ಕೊಪ್ಪಳ, 10 ಮಾರ್ಚ್ (ಹಿ.ಸ.) :
ಆ್ಯಂಕರ್ : ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಸೇರಿದಂತೆ ನಾನಾ ಇಲಾಖೆಗಳ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಕುರಿತು ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಸುರಕ್ಷತೆ ನಿಯಮ ಮತ್ತು ಕಾನೂನುಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದಾಗ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತವೆ. ಹೆಲ್ಮೆಟ್ ಇಲ್ಲದೆ ದ್ವೀಚಕ್ರ ವಾಹನಗಳನ್ನು ಚಲಾಯಿಸುವ ಜನರ ಮೇಲೆ ಇಲ್ಲಿಯವರೆಗೆ ಏನು ಕ್ರಮ ತೆಗೆದುಕೊಂಡಿದ್ದಿರಾ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ದಾಮೋದರ ಅವರಿಗೆ ಪ್ರಶ್ನಿಸಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನಗಳನ್ನು ಚಲಾಯಿಸಬೇಕು ಅಪಘಾತಳಾದ ಸಂದರ್ಭದಲ್ಲಿ ಹೆಲ್ಮೆಟ್ ತಮ್ಮ ಜೀವ ಉಳಿಸುತ್ತದೆ ಎಂದು ಜನರಿಗೆ ತಿಳಿಸಿ ಹೇಳಬೇಕು ಎಂದು ಹೇಳಿದರು.
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅವಶ್ಯಕತೆ ಇರುವಲ್ಲಿ ಸೈನ್ ಬೋರ್ಡ್, ಲೈಟಿಂಗ್ ವ್ಯವಸ್ಥೆಗಳನ್ನು ಮಾಡಬೇಕು. ಸಂಬಂಧಿಸಿದ ರಸ್ತೆ ಅಭಿವೃದ್ಧಿ ಪ್ರಾಧಿಕಾರದವರು ಈ ಕೆಲಸ ಮಾಡದೆ ಮತ್ತ್ಯಾರು ಮಾಡುತ್ತಾರೆ. ಇವುಗಳಿಗೆ ಅನುದಾನ ಬೇಕಾದರೆ ಸಂಬಂಧಿಸಿದ ಇಲಾಖೆಯವರು ತಮ್ಮ ಮೇಲಾಧಿಕಾರಿಗಳಿಗೆ ಪ್ರಪಸಲ್ ಕಳಿಸಿ ಮಾಡಿಸಬೇಕು. ಸೈನಬೋರ್ಡಗಳು ಇರುವಲ್ಲಿ ಲೈಟಿಂಗ್ ವ್ಯವಸ್ಥೆ ಇರಬೇಕು ಎಂದು ಹೇಳಿದರು.
ಬ್ಲ್ಯಾಕ್ ಸ್ಪಾಟಗಳು ಇರುವಲ್ಲಿ ಕ್ಯಾಮರಾಗಳನ್ನು ಅಳವಡಿಸುವದರ ಜೊತೆಗೆ ಲೈಟಿಂಗ್ ವ್ಯವಸ್ಥೆ ಹಾಗೂ ಸೈನ್ ಬೋರ್ಡಗಳಿದ್ದರೆ ಜನರು ಅಂತಹ ಸ್ಥಳಗಳಲ್ಲಿ ಸಂಚರಿಸುವಾಗ ಮುಂಜಾಗ್ರತೆ ವಹಿಸುವದರಿಂದ ಅಪಘಾತಗಳಾಗದಂತೆ ತಡೆಯಬಹುದು. ಈಗಾಗಲೇ ರಸ್ತೆಗಳಲ್ಲಿ ಬ್ಯಾರಿಕೇಡ್ ಇರುವಲ್ಲಿ ರೋಡಹಮ್ಸಗಳನ್ನು ಮಾಡಿದ ನಂತರ ಅವುಗಳನ್ನು ತೆರವುಗೊಳಿಸಿ ಎಷ್ಟು ಸ್ಥಳಗಳಲ್ಲಿ ಇವುಗಳನ್ನು ಮಾಡಬೇಕು ಎಂಬುದನ್ನು ಗುರುತಿಸಿ ಎಂದು ಹೇಳಿದರು.
ಹೆದ್ದಾರಿಗಳಲ್ಲಿ ಒಳ್ಳೆಯ ಗುಣಮಟ್ಟದ ಕ್ಯಾಮರಾಗಳನ್ನು ಅಳವಡಿಸಬೇಕು. ವಾಹನಗಳ ನಂಬರ ಪ್ಲೇಟ್ ಮಾತ್ರವಲ್ಲದೆ ಅವುಗಳ ವೇಗ ಹಾಗೂ ವಾಹನ ಸವಾರರು ಸೀಟಬೆಲ್ಟ್ ಧರಿಸಿದ್ದಾರೆ ಅಥವಾ ಇಲ್ಲಾ ಎನ್ನುವುದನ್ನು ಕುಳಿತಲ್ಲಿಂದಲೇ ನೋಡುವಷ್ಟು ಉತ್ತಮ ಕ್ಯಾಮರಾಗಳಿದ್ದು, ಅಂತಹುಗಳನ್ನು ಅಳವಡಿಸಿ. ಕೆ.ಕೆ.ಆರ್.ಟಿ.ಸಿ ಬಸ್ ನಿಲ್ದಾಣಗಳಿಗಾಗಿ ಒಳ್ಳೆಯ ಸ್ಥಳಾವಕಾಶ ಇರುವ ಜಾಗಗಳನ್ನು ಗುರುತಿಸಿ ಹಾಗೂ ಅವು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇರಬೇಕು. ಟ್ರಾಫಿಕ್ ಸಮಸ್ಯೆಗಳಾಗದಂತೆ ಇರಬೇಕು. ಕಳೆದ ಸಭೆಯಲ್ಲಿ ತಿಳಿಸಿದಂತೆ ಹುಲಗಿ ಬಸ್ ನಿಲ್ದಾಣದ ಪ್ರಪೋಸಲ್ ಕಳಿಸಿದ್ದಿರಾ ಎಂದು ಸಾರಿಗೆ ಇಲಾಖೆಯ ಅಧಿಕಾರಿಗೆ ಹೇಳಿದರು.
ಜಿಲ್ಲೆಯಲ್ಲಿ ಹಾದು ಹೋಗುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸದಿದ್ದರೆ ಭಾರವಾದ ವಾಹನಗಳು ಸಂಚರಿಸಿದಲ್ಲಿ ರಸ್ತೆಗಳು ಹಾಳಾಗಿ ಹೋಗುತ್ತವೆ ಈ ಕುರಿತು ಸಂಬಂಧಿಸಿದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ನಗರ ವ್ಯಾಪ್ತಿಯಲ್ಲಿ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕರಾದ ರೇಷ್ಮ ಹಾನಗಲ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರಾದ ಪಿ.ಹೇಮಂತರಾಜ್, ಎನ್.ಎಚ್.67 ಧಾರವಾಡದ ಟಕ್ನಿಕಲ್ ಮ್ಯಾನೇಜರ್ ಅಜಿಂಕೆ ನವಲೆ, ಎನ್.ಎಚ್. 50 ಹೊಸಪೇಟೆ ಸೈಟ್ ಇಂಜಿನಿಯರ್ ದಾನೇಶ,ಪ್ರೋಜೆಕ್ಟ್ ಡೈರೆಕ್ಟರ್ ಗಂಗಾಧರ, ಕೊಪ್ಪಳ ನಗರಸಭೆ ಪೌರಾಯುಕ್ತರಾದ ಆಯುಕ್ತರು ಗಣಪತಿ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್