ಬೆಂಗಳೂರು, 25 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ವಿಕಸಿತ್ ರಾಜ್ಯ, ವಿಕಸಿತ್ ಭಾರತ @ 2047’ ಕುರಿತು ಚರ್ಚಿಸಲು ನಿನ್ನೆ ನಡೆದ ನೀತಿ ಆಯೋಗದ 10ನೇ ಆಡಳಿತ ಮಂಡಳಿಯ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಬೇಕಿದ್ದ ಮುಖ್ಯಮಂತ್ರಿ ಸಭೆಗೆ ಗೈರು ಹಾಜರಾಗಿದ್ದಾರೆ. ಆ ಮೂಲಕ ಎಂದಿನಂತೆ ರಾಜ್ಯದ ಅಭಿವೃದ್ಧಿಗಿಂತ ಅಧಿಕಾರ ರಾಜಕಾರಣವೇ ತಮಗೆ ಆದ್ಯತೆ ಎಂಬ ಸ್ವಾರ್ಥ ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಇದು ಆರೂವರೆ ಕೋಟಿ ಕನ್ನಡಿಗರ ಹಿತಾಸಕ್ತಿಯ ಕುರಿತಾದ ಅವರ ನಿಷ್ಕಾಳಜಿ ಹಾಗೂ ತಾತ್ಸಾರ ಧೋರಣೆಯ ವರ್ತನೆಗೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ.
ದೇಶದ ನೀತಿ ರೂಪಣೆ, ಅಭಿವೃದ್ಧಿಯ ಹಾದಿ, ರಾಜ್ಯದ ದೂರದೃಷ್ಟಿ ಕುರಿತು ಈ ಮಹತ್ವದ ಸಭೆಯಲ್ಲಿ ಅಭಿಪ್ರಾಯ ಮಂಡಿಸಬೇಕಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಯಾವುದೇ ನಿರ್ದಿಷ್ಟ ಕಾರಣ ನೀಡದೇ ಸಭೆಯಿಂದ ದೂರ ಉಳಿದಿರುವುದು ರಾಜ್ಯಕ್ಕೆ ಹಾಗೂ ನಾಡಿನ ಸಮಸ್ತ ಕನ್ನಡಿಗರಿಗೆ ಅಪಮಾನ ಎಸಗಿದಂತಾಗಿದೆ.
ಪದೇ ಪದೇ ಯಾವೊಂದು ವಿಚಾರಗಳಿಗೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವ ಮುಖ್ಯಮಂತ್ರಿಗಳು ಪ್ರಧಾನಿಗಳ ಸಭೆಯಲ್ಲಿ ಭಾಗವಹಿಸಿ ರಾಜ್ಯದ ಅಭಿವೃದ್ಧಿಯ ಕುರಿತು ತಮ್ಮ ಬದ್ಧತೆ ಪ್ರದರ್ಶಿಸಬೇಕಿತ್ತು, ಆದರೆ ಕೇಂದ್ರದ ಮಹತ್ವದ ಸಭೆಗಳನ್ನು ಉಪೇಕ್ಷಿಸಿದರೆ ರಾಜ್ಯ ಅಭಿವೃದ್ಧಿಯಾಗಲು ಹೇಗೆ ಸಾಧ್ಯ? ರಾಜಕೀಯ ಒಣ ಪ್ರತಿಷ್ಠೆಗಾಗಿ ರಾಜ್ಯದ ಹಿತಕ್ಕೆ ದ್ರೋಹ ಬಗೆಯುತ್ತಿರುವ ಮುಖ್ಯಮಂತ್ರಿಗಳು ಈ ಕುರಿತು ನಾಡಿನ ಜನತೆಗೆ ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa