
ಬಳ್ಳಾರಿ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಸ್ತುತ ಸುದ್ದಿಯು ಪತ್ರಕರ್ತರನ್ನೇ ಹುಡುಕಿಕೊಂಡು ಯಥೇಚ್ಛವಾಗಿ ಬರುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುದ್ದಿಯನ್ನು ಹುಡುಕಿಕೊಂಡು ಹೋಗುವ ಕಾಲವಿತ್ತು. ಆದರೆ, ಈಗ, ಸುದ್ದಿಯೇ ಪತ್ರಕರ್ತರನ್ನು ಹುಡುಕಿಕೊಂಡು ಬರುತ್ತಿದೆ. ಆ ಸುದ್ದಿಗಳಲ್ಲಿ ನಿಜವಾದ ಸುದ್ದಿ, ಮೌಲ್ಯಯುಕ್ತವಾದ ಸುದ್ದಿ ಮತ್ತು ಸುದ್ದಿಯ ಪ್ರಸ್ತುತತೆಯನ್ನು ಸುದ್ದಿ ಮನೆಯು ಅರ್ಥ ಮಾಡಿಕೊಂಡು ಪ್ರಕಟಿಸುವ ಸವಾಲುಗಳನ್ನು ಎದುರಿಸುತ್ತಿದೆ. ಬ್ರೇಕಿಂಗ್ ನ್ಯೂಸ್ ಒತ್ತಡದಲ್ಲಿ ಸಮಾಜದಲ್ಲಿ ಅದೆಷ್ಟೋ ಮನಸ್ಸುಗಳನ್ನು ಒಡೆದಿದ್ದೇವೆ. ಒಡೆದ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕಿದೆ. ಬರಹದಲ್ಲಿ ಪದಗಳನ್ನು ಬಳಸುವಾಗ ಜವಾಬ್ದಾರಿಯನ್ನು ತೋರಿಸಬೇಕು ಎಂದರು.
ಸುದ್ದಿ ಮನೆಯ, ವರದಿಗಾರರ ಮತ್ತು ಪತ್ರಕರ್ತರ ವಿಶ್ವಾಸಾರ್ಹತೆ ಇಂದಿನ ವೃತ್ತಿ ಸವಾಲಾಗಿದೆ. ಸಮಾಜಕ್ಕೆ ರೋಗ ಬಂದಲ್ಲಿ ಮಾಧ್ಯಮಗಳು ಸರಿಪಡಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಸಮಾಜವನ್ನು ಸರಿದಾರಿಗೆ ತರುವ ದೀಕ್ಷೆಯನ್ನು ಸ್ವಯಂ ತೊಟ್ಟಿರುವ ನಾವೆಲ್ಲರೂ (ಪತ್ರಕರ್ತರು) ಸಮಾಜಕ್ಕೆ ಒಳ್ಳೆಯದನ್ನೇ ನೀಡಬೇಕು. ಸುಳ್ಳು, ಕ್ರಿಮಿನಲ್, ಜೊಳ್ಳು, ನಕಲಿ ಪತ್ರಕರ್ತರ ಮಧ್ಯೆ ನೈಜ ಪತ್ರಕರ್ತರು ವೃತ್ತಿಯಲ್ಲಿ ಗೌರವ, ಘನತೆ, ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು, ನಿಷ್ಪಕ್ಷಪಾತ ವರದಿಗಾರಿಕೆಯು ಅಗತ್ಯವಿದೆ. ವೃತ್ತಿಯಲ್ಲಿ ಗುಣಮಟ್ಟ, ಕೌಶಲ್ಯಗಳನ್ನು - ಪ್ರತಿಯೊಬ್ಬ ಪತ್ರಕರ್ತರು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಸಚಿವ, ಶಾಸಕರಾದ ಬಿ.ನಾಗೇಂದ್ರ ಮತ್ತು ನಾರಾ ಭರತರೆಡ್ಡಿ ಅವರು, ರಾಜಕೀಯ ಮತ್ತು ಪತ್ರಿಕೋದ್ಯಮ ಜೋಡೆತ್ತುಗಳಿದ್ದಂತೆ. ತಲಾ 2 ಲಕ್ಷ ರೂಪಾಯಿಗಳನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ವೈಯಕ್ತಿಕವಾಗಿ ದೇಣಿಗೆ ನೀಡಿ, ಜಿಲ್ಲೆಯ ಪತ್ರಕರ್ತರ ಹಿತಾಸಕ್ತಿಗಾಗಿ ಸದಾಬದ್ಧ. ಪತ್ರಕರ್ತರ ಸಂಘದ ಮೇಲ್ಭಾಗದಲ್ಲಿ ಅತಿಥಿಗೃಹ ನಿರ್ಮಾಣ ಮಾಡಲು ತಲಾ 10 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತದೆ. ಪತ್ರಕರ್ತರು ವೃತ್ತಿಯಲ್ಲಿ ಕ್ರೆಡಿಬಲಿಟಿಯನ್ನು ಕಾಪಾಡಿಕೊಳ್ಳಬೇಕು ಎಂದರು.
ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎನ್. ವೀರಭದ್ರಗೌಡ ಅವರು, ವೃತ್ತಿನಿರತ ಪತ್ರಕರ್ತರ ಮಕ್ಕಳ ಶಿಕ್ಷಣಕ್ಕೆ ಶೇ. 50 ರಷ್ಟು ಶಿಕ್ಷಣ ಶುಲ್ಕದಲ್ಲಿ ಶಿಕ್ಷಣ ನೀಡುವ ಕ್ರಮಕೈಗೊಳ್ಳಬೇಕು. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯನ್ನು ರಚಿಸಬೇಕು ಎಂದು ಪ್ರಾಸ್ತಾವಿಕವಾಗಿ ಕೋರಿದರು.
ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ಹ್ಯಾರೀಸ್ ಸುಮೇರ್, ಲಿಡ್ಕರ್ ಅಧ್ಯಕ್ಷರಾದ ಮುಂಡ್ರಗಿ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಜಿಲ್ಲಾ ಉಸ್ತುವಾರಿ ಸೋಮಶೇಖರ ಕೆರೆಗೋಡು, ಮೇಯರ್ ಪಿ. ಗಾದೆಪ್ಪ, ವಾರ್ತಾಧಿಕಾರಿ ವಿ.ಸಿ. ಗುರುರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲೆಯ ರಾಜ್ಯ ಪ್ರತಿನಿಧಿ ಬಸವರಾಜ್ ಎಚ್. ಹಾಗೂ ಮಹಾನಗರ ಪಾಲಿಕೆಯ ವಿರೋಧಪಕ್ಷದ ಮುಖಂಡ ಶ್ರೀನಿವಾಸಮೋತ್ಕರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೃತಿ ಹಂದ್ಯಾಳು ಅವರು ಪ್ರಾರ್ಥನೆ ಸಲ್ಲಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ ಅವರು ಸ್ವಾಗತ ಕೋರಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ. ಮಂಜುನಾಥ್ ಅವರು ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ದೇಸಾಯಿ ಅವರು ವಂದನಾರ್ಪಣೆ ಸಲ್ಲಿಸಿದರು.
ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೆ.ಎನ್. ಗಂಗಾಧರ, ಕಾನಿಪ ಜಿಲ್ಲಾ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಎಸ್.ನಾಗರಾಜ್ ಮತ್ತು ಉಪ ಚುನಾವಣಾ ಅಧಿಕಾರಿಗಳಾಗಿದ್ದ ಸಿದ್ದು ಪೂಜಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಸಂಘಟನೆಗಳವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್