ಭೂಮಿ ಉಳಿದರೆ ಮನುಸಂಕುಲ ಉಳಿಯಲು ಸಾಧ್ಯ
ವಿಜಯಪುರ, 06 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭೂಮಿ ಉಳಿದರೆ ಮನುಸಂಕುಲ ಉಳಿಯಲು ಸಾಧ್ಯ. ಉತ್ತಮ ಪರಿಸರದಿಂದಲೇ ಉತ್ತಮ ಆರೋಗ್ಯ ಹೊಂದಬಹುದು. ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮ ನಡವಳಿಕೆ ಹಾಗೂ ವಿಚಾರಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಚಿಂತಕರು, ಇತಿಹಾಸ ತಜ್ಞರು, ಹಿರಿಯ ಅಧಿಕಾರಿಗಳು,
ರನ್


ವಿಜಯಪುರ, 06 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭೂಮಿ ಉಳಿದರೆ ಮನುಸಂಕುಲ ಉಳಿಯಲು ಸಾಧ್ಯ. ಉತ್ತಮ ಪರಿಸರದಿಂದಲೇ ಉತ್ತಮ ಆರೋಗ್ಯ ಹೊಂದಬಹುದು. ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮ ನಡವಳಿಕೆ ಹಾಗೂ ವಿಚಾರಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಚಿಂತಕರು, ಇತಿಹಾಸ ತಜ್ಞರು, ಹಿರಿಯ ಅಧಿಕಾರಿಗಳು, ಪರಿಸರ ಪ್ರೇಮಿಗಳು ಹೇಳಿದ್ದಾರೆ.

ವೃ,ಕ್ಷಥಾನ್ ಹೆರಿಟೇಜ್ ರನ್-2025ರ ಮುನ್ನಾ ದಿನವಾದ ಇಂದು ಶನಿವಾರ ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನಾನಾ ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಗಣ್ಯರು ಪರಿಸರ ಸಂರಕ್ಷಣೆ, ಪ್ರಾಚೀನ ಸ್ಮಾರಕಗಳ ಉಳಿವು, ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಸದೃಢ ಆರೋಗ್ಯದ ಬಗ್ಗೆ ಚಿಂತನ- ಮಂಥನ ನಡೆಸಿದರು.

ಆದಿಲ್ ಶಾಹಿ ಅರಸರ ಪೂರ್ವ ಇತಿಹಾಸ ಕುರಿತು ಮಾತನಾಡಿದ ಇತಿಹಾಸಕಾರ ಡಾ. ಆನಂದ ಜೆ. ಕುಲಕರ್ಣಿ, ಬಸವನಾಡು, ಗುಮ್ಮಟ ನಗರಿ ಮುಂತಾದ ಹೆಸರುಗಳಿಂದ ಖ್ಯಾತವಾಗಿರುವ ವಿಜಯಪುರ ದಕ್ಷಿಣದ ಕಾಶಿ ಎಂದೇ ಹೆಸರಾಗಿತ್ತು. ಶರಣರ ನಾಡು, ಸೂಫಿ ಸಂತರ ಬೀಡು, ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜನ್ಮ ಮತ್ತು ಕರ್ಮಭೂಮಿಯಾದ ಈ ನೆಲ ಸದಾ ಬಾಂಧವ್ಯಕ್ಕೆ ಮಾದರಿಯಾಗಿದೆ. ಕನ್ನಡದ ಮೊದಲ ರಾಮಾಯಣವೂ ಕೃತಿ ಇಲ್ಲಿಯೇ ರಚಿತವಾಗಿದೆ ಎಂದು ತಿಳಿಸಿದರು.

ಆದಿಲ್ ಶಾಹಿ ಅರಸರ ಸಂಸ್ಕೃತಿ ಕುರಿತು ವಿಚಾರ ಮಂಡಿಸಿದ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣ, ಆದಿಲ್ ಶಾಹಿ ಬಾದಷಹರು ತಮ್ಮ ಆಡಳಿತದಲ್ಲಿ ಶೈಕ್ಷಣಿಕ, ಸಾಹಿತ್ಯ ಮತ್ತು ಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿದ್ಯಾರ್ಹತೆಯ ಆಧಾರದ ಮೇಲೆ ನಾಗರಿಕರಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಅಭಿವೃದ್ಧಿ ಮಾಡಿದ್ದಾರೆ. ಪ್ರತಿ ತಿಂಗಳ ಮೊದಲ ಗುರುವಾರ ನಡೆಯುತ್ತಿದ್ದ ಕಲೋತ್ಸವ, ನಾನಾ ಉದ್ಯಾನಗಳು, ಸಮಬಾಳು ಅವರ ತತ್ವವಾಗಿದ್ದವು ಎಂದು ಹೇಳಿದರು.

ಫಿಟ್ನೆಸ್ ತಜ್ಞ ಜಗದೀಶ ರಂಗಸ್ವಾಮಿ ಮಾತನಾಡಿ, ತಾವು ಈವರೆಗೆ 180 ದೇಶಗಳಿಗೆ ಭೇಟಿ ನೀಡಿದ್ದು, ನಮ್ಮಲ್ಲಿ ಬಾಲ್ಯದಿಂದ ರೂಢಿಸಿಕೊಳ್ಳುವ ಹವ್ಯಾಸಗಳು ನಮ್ಮನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತವೆ. ಶಿಕ್ಷಣದ ಜೊತೆಗೆ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಓಟ ಆರೋಗ್ಯದ ಒಂದು ಅವಿಭಾಜ್ಯ ಪ್ರಕ್ರಿಯೆಯಾಗಿದೆ. ವೃಕ್ಷಥಾನ್ ನಂಥ ಹಾಫ್ ಮ್ಯಾರಾಥಾನ್ ಗಳು ನಡೆಯುವುದರಿಂದ ಇತರರಿಗೂ ಪ್ರೇರಣೆಯಾಗುತ್ತವೆ ಎಂದು ಹೇಳಿದರು.

ಶಸ್ತ್ರಚಿಕಿತ್ಸಕ ಡಾ. ರವಿ ಚೌಧರಿ ಮಾತನಾಡಿ, ಒಂದು ಕಾಲದಲ್ಲಿ ಪಂಚನದಿಗಳ ನಾಡಾಗಿದ್ದ ವಿಜಯಪುರ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಇಂಥ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತ ತನ್ನು ಗುರುತನ್ನು ಮರುಸ್ಥಾಪಿಸುತ್ತಿದೆ ಎಂದು ಹೇಳಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಅಧಿಕಾರಿ ವಿಜಯಕುಮಾರ ಮಾತನಾಡಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಾಚೀನ ಸ್ಮಾರಕಗಳ ಅಪಾರ ಸಂಪತ್ತು ಇದೆ. ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕೈಗಾರಿಕೆ ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ ಅವರು ಕಾರ್ಯ ಒತ್ತಡದಲ್ಲಿ ಮಾನಸಿಕ ಸಮತೋಲನ ಮತ್ತು ದೈಹಿಕ ಆರೋಗ್ಯ ಕಾಪಾಡುವ ಬಗೆ ಕುರಿತು ಮಾತನಾಡಿದರು.

ಪ್ರತಿಯೊಂದನ್ನು ಎದುರಿಸಿ ಉದಯಿಸಬೇಕು. ಎಲ್ಲವನ್ನು ಮರೆತು ಓಡಬೇಕು. ನಾವು ಬಯಸಿದಂತೆ ಜೀವನದಲ್ಲಿ ಎಲ್ಲವೂ ಸಿಗುವುದಿಲ್ಲ. ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಒತ್ತಡದಿಂದ ಹೊರ ಬಂದು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ವೈದ್ಯ ಡಾ. ಶಂಕರಗೌಡ ಪಾಟೀಲ ಮಾತನಾಡಿ, ಪ್ರತಿನಿತ್ಯದ ಆರೋಗ್ಯದಲ್ಲಿ ನಿಯಮಿತ ಆಹಾರ ಸೇವನೆ ಮತ್ತು ದೈಹಿಕ ಕಸರತ್ತು ಮುಖ್ಯವಾಗಿದ್ದು, ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಮುಖಂಡ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಆರೋಗ್ಯ ಮತ್ತು ಶಿಸ್ತು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಳ ಮತ್ತು ಹೊರ ಮನಸ್ಸನ್ನು ಸಮತೋಲನದಲ್ಲಿಟ್ಟುಕೊಂಡು ನಮಗೆ ನೈಸರ್ಗಿಕವಾಗಿ ಸಿಗುವ ಮಳೆ, ಗಾಳಿ, ಬೆಳಕು ಸೇರಿದಂತೆ ಪಂಚ ಮಹಾಭೂತಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಪರಿಸರ ಸಂರಕ್ಷಕ ಬಸವರಾಜ ಬೈಚಬಾಳ ಅವರು ನಗರದಲ್ಲಿ ಮನೆಗೊಂದು ಮರ, ಬಡಾವಣೆಗಳಲ್ಲಿ ಒಂದು ಉದ್ಯಾನ ಕುರಿತು ಮಾತನಾಡಿದರು.

ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ನಿರ್ದೇಶಕ ಡಾ. ಪ್ರಶಾಂತ ಪಿ.ಕೆ.ಎಂ ಅವರು ರಾಜ್ಯದ ಅರಣ್ಯ ಸ್ಥಿತಿಗತಿ, ವಿಜಯಪುರ ಜಿಲ್ಲೆಯಲ್ಲಿ ಅರಣ್ಯೀಕರಣ, ಮುಂದೆ ಕೈಗೊಳ್ಳಬೇಕಿರುವ ಯೋಜನೆಗಳ ಕುರಿತು ಮಾತನಾಡಿದರು.

ಕಾಖಂಡಕಿ ಗುರುದೇವಾಶ್ರಮದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಅವರು ಸುಂದರ ಪರಿಸರ- ಸುಂದರ ಮನಸ್ಸು ಕುರಿತು ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ವಹಿಸಬೇಕು. ಭೂಮಿ ಉಳಿದರೆ ಜೀವ ಸಂಕುಲ ಉಳಿಯಲು ಸಾಧ್ಯ ಎಂದು ಹೇಳಿದರು.

ನಿವೃತ್ತ ಭದ್ರತಾ ಅಧಿಕಾರಿ ಎಸ್. ಹರಿನಾಥ ಅವರು ಒಟದಿಂದ ವ್ಯಕ್ತಿಯಲ್ಲಾಗುವ ಬದಲಾವಣೆ ಕುರಿತು ಮಾತನಾಡಿದರೆ, ಕಲಬುರಗಿ ಅಬಕಾರಿ ಇಲಾಖೆ ಉಪಾಯುಕ್ತ ಡಾ. ಸಂಗನಗೌಡ ಅವರು ಕ್ರೀಡೆಯಿಂದ ನಿತ್ಯ ಜೀವನದಲ್ಲಿ ಆಗುವ ಲಾಭದ ಕುರಿತು ಮಾತನಾಡಿದರು.

ಫಿಟ್ನೆಸ್ ತರೇಬೇತುದಾರ ಕಿರಣ ಬೆಟಗೇರಿ ಅವರು, ಸೈಕ್ಲಿಂಗ್, ರನ್ನಿಂಗ್ ನಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಮಾತನಡಿದರು.

ಸ್ಮಾರಕಗಳ ಸಂರಕ್ಷಣೆ ಮುಖಂಡ ಅಮೀನುದ್ದೀನ್ ಹುಲ್ಲೂರ, ಉದ್ಯಮಿ ಅನುಪಮ ರುಣವಾಲ, ಪ್ರಾಧ್ಯಾಪಕಿ ಪ್ರೊ. ಅನುರಾಧಾ ಟಂಕಸಾಲಿ ಮತ್ತು ಉದ್ಯಮಿ ಶಾಂತೇಶ ಕಳಸಗೊಂಡ ನಾಲ್ಕು ಗೋಷ್ಠಿಗಳ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು.

ಇದೇ ವೇಳೆ ಚಿತ್ರಕಲೆ, ನಿಬಂಧ, ವೃಕ್ಷ ಕಿಡ್ಸ್ ರನ್, ವಾಕ್ ಮತ್ತು ಶ್ರವಣದೋಷ ಮಕ್ಕಳ ಓಟ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande