ಕೊಪ್ಪಳ, 07 ಮಾರ್ಚ್ (ಹಿ.ಸ.) :
ಆ್ಯಂಕರ್ : ದೇವದಾಸಿ ಪದ್ಧತಿ ಎಂಬ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆಯಾಗಲು ಶಿಕ್ಷಣ ಎಂಬುದು ಬಹಳ ಅತ್ಯಂತ ದೊಡ್ಡ ಅಸ್ತ್ರ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ಈ ದೇವದಾಸಿ ಪದ್ಧತಿಯನ್ನು ಬುಡಸಮೇತ ಕಿತ್ತು ಹಾಕಲು ಸಾದ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾತೇಶ ಸಂಗಪ್ಪ ದರಗದ ಅವರು ಸಲಹೆ ನೀಡಿದ್ದಾರೆ.
ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ಕೊಪ್ಪಳ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ, ದೇವದಾಸಿ ಪುನರ್ವಸತಿ ಯೋಜನೆ, ಕೊಪ್ಪಳ ಮತ್ತು ಗ್ರಾಮ ಪಂಚಾಯಿತಿ ಕವಲೂರು ಇವರ ಸಂಯುಕ್ತಾಶ್ರಯದಲ್ಲಿ ಕವಲೂರು ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಏರ್ಪಡಿಸಿದ್ದ ಉಚಿತ ಕಾನೂನು ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವದಾಸಿ ಮಹಿಳೆಯರು ಸಂಕಟವನ್ನು ಮುಚ್ಚಿಟ್ಟುಕೊಂಡು ಎಷ್ಟೇ ನೋವುಗಳಿದ್ದರೂ ಸಹಿತ ಖುಷಿಯಾಗಿ ಇರುತ್ತೀರಿ. ನಿಮಗೆ ಮುಖ್ಯವಾಗಿ ಬೇಕಿರುವುದು ಮಾನಸಿಕ ನೆಮ್ಮದಿ, ಸಮಾಜದಲ್ಲಿ ಗೌರವ. ಮುಂದಿನ ಪೀಳಿಗೆಯವರು ಈ ಪದ್ಧತಿಗೆ ಬಲಿಯಾಗದಿರಲು ಎಲ್ಲರಿಗೂ ಶಿಕ್ಷಣ ದೊರೆಯಬೇಕು. ಯಾರಾದರೂ ದೇವದಾಸಿ ಪದ್ಧತಿಗೆ ಬಿಟ್ಟಿದ್ದೆಯಾದರೆ ಕಾನೂನಿನಡಿ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.
ರವಿಚಂದ್ರ ಮಾಟಲದಿನ್ನಿ ಅವರು ದೇವದಾಸಿ ಸಮರ್ಪಣೆ ನಿಷೇಧ ಕಾಯ್ದೆ-1982 ಮತ್ತು ತಿದ್ಧುಪಡಿ ಅಧಿನಿಯಮ-2009 ರ ಕುರಿತು ಉಪನ್ಯಾಸ ನೀಡಿ, ದೇವದಾಸಿ ಪದ್ಧತಿ ಎಂಬುದು ಒಂದು ಅಂಟು ರೋಗ. ಇದನ್ನು ಈ ಹಿಂದೆ ಜಾರಿಗೆ ತಂದವರು ಯಾರೇ ಇರಲಿ, ಅವರು ಮನುಷ್ಯರೇ ಅಲ್ಲ ಎಂದು ಖಾರವಾಗಿ ಮಾತನಾಡಿದರು. ದೇವದಾಸಿ ಪದ್ಧತಿಗೆ ಬಿಟ್ಟರೆ ಕಾಯ್ದೆಯ ಕಲಂ 3 ರಡಿ 3 ರಿಂದ 5 ವರ್ಷಗಳ ಜೈಲು ಅನುಭವಿಸಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಕಾನೂನಿನ ತಿಳುವಳಿಕೆ ಪಡೆಯಬೇಕು ಎಂದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಇಲಾಖೆಯ ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕೊಪ್ಪಳ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಯೋಳಭಾವಿ ಅವರು ಮಾಜಿ ದೇವದಾಸಿ ಮಹಿಳೆಯರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರೆ, ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಯಮುನಾ ಬೆಸ್ತರ್ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಮ್ಮ ಬಾಳಪ್ಪ ಬಿಸರಹಳ್ಳಿ ವಹಿಸಿದ್ದರು. ಪೋಲಿಸ್ ಇಲಾಖೆಯ ಶಶಿಕಾಂತ್, ಪಂಚಾಯಿತಿಯ ಉಪಾಧ್ಯಕ್ಷರಾದ ಅನ್ನಪೂರ್ಣ ಪೂಜಾರಿ, ಪಿಡಿಓ ಅನಿತಾ ಕಿಲ್ಲೇದ, ಯೋಜನಾ ಅನುಷ್ಠಾಧಿಕಾರಿ ರೇಣುಕಾ ಮಠದ, ಸ್ನೇಹಾ ಸಂಸ್ಥೆಯ ಶೋಭಾ ಮಠದ ಸೇರಿದಂತೆ ಅಂಗನವಾಡಿ ಮೇಲ್ವಿಚಾರಕಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯೋಜನಾ ಅನುಷ್ಠಾಧಿಕಾರಿ ದಾದೇಸಾಬ ಹಿರೇಮನಿ ನಿರ್ವಹಿಸಿದರು. ಪ್ರಾರ್ಥನೆಯನ್ನು ಅಂಗನವಾಡಿ ಕಾರ್ಯಕರ್ತೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್