ಗದಗ, 09 ಮಾರ್ಚ್ (ಹಿ.ಸ.) :
ಆ್ಯಂಕರ್ : ತುಂಗಭ್ರದಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಪೈಕಿ ಓರ್ವನ ಶವ ಪತ್ತೆಯಾಗಿದೆ. ನಿನ್ನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ಈಜಲು ಹೋದಾಗ ದುರ್ಘಟನೆ ನಡೆದಿತ್ತು. ಮದಲಗಟ್ಟಿ ಆಂಜನೇಯನ ದರ್ಶನ ಪಡೆದು ತುಂಗಭದ್ರಾ ನದಿಗೆ ಈಜಲು ತೆರಳಿದಾಗ ಈ ದುರ್ಘಟನೆ ಜರುಗಿದೆ.
ಇಂದು ಮಹೇಶ್ ಬಡಿಗೇರ್ ಅವರ ಶವ ಪತ್ತೆಯಾಗಿದೆ. ಶರಣಪ್ಪ ಬಡಿಗೇರ್ (34) ಗುರುನಾಥ್ ಬಡಿಗೇರ್ (38) ಎನ್ನುವರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಮದಲಗಟ್ಟಿ ಆಂಜನೇಯನ ದರ್ಶನ ಪಡೆಯಲು ಗದಗ ಜಿಲ್ಲೆ ಶಿರಹಟ್ಟಿಯಿಂದ ಬಂದಿದ್ದರು. ಈ ವೇಳೆ ದೇವರ ದರ್ಶನ ಪಡೆದು ಐವರಲ್ಲಿ ಮೂವರು ನದಿಗೆ ಈಜಲು ತೆರಳಿದಾಗ ನಾಪತ್ತೆಯಾಗಿದ್ದಾರೆ.
ಐವರಲ್ಲಿ ಓರ್ವನಾದ ಶರಣಪ್ಪ ಬಡಿಗೇರ್ ಈತನ ಹುಟ್ಟುಹಬ್ಬದ ಹಿನ್ನೆಲೆ, ಆಂಜನೇಯನ ದರ್ಶನ ಪಡೆಯಲು ಸೇಹಿತರೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ.
ಮಹೇಶ್ ಬಡಿಗೇರ, ಈಜಲು ಬಾರದಿದ್ದರೂ ನದಿಗೆ ಇಳಿದಿದ್ದನು. ಈ ವೇಳೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹೇಶ್ ನನ್ನು ರಕ್ಷಿಸಲು ಶರಣಪ್ಪ ಹಾಗೂ ಗುರುನಾಥ್ ಇವರಿಬ್ಬರೂ ತೆರಳಿದಾಗ, ಮೂವರು ಸಹ ನದಿಯಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು.
ಸದ್ಯ ನದಿಯಲ್ಲಿ ನಾಪತ್ತೆಯಾಗಿರುವ ಮೂವರ ಪೈಕಿ ಓರ್ವನ ಶವ ಪತ್ತೆಯಾಗಿದೆ. ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP