ಕೊಪ್ಪಳ, 29 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ನಗರದ ದೇವರಾಜ ಅರಸು ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಇವರು ಮಾತನಾಡಿ, ಪ್ರತಿ ವರ್ಷ ಮೇ-28 ರಂದು ವಿಶ್ವ ಮುಟ್ಟಿನ ನೈರ್ಮಲ್ಯ ದಿನ ಜಾಗೃತಿ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಇದರ ಉದ್ದೇಶ ಋತುಚಕ್ರ ನೈರ್ಮಲ್ಯದ (ಸ್ವಚ್ಛತೆ) ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದಾಗಿದೆ. ಮುಟ್ಟು ಇದೊಂದು ದೇವರು ಕೊಟ್ಟಂತಹ ನಿಸರ್ಗದ ಕೊಡುಗೆಯಾಗಿದೆ.
ಪ್ರತಿ ಹೆಣ್ಣು ಮಕ್ಕಳು ಸಂಭ್ರಮ ಪಡುವಂತಹ ವಿಷಯವಾಗಿದೆ. ಪ್ರತಿ ತಿಂಗಳು 28-30 ದಿನಗಳಿಗೊಮ್ಮೆ ಮುಟ್ಟಾಗುವುದು ಸಹಜ. ಇದು ಯಾವುದೇ ಶಾಪವಲ್ಲ. ದೇವರು ನೀಡಿದ ವರದಾನವಾಗಿದೆ. ಈ ಸಮಯದಲ್ಲಿ ಕೆಲವು ಹೆಣ್ಣು ಮಕ್ಕಳು ದೇವರ ಕೋಣೆಗೆ ಹೋಗುವುದು ನಿಷೇಧ, ಸಭೆ ಸಮಾರಂಭಗಳಲ್ಲಿ ಭಾಗವಹಿಸದಿರುವುದು, ಒಂದು ಕಡೆ ಕುಳಿತುಕೊಳ್ಳುವುದು, ಇನ್ನಿತರ ಮೂಢನಂಬಿಕೆಯಿಂದ ಬಳಲುತ್ತಾರೆ. ಇಂತಹ ಮೂಢನಂಬಿಕೆಗಳನ್ನು ಬಿಟ್ಟು ಹೊರಬಂದು ಸಹಜ ಪ್ರಕ್ರಿಯೆಂದು ತಿಳಿದುಕೊಳ್ಳಬೇಕು. ಮುಟ್ಟು ಸಹಜ ಪ್ರಕ್ರಿಯೆ, ಕಳಂಕವಲ್ಲ. ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡುವುದು ಅತೀ ಮುಖ್ಯವಾಗಿದೆ.
ಮುಟ್ಟಿನ ಸಮಯದಲ್ಲಿ ದಿನ-ನಿತ್ಯ ಸ್ನಾನ ಮಾಡಬೇಕು, ಸ್ಯಾನಿಟರಿ ಪ್ಯಾಡ್/ಸ್ವಚ್ಛವಾದ ಬಟ್ಟೆಯನ್ನು ಉಪಯೋಗಿಸಬೇಕು. ಬಟ್ಟೆಗಳನ್ನು ಸಾಬೂನಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಉಪಯೋಗಿಸಿದ ಸ್ಯಾನಿಟರಿ ಪ್ಯಾಡ್/ ಬಟ್ಟೆಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಈ ಸಮಯದಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಅದರಲ್ಲೂ ವಿಶೇಷವಾಗಿ ಕಬ್ಬಿಣಾಂಶ, ಕ್ಯಾಲ್ಸಿಯಂ ಇರುವ ಸೊಪ್ಪು ತರಕಾರಿಗಳನ್ನು ಉಪಯೋಗಿಸಬೇಕು ಎಂದು ತಿಳಿಸಿದರು.
ಕೊಪ್ಪಳ ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೋಹಿಣಿ ಕೊಟಗಾರ ಮಾತನಾಡಿ, ಮುಟ್ಟು ಮಹಿಳೆಯರಲ್ಲಿ ಒಂದು ನೈಸರ್ಗಿಕ ಪ್ರಕ್ರಿಯೆ. ಯುವತಿಯರಲ್ಲಿ ಮೊದಲನೇ ಮುಟ್ಟು 11 ರಿಂದ 16 ವರ್ಷದೊಳಗೆ ಯಾವಾಗಲಾದರೂ ಪ್ರಾರಂಭವಾಗಬಹುದು. ಮುಂದೆ 45-50ನೇ ವರ್ಷಕ್ಕೆ ಮುಟ್ಟು ನಿಲ್ಲುತ್ತದೆ. ಈ ಮದ್ಯದ ಅವಧಿಯಲ್ಲಿ ಮುಟ್ಟಿನ ಸ್ವಚ್ಛತೆ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ತಮ್ಮ ಆರೋಗ್ಯದ ಕಡೆ ಗಮನ ಹರಿಸುವಂತೆ ಮಾಹಿತಿ ನೀಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕರಿಗೆ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ. ಮಾತನಾಡಿ, ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಅನುಭವಿಸುವ ತೊಂದರೆ ಮತ್ತು ಪರಿಹಾರ ಕ್ರಮಗಳು, ಜನನಾಂಗ ಮಾರ್ಗದ ಸೋಂಕು ಹಾಗೂ ಲೈಂಗಿಕ ಸಂಪರ್ಕದ ಸೋಂಕುಗಳು ಬರದಂತೆ ಮುಂಜಾಗ್ರತೆ ವಹಿಸಬೇಕು. ಈ ಸಮಯದಲ್ಲಿ ಪೌಷ್ಠಿಕ ಆಹಾರ ಸೇವಿಸಬೇಕು. ಶಾರೀರಿಕ ಕಾಯಿಲೆಗಳು ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಬಿಸಿ ನೀರಿನಿಂದ ಸ್ನಾನ ಮಾಡಬೇಕು. ತಡೆಯಲಾರದ ನೋವು ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಪ್ರತಿ 2 ವರ್ಷಕೊಮ್ಮೆ ಗರ್ಭಕಂಠದ ಕ್ಯಾನ್ಸರ್ ಬರದಂತೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಪ್ಲಿಪ್ ಚಾರ್ಟ್ ಪುಸ್ತಕ ಬಳಸುವುದರ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶಿವಶರಣಪ್ಪ, ರೂಪಾ, ಮೇಲ್ವಿಚಾರಕರಾದ ಜಯಶ್ರೀ, ಬಸಮ್ಮ, ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ತಾಯಂದಿರು, ಕಿಶೋರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್