿ, ಅಧಿಕಾರ ದೊಡ್ಡದಲ್ಲ ಅಭಿಮಾನ ದೊಡ್ಡದು ಎಂಬಂತೆ ಅಪಾರ ರೈತಾಪಿ ವರ್ಗ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿಮಾನಿಗಳನ್ನು ಹೊಂದಿದ ಡಾ. ವಿ.ಜಿ ಬಾವಲತ್ತಿ ಅವರು ಆಕಾಶವಾಣಿಯಲ್ಲಿ ಅನೇಕ ರೈತರ ಕಾರ್ಯಕ್ರಮಗಳನ್ನು ನೀಡಿ ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಬಾವಲತ್ತಿ ಅವರು ನಾನು ಸಹಪಾಠಿಗಳಾಗಿದ್ದು, ಇಬ್ಬರೂ ಕೃಷಿ ಪದವಿ ಪಡೆದುಕೊಂಡೆವು. ಅವರು ಆಕಾಶವಾಣಿಗೆ ಸೇವೆಯಲ್ಲಿ ಸೇರಿ ರೈತಪರ ಕಾರ್ಯಕ್ರಮಗಳನ್ನು ಮಾಡುತ್ತಾ ಕೃಷಿ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರ ಜೊತೆ ಕೃಷಿ ವಿವಿಯ ವಿಭಾಗಗಳ ಪ್ರಾಧ್ಯಾಪಕರೊಂದಿಗೆ ಅನೇಕ ಸಂದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರಿಗೆ ನಿಖರವಾದ ಮಾಹಿತಿ ನೀಡಿದ್ದಾರೆ. ಅವರ ಕೃಷಿ ಕಾರ್ಯಕ್ರಮಗಳು ಸೇರಿದಂತೆ ಜನಪದ, ಆರೋಗ್ಯ ಹಾಗೂ ಕ್ಷೇತ್ರಗಳ ಕುರಿತ ಕಾರ್ಯಕ್ರಮಗಳಿಂದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ 30 ವರ್ಷಗಳ ಸುಧೀರ್ಘ ಪಯಣಕ್ಕೆ ಅವರ ಧರ್ಮಪತ್ನಿ ಅವರ ಸಹಕಾರ ಮೆಚ್ಚುವಂತಹದ್ದು ಅವರ ನಿವೃತ್ತ ಜಿವನ ಸುಖಕರವಾಗಿರಲಿ ಅವರ ಸೇವೆ ಕೃಷಿ ಕ್ಷೇತ್ರಕ್ಕೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಕಾಶವಾಣಿ ನಿವೃತ್ತ ಮುಖ್ಯಸ್ಥರಾದ ಆಂಜನಪ್ಪ ಅವರು ಮಾತನಾಡಿ, ನನಗೆ ನನ್ನ ಅಧಿಕಾರವಧಿಯಲ್ಲಿ 17 ಬಾರಿ ವರ್ಗಾವಣೆ ಮಾಡಲಾಗಿದೆ. ಒಬ್ಬ ಅಧಿಕಾರಿ ಒಂದೇ ಸ್ಥಳದಲ್ಲಿ ಸತತ 30 ವರ್ಷಗಳ ಸೇವೆಯಲ್ಲಿ ಯಾವುದೇ ಮನಸ್ತಾಪ, ಅಸಮಾಧಾನ ಹಾಗೂ ಸಿಬ್ಬಂದಿಯ ಜೊತೆ ಅಪಸ್ವರವಿಲ್ಲದೇ ಡಾ. ವಿ.ಜಿ ಬಾವಲತ್ತಿ ಅವರು ಸೇವೆ ಸಲ್ಲಿಸಿರುವುದು ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವುದು ಅತ್ಯಂತ ಆಶ್ಚರ್ಯವಾಗಿದೆ. ಅವರ ಸರಳ ಹಾಗೂ ಮೃದು ವ್ಯಕ್ತಿತ್ವ, ಅಧಿಕಾರಿ ಎಂಬ ಅಹಂ ಇಲ್ಲದೇ ಎಲ್ಲಾ ಸಿಬ್ಬಂದಿಯನ್ನು ಸೌಜನ್ಯ ಮತ್ತು ಸ್ನೇಹಮಯವಾಗಿ ಕಾಣುವ ಅವರ ಸ್ವಭಾವ ಅವರನ್ನು 30 ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಅಭಿಮಾನಿಗಳ ಪ್ರೀತಿ ಕಟ್ಟಿಹಾಕಿದೆ. ಇಂದು ಅವರ ನಿವೃತ್ತಿ ಜೀವನದ ಕಾರ್ಯಕ್ರಮ ನಾನು ಊಹಿಸಲಾಗದಷ್ಟು ವಿಜೃಂಭಣೆಯಾಗಿ ಜರುಗಿರುವುದು ಆಕಾಶವಾಣಿ ಇತಿಹಾಸದಲ್ಲೇ ಮೊದಲು ಆಗಿರಬಹುದು ಎಂದರು.

ನಿವೃತ್ತ ಆಕಾಶವಾಣಿ ಮುಖ್ಯಸ್ಥರಾದ ಬಸವರಾಜ ಜಡಿ ಅವರು ಮಾತನಾಡಿ, ಡಾ. ವಿ.ಜಿ ಭಾವಲತ್ತಿ ಅವರ ಸ್ವಭಾವ ಮತ್ತು ಅವರ ಸರಳತೆಗೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವುದು ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಯಾವುದೇ ಕ್ಷೇತ್ರಗಳು ಮುಖ್ಯವಾದರೂ ಪಂಚಭೂತಗಳ ಕ್ಷೇತ್ರ ಕೃಷಿ ಕ್ಷೇತ್ರವಾಗಿದೆ. ಆಧುನೀಕತೆ ಹೆಸರಲ್ಲಿ ಇತ್ತೀಚಿನ ದಿನಗಳಲ್ಲಿ ಬಹುತೇಕ ರಾಸಾಯನಿಕ ಬಳಕೆಯಿಂದ ಕೃಷಿ ಕ್ಷೇತ್ರದ ಅವನತಿಯ ಭೀತಿ ಹೆಚ್ಚಾಗುತ್ತಿದೆ . ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅನ್ನದಾತನಿಲ್ಲದೇ ಕರಿಬೇವಿನ ಸೊಪ್ಪಿಗೂ ಅತ್ಯಂತ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಕೃಷಿಯಲ್ಲಿ ಸಾವಯವ ಪದ್ದತಿ ಹೆಚ್ಚಾಗಿ ಭೂಮಿಯ ಫಲವತ್ತತೆ ಕಾಪಾಡುವಲ್ಲಿ ರೈತರಿಗೆ ಉತ್ತಮ ಮಾಹಿತಿ ಮತ್ತು ಸಲಹೆ ನೀಡಿ ಕೃಷಿ ಕ್ಷೇತ್ರವನ್ನು ಕಾಪಾಡಬೇಕಾಗಿದೆ. ಅಂತಹ ಕಾರ್ಯದಲ್ಲಿ ಡಾ.ವಿ.ಜಿ ಬಾವಲತ್ತಿ ಅವರ ಸೇವೆ ಶ್ಲಾಘನೀಯವಾಗಿದ್ದು ಅವರ ಮನಸ್ಸು ಪರಿಶುದ್ಧವಾಗಿದ್ದು ಅವರ ಸೇವೆಯಿಂದ ಅಪಾರ ರೈತಾಪಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ವೈದ್ಯಕೀಯ, ಸಾಹಿತ್ಯ ಮತ್ತು ಸಂಗೀತ, ಶಿಕ್ಷಣ, ಬ್ಯಾಂಕ್ ಮತ್ತು ಮಾಧ್ಯಮ ಸೇರಿದಂತೆ ನಾನಾ ಕ್ಷೇತ್ರದ ಮಹನೀಯರು ಕಾರ್ಯಕ್ರಮಲ್ಲಿ ಶುಭ ಹಾರೈಸಿಲು ಆಗಮಿಸಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ವಿ.ಜಿ. ಬಾವಲತ್ತಿ ಅವರು, 1994ರಲ್ಲಿ ಸೇವೆಯಲ್ಲಿ ಸೇರಿದ ನನಗೆ ಮೇ 29ಕ್ಕೆ 30 ವರ್ಷಗಳು ಸಂದಿವೆ ಎಂದಾದರೆ ನಂಬಲು ಅಸಾಧ್ಯವಾಗಿದ್ದು, 30 ವರ್ಷಗಳು ಕೇವಲ 3 ಗಂಟೆಯಂತೆ ಕಳೆದುಹೋಗಿವೆ. ಇದಕ್ಕೆ ಈ ಭಾಗದ ರೈತರು, ಸಿಬ್ಬಂದಿ ಹಾಗೂ ಇಲ್ಲಿನ ಮಣ್ಣಿನ ಮೇಲಿನ ಆಸಕ್ತಿ ಮತ್ತು ಎಲ್ಲರ ಅಭಿಮಾನದಿಂದಾಗಿ ನಾನು ಬೇರೆಡೆ ವರ್ಗಾವಣೆ ಕೋರುವ ಅವಕಾಶವೇ ಬರಲಿಲ್ಲ. ಅದಕ್ಕೆ ಸದಾ ಚಿರ ಋಣಿಯಾಗಿದ್ದೇನೆ. ನನ್ನ ಅಧಿಕಾರವಧಿಯಲ್ಲಿ ಯಾರೊಂದಿಗೂ ಮನಸ್ಥಾಪವಿಲ್ಲದೆ ಎಲ್ಲರ ಸಹಕಾರ ಹಾಗೂ ಪ್ರೀತಿ ಲಭಿಸಿದೆ. ಈ ಭಾಗದಲ್ಲಿಯೇ ನನ್ನ ಧರ್ಮಪತ್ನಿ ದೊರಕಿರುವುದು ನಾನು ಈ ಭಾಗವನ್ನು ಎಂದಿಗೂ ಮೆರಯಲು ಸಾಧ್ಯವಿಲ್ಲ ಎಂದರು. ಈ ಭಾಗದ ಕೃಷಿ ಕ್ಷೇತ್ರದ ಅಭಿವೃದ್ದಿಗಾಗಿ ರೈತರಿಗೆ ನಿಖರ ಮತ್ತು ಸಮರ್ಪಕ ಮಾಹಿತಿ ಸಲಹೆಯೊಂದಿಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ.

ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ ರೈತರ ಬೆಳೆ ವೀಕ್ಷಣೆ ಮಾಡಿ ಉತ್ತಮ ಇಳುವರಿಗೆ ಕೃಷಿ ಮತ್ತು ಕೀಟ ಅಧಿಕಾರಿಗಳೊಂದಿಗೆ ಸಂದರ್ಶನ ಮೂಲಕ ಸೂಕ್ತ ಸಲಹೆ ನೀಡಲು ಸಹಕಾರಿಯಾಗುವಂತೆ ಕಾರ್ಯಕ್ರಮಗಳನ್ನು ಮಾಡಿದ್ದೇನೆ ಎಂಬ ಮನಶಾಂತಿ ನನಗಿದೆ. ನಾನು ಈ ಭಾಗಕ್ಕೆ ಏನು ನೀಡಿದ್ದೇನೆ ಎಂಬುದು ಮುಖ್ಯವಲ್ಲ ಆದರೆ ಈ ಭಾಗದಿಂದ ಕೇವಲ ಧ್ವನಿ ಮೂಲಕ ನನ್ನನ್ನು ಕಾಣಲು ಬರುವ ಅನೇಕ ಅಭಿಮಾನಿ ರೈತರ ಅಭಿಮಾನದ ನುಡಿಗಳು ಹಾಗು ಅವರ ಪ್ರೀತಿಯನ್ನು ಪಡೆದಿದ್ದೇನೆ. ಇಂದು ಕಾರ್ಯಕ್ರಮಕ್ಕೆ ದೂರದ ಊರಿಂದ ನನ್ನನ್ನು ಹರಸಲು ಬಂದಿರುವ ಅನ್ನದಾತರಿಗೆ ಅಭಿನಂದನೆಗಳಲ್ಲದೇ ನಾನೇನು ಕೊಡಬಲ್ಲೆ. ನಾನು ನನ್ನ ನಿವೃತ್ತ ಜೀವನದಲ್ಲೂ ಕೃಷಿ ಕ್ಷೇತ್ರದಲ್ಲೇ ಸೇವೆ ಸಲ್ಲಿಸುತ್ತಾ ರೈತರೊಂದಿಗೆ ಸಂಪರ್ಕದಲ್ಲಿರುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ವೆಂಕಟೇಶ ಬೇವಿನಬೆಂಚಿ ಪ್ರಾಸ್ತಾವಿಕ ಮಾತನಾಡಿದರು. ಉದ್ಘೋಷಕರಾದ ವೆಂಕಟೇಶ ಹೂಗಾರ , ಶ್ರೀದೇವಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯ ಪತ್ರಕರ್ತ ಹಾಗೂ ಆಕಾಶವಾಣಿ, ಜಿಲ್ಲಾ ವಾರ್ತಾ ಪತ್ರ ಸುದ್ದಿ ಸಂಪಾದಕರಾದ ಬಿ. ವೆಂಕಟಸಿಂಗ್, ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಕಾಶವಾಣಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಅರವಿಂದ ಅವರು ವಹಿಸಿದ್ದರು.

ವೇದಿಕೆಯಲ್ಲಿ ಲೆಕ್ಕ ವಿಭಾಗದ ನಾಗರತ್ನ ಇದ್ದರು. ಕಾರ್ಯಕ್ರಮದಲ್ಲಿ ರಿಮ್ಸನ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ಪಾಚಾರ್ಯ ಡಾ.ಬಸವರಾಜ ಪಾಟೀಲ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ದೀಪಾ, ಕೃಷಿ ಇಲಾಖೆಯ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶಕುಮಾರ್ ಕೃಷಿ ವಿವಿಯ ವಿಜ್ಞಾನಿಗಳು, ವಾರ್ತಾ ಇಲಾಖೆಯ ಅಧಿಕಾರಿ ಗವಿಸಿದ್ದಪ್ಪ, ಸಹಕಾರ ಬ್ಯಾಂಕ್‍ನ ಅಧ್ಯಕ್ಷ ವಿಶ್ವನಾಥ್ ಪಾಟೀಲ್ ತೋರಣದಿನ್ನಿ ಸೇರಿದಂತೆ ಸಾಹಿತಿಗಳು, ಕಾಲೇಜು ಪ್ರಾಧ್ಯಾಪಕರು, ಆಕಾಶವಾಣಿ ತಾಂತ್ರಿಕ ಸಿಬ್ಬಂದಿ, ಉದ್ಗೋಷಕರು, ಸಿಬ್ಬಂದಿ, ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಉದ್ಘೋಷಕರಾದ ವಿರೇಶ್ ಪ್ರಾರ್ಥಿಸಿದರು. ಡಾ. ವಿಜೇಯೇಂದ್ರ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande