ಕಲಬುರಗಿ, 29 ಮೇ (ಹಿ.ಸ.)
ಒಬ್ಬ ದಲಿತ ನಾಯಕನನ್ನು ಮತ್ತು ಸಾಂವಿಧಾನಿಕ ಹುದ್ದೆಯಲ್ಲಿ ಇರುವವರನ್ನು ಮಟ್ಟ ಹಾಕುವ ಪ್ರಯತ್ನ ಮಾಡುತ್ತಿರುವ ಪ್ರಿಯಾಂಕ್ ಖರ್ಗೆಯವರು ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಮತ್ತು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ ಎಂದು ಮಾಜಿ ಜಿಲ್ಲಾಪಂಚಾತ ಅಧ್ಯಕ್ಷ ಅಂಬರಾಯ ಅಷ್ಠಗಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜ್ ಬೆಣ್ಣೂರ್ ಆರೋಪಿಸಿದರು.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 24ರಂದು ಕಲಬುರಗಿ ಚಲೋ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರು ಮತ್ತು ಸಂವಿಧಾನಿಕ ಹುದ್ದೆಯಲ್ಲಿರುವ ಎನ್.. ರವಿಕುಮಾರ ಇವರು ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಅಕ್ರಮ ಮರಳುಗಾರಿಗೆ, ಜೂಜುಗಳಂತಹ ಅಪರಾಧಿಕ ಪ್ರಕರಣಗಳ ಜೊತೆ, ಪೋಲಿಸ್ ಅಧಿಕಾರಿಗಳ ದುರ್ಬಳಕೆ ಖಂಡಿಸುತ್ತಾ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಕುಮ್ಮಕ್ಕಿನಿಂದ ಇಷ್ಟೊಂದು ಪ್ರಕರಣಗಳು ಜಿಲ್ಲೆಯಲ್ಲಿ ಆಗುತ್ತಿರುವುದಾಗಿ ಖಂಡಿಸಿರುತ್ತಾರೆ. ಎಲ್ಲೂ ಜಾತಿ ನಿಂದನೆ ಮಾಡಿರುವುದಿಲ್ಲ. ಆದರೆ ಸರ್ಕಾರದ ನಡೆಯನ್ನು ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಪ್ರಕರಣಗಳನ್ನು ಬಯಲಿಗೆ ಎಳೆಯುತ್ತಾರೆ ಮತ್ತು ನನ್ನ ನಿಜ ಬಣ್ಣ ಬಯಲು ಮಾಡಿ ಚಿತ್ತಾಪೂರದಲ್ಲಿ ನಡೆದ ಅಕ್ರಮ ಗಣಿಗಾರಿಕೆಯನ್ನು ರಾಜ್ಯಕ್ಕೆ ತೋರಿಸಿದ್ದಾರೆ ಎಂದು ಅವರನ್ನು ಮಟ್ಟ ಹಾಕಬೇಕೆಂದು ಸಾಮಾನ್ಯ ದಲಿತರ ರಕ್ಷಣೆಗಾಗಿ ಇರುವ ಆಟ್ರಾಸಿಟಿ ಕಲಂ ದುರ್ಬಳಕೆ ಮಾಡಿಕೊಂಡು ಸಂವಿಧಾನಿಕ ಹುದ್ದೆಯಲ್ಲಿರುವ ರವಿಕುಮಾರ ಇವರ ಮೇಲೆ ಸುಳ್ಳು ಆಟ್ರಾಸಿಟಿ ಕೇಸ್ ಹಾಕಿಸಿರುವುದು ಪ್ರಿಯಾಂಕ್ ಖರ್ಗೆಯವರ ದುರಂಹಕಾರ ಮತ್ತು ಸರ್ವಾಧಿಕಾರಿ ಧೋರಣೆ ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ದಬ್ಬಾಳಿಕೆ ರಾಜಕೀಯ ನಡೆಯುತ್ತಿದೆ. ಅದನ್ನ ಪ್ರಶ್ನಿಸಿದರೆ ಅವರ ಮೇಲೆ ಗುಂಡಾಗಿರಿ ಮಾಡುವ ಪ್ರವೃತಿ ಹೆಚ್ಚಾಗದೆ. ಛಲವಾದಿ ನಾರಾಯಣ ಸ್ವಾಮಿಯವರನ್ನು ನಾಲ್ಕುಗಂಟೆ ಕೂಡಿ ಹಾಕಿರೋದು ಖಂಡನಾರ್ಹ. ಇನ್ನು ಅವರ ನೆರವಿಗೆ ಧಾವಿಸಿರುವ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರು ಮತ್ತು ದಲಿತ ನಾಯಕರಾದ ಅಂಬಾರಾಯ ಅಷ್ಟಗಿ ಹಾಗೂ ಇವರ ಸಹೋದರ ಮೇಲೂ ಇದೇ ಗೂಂಡಾಗಳು ಹಲ್ಲೆ ಮಾಡಿರುವುದನ್ನು ಖಂಡಿಸಿ ಜೂನ್ 02ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ವಿಶಾಲ್ ದರ್ಗಿ, ಮುಖಂಡರಾದ ಗಣೇಶ ವಳಕೇರಿ, ಮರೆಪ್ಪ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Samarth biral