
ಗಂಗಾವತಿ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೇಶದ ಬಹುತೇಕ ನದಿಗಳು ಕುಡಿಯಲು ಯೋಗ್ಯವಾಗದಷ್ಟು ಕಲುಷಿತಗೊಂಡಿರುವ ಕುರಿತು ವರದಿಗಳು ಸ್ಪಷ್ಟಪಡಿಸುತ್ತಿದ್ದು, ಭವಿಷ್ಯತ್ತಿನ ಹಿತದೃಷ್ಟಿಯಿಂದ ತುಂಗಭದ್ರ ನದಿಯ ಮಲೀನ್ಯ ತಡೆಯಬೇಕಾದ ಅನಿವಾರ್ಯತೆಯಿದೆ.
ತುಂಗಭದ್ರ ನದಿಯ ಸಂರಕ್ಷಣೆಗಾಗಿ ಸರಕಾರದ ಗಮನಸೆಳೆಯಲು ಮತ್ತು ಜನಜಲಜಾಗೃತಿಗಾಗಿ ನಾಳೆ ಡಿಸೆಂಬರ್ 27 ರ ಬೆಳಗ್ಗೆ 10.30ಕ್ಕೆ ಹಿರೇಜಂತಕಲ್ ಶ್ರೀ ಪ್ರಸನ್ನ ಪಂಪಾಪತಿ ದೇವಸ್ಥಾನದ ವೇದಿಕೆಯಿಂದ 160 ಕಿಲೋಮೀಟರ್ ದೂರದ ಮಂತ್ರಾಲಯದವರೆಗೆ ಪಾದಯಾತ್ರೆ ಆರಂಭಗೊಳ್ಳಲಿದೆ.
ಈ ಪಾದಯಾತ್ರೆಯನ್ನು ಸುಭಾಶ್ಚಂದ್ರ ಬೋಸ್ ಅವರ ಮೊಮ್ಮಗಳು ಚಾಲನೆ ನೀಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು, ವರ್ತಕರು, ಗಣ್ಯರು ಸರ್ವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನವಿ ಮಾಡಿದರು.
ಅಭಿಯಾನದ ಪ್ರಮುಖರಾದ ಬಸವರಾಜ್ ಬಸವರಾಜ್ ವೀರಾಪುರ ಅವರು, ಅತಿಯಾದ ರಸಾಯನಿಕ ಬಳಕೆ, ಕಾರ್ಖಾನೆಗಳ ತ್ಯಾಜ್ಯ ನೀರಿಗೆ ಬಿಡುತ್ತಿರುವುದರಿಂದ ದೇಶದ 80ಕ್ಕು ಹೆಚ್ಚು ನದಿಗಳು ಕಲುಷಿತಗೊಂಡಿದ್ದು, ತುಂಗಭದ್ರ ನದಿಯು ಇದಕ್ಕೆ ಹೊರತಾಗಿಲ್ಲ. ಶಿವಮೊಗ್ಗಾದಿಂದ ಕಿಷ್ಕಂಧೆವರೆಗೆ ಎರಡು ಹಂತದ ಪಾದಯಾತ್ರೆ ಯಶಸ್ವಿಯಾಗಿ ಪೂರೈಸಿದ್ದು, ಮೂರನೆ ಹಂತದ ಪಾದಯಾತ್ರೆ ಗಂಗಾವತಿಯಿಂದ ಆರಂಭಗೊಳ್ಳಲಿದೆ ಎಂದರು.
ಜಲಜಾಗೃತಿ ಪಾದಯಾತ್ರೆ ಪೋಸ್ಟರ್ ಅನ್ನು ಈ ಸಂದಭದಲ್ಲಿ ಬಿಡುಗಡೆಗೊಳಿಸಲಾಯಿತು.
ನಿರ್ಮಲ ತುಂಗಭದ್ರ ಜನಜಾಗೃತಿ ರಾಯಬಾರಿ ಲಲಿತಾರಾಣಿ ಶ್ರೀರಂಗದೇವರಾಯಲು, ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಜಗನ್ನಾಥ ಆಲಂಪಲ್ಲಿ, ವಿಷ್ಣುತೀರ್ಥ ಜೋಷಿ, ಪವನ್ ಕುಮಾರ್ ಗುಂಡೂರು, ಮಂಜುನಾಥ ಕಟ್ಟಿಮನಿ, ಅರ್ಜುನ್ ಹಾಗು ಶಿವುಕುಮಾರ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್