ಕೊಪ್ಪಳ ಹಣ್ಣು, ಜೇನು ಮೇಳ ದಾಖಲೆ ವಹಿವಾಟು
ಕೊಪ್ಪಳ, 04 ಮಾರ್ಚ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಹಣ್ಣು ಮತ್ತು ಜೇನು ಮೇಳವು ಸ್ವದೇಶಿ ಹಾಗೂ ವಿದೇಶಿ ಹಣ್ಣುಗಳ ಪ್ರದರ್ಶನ ಮತ್ತು ಸ್ವದೇಶಿ ಹಣ್ಣುಗಳ ಮಾರಾಟದಿಂದ ದಾಖಲೆ ವಹಿವಾಟು ನಡೆಸಿದೆ. ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಹಾ ಶಿವರಾತ್ರಿ ನಿಮಿತ್ತ 8ನೇ ವರ್ಷದ
ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ


ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ


ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ


ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ


ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ


ಕೊಪ್ಪಳ, 04 ಮಾರ್ಚ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಹಣ್ಣು ಮತ್ತು ಜೇನು ಮೇಳವು ಸ್ವದೇಶಿ ಹಾಗೂ ವಿದೇಶಿ ಹಣ್ಣುಗಳ ಪ್ರದರ್ಶನ ಮತ್ತು ಸ್ವದೇಶಿ ಹಣ್ಣುಗಳ ಮಾರಾಟದಿಂದ ದಾಖಲೆ ವಹಿವಾಟು ನಡೆಸಿದೆ.

ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಹಾ ಶಿವರಾತ್ರಿ ನಿಮಿತ್ತ 8ನೇ ವರ್ಷದ ಹಣ್ಣು ಮತ್ತು ಜೇನು ಮೇಳವನ್ನು ಫೆ.23 ರಿಂದ ಫೆ.27ರ ವರೆಗೂ ಐದು ದಿನಗಳ ಕಾಲ ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ(ಜಿಪಂ) ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಹಿಂದಿನ ಮೇಳಕ್ಕಿಂತಲೂ ಹೆಚ್ಚಿನ ಆಕರ್ಷಣೆಗೊಂಡು ವಹಿವಾಟು ದಾಖಲೆ ನಿರ್ಮಿಸಿತು.

ಗ್ರಾಹಕರ ಗಮನ ಸಳೆದ ಜಗತ್ತಿನ ದುಬಾರಿ ದ್ರಾಕ್ಷಿ: ಈ ಮೇಳದಲ್ಲಿ ಮುಖ್ಯವಾಗಿ ಹಣ್ಣುಗಳ ಪ್ರದರ್ಶನದಲ್ಲಿ ಜಗತ್ತಿನ ದುಬಾರಿ ದ್ರಾಕ್ಷಿಯಾದ ಜಪಾನಿನ “ರೂಬಿ ರೋಮನ್” ದ್ರಾಕ್ಷಿಯು ಅತ್ಯಂತ ಆಕರ್ಷಣೀಯವಾಗಿ ಎಲ್ಲಾ ಗ್ರಾಹಕರ ಗಮನ ಸಳೆಯಿತು. ಈ ದ್ರಾಕ್ಷಿ ತಳಿಯನ್ನು ನೋಡಲು ಹೊರಜಿಲ್ಲೆಯ ಹಾಗೂ ಸ್ಥಳೀಯ ಜನರು ತಂಡೋಪ ತಂಡವಾಗಿ ಬಂದು ವೀಕ್ಷಿಸಿ, ಅದರ ಬೆಲೆ ಕೇಳಿ ಆಶ್ಚರ್ಯ ವ್ಯಕ್ತಪಡಿಸಿದರು. ರೈತರು ಸಹ ವೀಕ್ಷಿಸಿ ತಾವು ಸಹ ಈ ಬೆಳೆಯನ್ನು ಬೆಳೆಯುವ ಬಗ್ಗೆ ಆಶಯ ವ್ಯಕ್ತಪಡಿಸಿದರು. ಈ ದ್ರಾಕ್ಷಿಯು ಈ ಮೇಳದ ಅತ್ಯಂತ ಮುಖ್ಯ ಆಕರ್ಷಣಿಯವಾಗಿತ್ತು.

ಈ ಮೇಳದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುವ 10 ಕ್ಕೂ ಹೆಚ್ಚಿನ ಹಣ್ಣುಗಳಾದ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ, ಅಂಜೂರ, ಪೇರಲ, ಬಾಳೆ, ಡ್ರ್ಯಾಗನ್ ಹಣ್ಣು, ಸಪೋಟಾ, ಪಪ್ಪಾಯ ಹಾಗೂ ಜೇನು ಹಾಗೂ ಜೇನಿನ ಉತ್ಪನ್ನಗಳನ್ನು ಸಹ ಮಾರಾಟ ಮಾಡಲು 25 ಕ್ಕೂ ಹೆಚ್ಚು ಸ್ಟಾಲಗಳನ್ನು ರೈತರಿಗೆ ಉಚಿತವಾಗಿ ನೀಡಲಾಗಿತ್ತು. ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಸಂಸ್ಥೆ ಕೊಪ್ಪಳ ರೈತರು ಸಹ ಜಿಲ್ಲೆಯಲ್ಲಿ ರೈತರಿಂದ ಹಣ್ಣುಗಳನ್ನು ಖರೀದಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವನ್ನು ಮೇಳದಿಂದ ಕಲ್ಪಿಸಲಾಗಿತ್ತು.

ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ಮೇಳದಲ್ಲಿ ದ್ರಾಕ್ಷಿಯ ತಳಿಗಳಲ್ಲದೇ ಕಲ್ಲಂಗಡಿ ಹಣ್ಣಿನ ಹಳದಿ ಮತ್ತು ಗುಲಾಬಿ ತಿರುಳು ಹೊಂದಿದ ತಳಿಗಳು, ಪಪ್ಪಾಯ ಹಣ್ಣಿನ ಮೂರು ತರಹದ ತಳಿಗಳು ಮತ್ತು ಪೇರಲ ಹಾಗೂ ದಾಳಿಂಬೆ ಹಣ್ಣಿನ ತಳಿಗಳನ್ನು ಗ್ರಾಹಕರಿಗೆ ಪೂರೈಸುವ ಮೂಲಕ ಹಣ್ಣುಗಳ ತಳಿಗಳ ಸ್ವಾದವನ್ನು ಸವಿಯಲು ಅವಕಾಶ ಕಲ್ಪಿಸಲಾಗಿತ್ತು.

ಇದಲ್ಲದೇ ಮೇಳದಲ್ಲಿ ಉತ್ಕೃಷ್ಟ ಗುಣಮಟ್ಟದ ಜೇನುತುಪ್ಪ ಹಾಗೂ ಜೇನಿನ ಉಪ ಉತ್ಪನ್ನಗಳನ್ನು ಕಲ್ಲಳ್ಳಿ ಜೇನು ಶಿರಸಿ ರವರು ಹಾಗೂ ಕೊಪ್ಪಳದ ರೈತ ಜೇನು ಬೆಳೆಗಾರರು ಕೂಡಾ ಭಾಗವಹಿಸಿ ಗ್ರಾಹಕರಿಗೆ ಪೂರೈಸಿರುತ್ತಾರೆ.

ಐದು ದಿನಗಳ ಕಾಲ ನಡೆದ ಈ ಮೇಳದಲ್ಲಿ ರೈತರು ಹಾಗೂ ಗ್ರಾಹಕರು ಇಬ್ಬರೂ ಈ ಮೇಳದ ಲಾಭವನ್ನು ಪಡೆದಿರುತ್ತಾರೆ.

ಮೇಳದಲ್ಲಿ ಅಣಬೆ ಪಿ.ಎಫ್.ಎಮ್.ಎಸ್. ಯೋಜನೆಯಡಿ ಸಹಾಯಧನ ಪಡೆದು ಅಣಬೆ ಬೇಸಾಯ ಮಾಡಿದ ರೈತರು ಸಹ ತಮ್ಮ ತಾಜಾ ಅಣಬೆಯನ್ನು ಪ್ಯಾಕ್ ಮಾಡಿ ಮಾರಾಟ ಮಾಡಿದರು ಹಾಗೂ ಅಣಬೆಯಿಂದ ತಯಾರಿಸಿದ ಬಿಸ್ಕೇಟ್, ಉಪ್ಪಿನಕಾಯಿ, ಅಣಬೆ ಪುಡಿ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಿದರು.

40 ಲಕ್ಷಕ್ಕೂ ಹೆಚ್ಚಿನ ವಹಿವಾಟು: “ಐದು ದಿನಗಳ ಕಾಲ ನಡೆದ ಈ ಮೇಳದಲ್ಲಿ 30,000 ಕ್ಕೂ ಹೆಚ್ಚು ಗ್ರಾಹಕರು ಮೇಳದಲ್ಲಿ ಭಾಗವಹಿಸಿರುತ್ತಾರೆ ಹಾಗೂ ರೂ. 40 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆದಿರುತ್ತದೆ.

ಈ ಮೇಳದಲ್ಲಿ ಗ್ರಾಹಕರು ಹಳದಿ ತಿರುಳಿನ ಕಲ್ಲಂಗಡಿ ಹಣ್ಣನ್ನು ಅತೀ ಹೆಚ್ಚು ಖರೀದಿಸಿದರು. ಕೆಂಪು ತಿರುಳಿನ ಕಲ್ಲಂಗಡಿ ಸಹ ಮಾರಾಟವಾಗಿ ಒಟ್ಟು 30 ಟನ್‍ಗೂ ಹೆಚ್ಚಿನ ಕಲ್ಲಂಗಡಿ ಮಾರಾಟವಾಯಿತು. 20 ಟನ್‍ಗೂ ಹೆಚ್ಚಿನ ಕರಬೂಜ ಹಣ್ಣುಗಳು ಮಾರಾಟ ಮಾಡಲಾಯಿತು. 6 ಟನ್‍ಗೂ ಹೆಚ್ಚು ದಾಳಿಂಬೆ, 12 ಟನ್‍ಗೂ ಹೆಚ್ಚು ದ್ರಾಕ್ಷಿ ಹಾಗೂ ಅಂಜೂರ, ಪೇರಲ, ಚಿಕ್ಕು, ಬಾಳೆ ಹಾಗೂ ಹಣ್ಣುಗಳು ಮಾರಾಟವಾದವು.

ಮೇಳದಲ್ಲಿ ಹಳದಿ ಮತ್ತು ಕೆಂಪು ತಿರುಳಿನ ಕಲ್ಲಂಗಡಿಯನ್ನು ಅಲ್ಲಿಯೇ ಗ್ರಾಹಕರಿಗೆ ಕತ್ತರಿಸಿ ಪೂರೈಸುವ ವ್ಯವಸ್ಥೆ ಸಹ ಮಾಡಲಾಗಿತ್ತು.

7 ಟನ್‍ಗೂ ಹೆಚ್ಚಿನ ಕಲ್ಲಂಗಡಿ ಹಣ್ಣುಗಳನ್ನು ಗ್ರಾಹಕರು ಸವಿದರು. ಈ ಮೇಳದಲ್ಲಿ 2.50 ಟನ್‍ಗೂ ಹೆಚ್ಚಿನ ಜೇನು ಹಾಗೂ ಜೇನಿನ ಉತ್ಪನ್ನಗಳಾದ ಜೇನಿನ ಮೇಣದಿಂದ ತಯಾರಿಸಿದ ಬಾಮ್, ಲಿಪ್‍ಸ್ಟಿಕ್, ಸೋಪ್ ಹಾಗೂ ತರಹದ ಶುಂಠಿ ಮತ್ತು ಲಿಂಬೆ ಮಿಶ್ರಿತ ಜೇನುಗಳು ಮಾರಾಟವಾದವು. ಗ್ರಾಹಕರು ಜೇನು ಹಾಗೂ ಜೇನಿನ ಉತ್ಪನ್ನಗಳನ್ನು ಮುಗಿಬಿದ್ದು ಖರೀದಿಸಿದರು.

ಸಾರ್ವಜನಿಕರಿಗಾಗಿ ವಿದೇಶಿ ಮತ್ತು ದೇಶಿ ತಳಿಯ ಐವತ್ತುಕ್ಕೂ ಹೆಚ್ಚಿನ ಹಣ್ಣುಗಳ ಮತ್ತು ಸ್ಥಳಿಯ ರೈತರು ಬೆಳೆದ ಪಪ್ಪಾಯ, ದ್ರಾಕ್ಷಿ, ದಾಳಿಂಬೆ, ಪೇರಲ, ಬಾಳೆ, ಮುಂತಾದ ಹಣ್ಣುಗಳನ್ನು ಈ ಮೇಳದಲ್ಲಿ ಪ್ರದರ್ಶನದಲ್ಲಿ ಇಡಲಾಗಿತ್ತು.

10 ಕ್ಕೂ ಹೆಚ್ಚು ದ್ರಾಕ್ಷಿಯ ತಳಿಗಳು, ಕಲ್ಲಂಗಡಿ ಹಣ್ಣಿನ 4 ತಳಿಗಳು (ಕೆಂಪು, ಹಳದಿ, ಬಿಳಿ, ಕಿತ್ತಳೆ ಬಣ್ಣ ಇತ್ಯಾದಿ), ಪೇರಲ ಹಣ್ಣಿನ 5 ಕ್ಕೂ ಹೆಚ್ಚು ತಳಿಗಳು ಮತ್ತು ದಾಳಿಂಬೆಯ 2 ತಳಿಗಳನ್ನು ಪ್ರದರ್ಶನದಲ್ಲಿ ಕಂಡು ಬಂದವು.

ಪಪ್ಪಾಯ, ಕಮಲಾಪೂರದ ಕೆಂಪು ಬಾಳೆ, ನೇಂದ್ರನ್ ಬಾಳೆ ಹಾಗೂ ಬೆಣ್ಣೆ ಹಣ್ಣು, ಹಸಿರು ಸೇಬು ಹಾಗೂ ಸಂಸ್ಕರಿಸಿದ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಗ್ರಾಹಕರು ಇವುಗಳನ್ನು ನೋಡಿ ಅತ್ಯಂತ ಖುಷಿಪಟ್ಟರಲ್ಲದೇ ರೈತರು ಕೂಡ ಪ್ರದರ್ಶನದಲ್ಲಿ ಇಟ್ಟಿರುವ ದ್ರಾಕ್ಷಿ ತಳಿಗಳನ್ನು ಹಾಗೂ ಬೆಣ್ಣೆ ಹಣ್ಣು, ನೇಂದ್ರನ್ ಬಾಳೆ ನೋಡಿ, ತಾವು ಸಹ ಈ ರೀತಿಯ ತಳಿಗಳನ್ನು ಬೆಳೆಯಬೇಕೆಂದು ಇಚ್ಛಿಸಿರುತ್ತಾರೆ.

ಇಲಾಖೆಯಲ್ಲಿ ಲಭ್ಯವಿರುವ ಅನೇಕ ಯೋಜನೆಗಳ ಸದ್ಭಳಕೆ ಮಾಡಿಕೊಂಡು ದ್ರಾಕ್ಷಿ ಅಲ್ಲದೇ ಇತರೇ ಹಣ್ಣುಗಳನ್ನು ಬೆಳೆಯಲು ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಮಾನಗಳಲ್ಲಿ ರೈತರ ಜಮೀನಿನಲ್ಲಿ ಮಣ್ಣು ಮತ್ತು ನೀರಿನ ಗುಣಧರ್ಮದ ಆಧಾರದ ಮೇಲೆ ಹಣ್ಣುಗಳನ್ನು ಬೆಳೆಯಲು ಅವಕಾಶ ನೀಡಲಾಗುವುದು ಎಂದು ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಸಿ ಉಕ್ಕುಂದ ಅವರು ತಿಳಿಸಿರುತ್ತಾರೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಈ ಮೇಳದಲ್ಲಿ ಅವರ ಹಣ್ಣುಗಳನ್ನು ಉತ್ತಮ ರೀತಿಯಲ್ಲಿ ಪ್ಯಾಕ್ ಮಾಡಿ ಸರಬರಾಜು ಮಾಡಲು ಪುನೆಟ್ ಬಾಕ್ಸ್ ಮತ್ತು ರಟ್ಟಿನ ಬಾಕ್ಸ್‍ಗಳನ್ನು ಸಬ್ಸಿಡಿ ದರದಲ್ಲಿ ನೀಡುವ ಮುಖಾಂತರ ಮೌಲ್ಯವರ್ಧನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು, ರೈತರು ಪುನೆಟ್ ಬಾಕ್ಸ್ ನಲ್ಲಿ ದ್ರಾಕ್ಷಿ ಹಣ್ಣುಗಳನ್ನು ಪ್ಯಾಕ್ ಮಾಡಿ ಹೆಚ್ಚಿನ ಮೌಲ್ಯಕ್ಕೆ ಸರಬರಾಜು ಮಾಡಿರುತ್ತಾರೆ.

ರೈತರಿಗೆ ನೇರ ಮಾರುಕಟ್ಟೆ ಮತ್ತು ಬಾಕ್ಸ್ ಪ್ಯಾಕಿಂಗ್‍ಗಳಲ್ಲಿ ಹಣ್ಣುಗಳನ್ನು ಪೂರೈಸುವ ಮೂಲಕ ಅವರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿಕೊಟ್ಟಂತಾಗಿದೆ. ಇದರಿಂದಾಗಿ ರೈತರು ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿ ಮಾರುಕಟ್ಟೆ ಕಂಡುಕೊಳ್ಳುವ ಕೌಶಲ್ಯವನ್ನು ತಿಳಿಸಿಕೊಟ್ಟಂತಾಗಿದೆ.

ಈ ಮೇಳದ ಪ್ರಮುಖ ಆಕರ್ಷಣೆಯಾಗಿ ಜಗತ್ತಿನ ದುಬಾರಿ ದ್ರಾಕ್ಷಿಯಾದ ಜಪಾನಿನ ರೂಬಿ ರೋಮನ್ ದ್ರಾಕ್ಷಿ ಹಣ್ಣಿನ ಫೋಟೊವನ್ನು ಸಾವಿರಾರುನ ಜನರು ತಮ್ಮ ಮೊಬೈಲ್‍ನಲ್ಲಿ ಕ್ಲಿಕ್ಕಿಸಿಕೊಂಡು ಹಣ್ಣುಗಳ ಜೋಡಣೆ ಮಾಡಿದ ಸೆಲ್ಫಿ ಪಾಯಿಂಟ್ ಎದುರು ಸಾವಿರಾರು ಜನ ಗ್ರಾಹಕರು ಸೆಲ್ಫಿ ಫೋಟೋ ತೆಗೆಸಿಕೊಂಡು ಉತ್ಸಾಹ ಮೆರೆದಿದ್ದಾರೆ.

ಹೀಗೇ ಒಟ್ಟಾರೆ ರೈತರು ಮತ್ತು ಗ್ರಾಹಕರ ನಡುವೆ ಉತ್ತಮ ಸೇತುವೆ ಕಲ್ಪಿಸುವಲ್ಲಿ ಈ ಮೇಳ ಅತ್ಯಂತ ಸಹಕಾರಿಯಾಗಿದ್ದು, ರೈತರಿಗೆ ಉತ್ತಮ ದರ ಮತ್ತು ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಉತ್ಪನ್ನಗಳನ್ನು ಯೋಗ್ಯ ದರದಲ್ಲಿ ಒದಗಿಸುವಲ್ಲಿ ಸಹಕಾರಿಯಾಗಿತ್ತು ಹಾಗೂ ಇನ್ನೂ ಹೆಚ್ಚಿನ ರೈತರು ತೋಟಗಾರಿಕೆಯಲ್ಲಿ ತೊಡಗುವಂತೆ ಪ್ರೇರೆಪಿಸಿ ಅತ್ಯಂತ ಯಶಸ್ವಿಯಿಂದ ಸಮಾರೋಪಗೊಂಡಿದೆ.

ಈ ಮೇಳವು ರೈತರ ಹಣ್ಣುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿದಲ್ಲದೇ ಗ್ರಾಹಕರಿಗೂ ಸಹ ಯೋಗ್ಯ ಬೆಲೆಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಒಂದೇ ಸೂರಿನಡಿ ಹತ್ತಾರು ಹಣ್ಣುಗಳನ್ನು ಮಹಾಶಿವರಾತ್ರಿ ಹಬ್ಬಕ್ಕೆ ಖರೀದಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ಗ್ರಾಹಕರು ಮತ್ತು ರೈತರು ತೋಟಗಾರಿಕೆ ಇಲಾಖೆಗೆ ಅಭಿನಂದನೆಗಳೊಂದಿಗೆ ಹರ್ಷ ವ್ಯಕ್ತಪಡಿಸಿರುತ್ತಾರೆ. ಈ ಮೇಳದಲ್ಲಿ ಗ್ರಾಹಕರು ಭಾಗವಹಿಸಿ ದಾಖಲೆಯ ವಹಿವಾಟು ಮಾಡಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande