ಕಲಬುರಗಿ, 28 ಮೇ (ಹಿ.ಸ.)
ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಶಾಖೆ, ಕುರುಬರ ನೌಕರರ ಸಂಘ, ಮಹಿಳಾ ಸಂಘ, ಯುವಕ ಸಂಘ, ರಾಯಣ್ಣ ಸಂಘದ ಆಶ್ರಯದಲ್ಲಿ ಇದೇ 31ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಷ್ಟçಮಾತಾ ಅಹಿಲ್ಯಾಬಾಯಿ 300ನೇ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಾತಾ ಅಹಿಲ್ಯಾಬಾಯಿ 300ನೇ ಜಯಂತ್ಯುತ್ಸವ ಪ್ರಯುಕ್ತ ಅಂದು ಬೆಳಗ್ಗೆ 7:30ಕ್ಕೆ 300 ದಂಪತಿಗಳಿಂದ 300 ಶಿವಲಿಂಗಗಳನ್ನು ಪೂಜಿಸುವ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದರು. ಮಧ್ಯಾಹ್ನ 03ಕ್ಕೆ ಜಯಂತ್ಯುತ್ಸವ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಗಂಡನನ್ನು ಕಳೆದುಕೊಂಡು ಸ್ವಾವಲಂಬಿ ಜೀವನ ಮಾಡುತ್ತಿರುವ ಮಹಿಳೆಯರಿಗೆ ಮತ್ತು ಸಾವನ್ನಪ್ಪಿದ ಸೈನಿಕರ ಪತ್ನಿಯರಿಗೆ ಸನ್ಮಾನಿಸಲಾಗುವುದು ಎಂದರು. ಪೂಜ್ಯ ಸಿದ್ಧರಾಮನಂದ ಮಹಾಸ್ವಾಮೀಜಿ ಸಮ್ಮುಖ ಹಾಗೂ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಸಾನ್ನಿಧ್ಯದಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನಿಜ್ ಫಾತಿಮಾ, ಎಂಎಲ್ಸಿಗಳಾದ ಜಗದೇವ ಗುತ್ತೇದಾರ, ತಿಪ್ಪಣ್ಣ ಕಮಕನೂರ್, ಪ್ರಭಾವತಿ, ಡಾ.ವಿಜಯಲಕ್ಷ್ಮಿ, ಡಾ.ಅಮ್ರಪ್ಪ ಜಂಪಾ, ನಿರ್ಮಲಾ ಬರಗಾಲಿ ಸೇರಿದಂತೆ ಅನೇಕರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಿಂಗಬೀರದೇವರ ಶರಣರು, ಬಿ.ಕೆ.ಪಾಟೀಲ್, ದಿಲೀಪ್ ಪಾಟೀಲ್, ರವಿಗೊಂಡ, ಶಿವಲಿಂಗಪ್ಪ ಸಾವಳಗಿ, ನಾಗೇಂದ್ರಪ್ಪ ಪೂಜಾರಿ ಇತರರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Samarth biral