
ಬಳ್ಳಾರಿ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅಸ್ತ್ರಗಳ ಮೂಲಕ ಮಹಾಪರಿನಿಬ್ಬಾಣದ ತರುವಾಯ ತಮ್ಮ ಮೌಲ್ಯಗಳನ್ನು ಸಮಾಜಕ್ಕೆ ಕೊಡುಯಾಗಿ ನೀಡಿರುವ ಬಾಬಾ ಸಾಹೇಬರು ತಮ್ಮ ಸಾರ್ಥಕ ಬದುಕನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಬುಡಕಟ್ಟು ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಚಲುವರಾಜು ಅವರು ತಿಳಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ ಸಿದ್ದು.ಪಿ ಆಲಗೂರ ಸಭಾಂಗಣದಲ್ಲಿ ಶನಿವಾರ ನಡೆದ ‘ಡಾ. ಬಿ. ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿನಿಬ್ಬಾಣ ದಿನಾಚರಣೆ’ಯ ಭಾಷಣಕಾರರಾಗಿ ಮಾತನಾಡಿದರು.
ಬಾಬಾ ಸಾಹೇಬರ ಜ್ಞಾನ ಮತ್ತು ಸಾಮಾಜಿಕ ಸೇವೆಯ ತುಡಿತಗಳನ್ನು ಪಾರಂಪರಿಕ ಶಿಕ್ಷಣ ವ್ಯವಸ್ಥೆಯ ಹೊರತಾಗಿ ಸಮಾಜಮುಖಿ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸಲು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಅಧ್ಯಯನ ಪೀಠಗಳು ಮುಂದಾಗಬೇಕಿದೆ. ಶೋಷಿತ ಸಮುದಾಯಕ್ಕೆ ಶಿಕ್ಷಣ ಒದಗಿಸುವ ಅವರ ಕನಸು ಇನ್ನೂ ಪೂರ್ಣಗೊಂಡಿಲ್ಲ ಎಂಬ ಕೊರಗಿನಿಂದಲೇ ಬಾಬಾ ಸಾಹೇಬರು ತಮ್ಮ ಕೊನೆಯುಸಿರಿಳೆದರು. ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆಯಂತಹ ಶಿಕ್ಷಣದ ಹರಿಕಾರರನ್ನು ಅಂಬೇಡ್ಕರ್ ಅವರು ಆದರ್ಶವನ್ನಾಗಿಸಿಕೊಂಡು ಅನೇಕ ಕಷ್ಟಗಳನ್ನು ಎದುರಿಸಿ ತಮ್ಮ ಶಿಕ್ಷಣವನ್ನು ಪೂರೈಸಿದರು ಎಂದರು.
ಅತಿಥಿಗಳಾಗಿ ವೇದಿಕೆಯಲ್ಲಿದ್ದ ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ. ಜಯಲಕ್ಷ್ಮಿ ನಾಯಕ ಅವರು, ಶೋಷಿತರ ಧ್ವನಿಯಾಗಿದ್ದ ಬಾಬಾಸಾಹೇಬರ ಇಂದಿನ ಪರಿನಿಬ್ಬಾಣ ದಿನವು ಅವರ ತತ್ವಾದರ್ಶಗಳನ್ನು ಪಾಲಿಸುವ ನಮೆಗೆಲ್ಲ ಕರಾಳ ದಿನವಾಗಿದೆ. ಅಂಬೇಡ್ಕರ್ ಅವರ ಹೋರಾಟದ ಬದುಕನ್ನು ಅರ್ಥೈಸಿಕೊಂಡು ಸ್ನಾತಕೋತ್ತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ವಿವಿಯ ಕುಲಪತಿಗಳಾದ ಪ್ರೊ ಎಂ. ಮುನಿರಾಜು ಅವರು ಅಧ್ಯಕ್ಷತೆವಹಿಸಿದ್ದರು. ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರಾದ ಪ್ರೊ ಎನ್.ಎಂ. ಸಾಲಿ, ಡಾ ಬಿ.ಆರ್. ಅಂಬೇಡ್ಕರ್ ತರಬೇತಿ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಡಾ. ಗೌರಿ ಮಾಣಿಕ ಮಾನಸ ವೇದಿಕೆಯಲ್ಲಿದ್ದರು.
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಡಾ ಶಶಿಧರ ಕೆಲ್ಲೂರ್ ನಿರೂಪಿಸಿ, ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್