
ನವದೆಹಲಿ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್ಆರ್ಇಜಿಎ)ಯನ್ನು ರದ್ದುಗೊಳಿಸಿ ‘ಭಾರತ್ ರೋಜ್ಗಾರ್ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ)’ ಯೋಜನೆಯನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಪ್ರತಿಕ್ರಿಯಿಸಿರುವ ಅವರು, 20 ವರ್ಷಗಳ ಹಳೆಯ ಹಕ್ಕು ಆಧಾರಿತ ಉದ್ಯೋಗ ಖಾತರಿ ವ್ಯವಸ್ಥೆಯನ್ನು ಮೋದಿ ಸರ್ಕಾರ ಒಂದೇ ದಿನದಲ್ಲಿ ಧ್ವಂಸಗೊಳಿಸಿದೆ ಎಂದು ಆರೋಪಿಸಿದರು.
VB-G ರಾಮ್ ಜಿ ಯೋಜನೆಯನ್ನು ನರೇಗಾ ಸುಧಾರಣೆ ಎಂದು ಹೇಳಲಾಗುತ್ತಿದರೂ, ಇದು ಬೇಡಿಕೆ ಆಧಾರಿತ ಹಾಗೂ ಕಾನೂನುಬದ್ಧ ಉದ್ಯೋಗ ಖಾತರಿಯನ್ನು ತೆಗೆದುಹಾಕಿ ದೆಹಲಿಯಿಂದ ನಿಯಂತ್ರಿತ ಸೀಮಿತ ಯೋಜನೆಯಾಗಿ ಮಾಡುತ್ತದೆ ಎಂದು ಹೇಳಿದರು.
ಕೋವಿಡ್-19 ಸಂಕಷ್ಟದ ವೇಳೆ ನರೇಗಾ ಲಕ್ಷಾಂತರ ಕುಟುಂಬಗಳನ್ನು ಹಸಿವು ಹಾಗೂ ಸಾಲದಿಂದ ರಕ್ಷಿಸಿತು ಎಂದು ಸ್ಮರಿಸಿದ ರಾಹುಲ್ ಗಾಂಧಿ, ಯೋಜನೆಯಿಂದ ಮಹಿಳೆಯರು ಹೆಚ್ಚಿನ ಪ್ರಯೋಜನ ಪಡೆದಿದ್ದು, ವರ್ಷದಿಂದ ವರ್ಷಕ್ಕೆ ಒಟ್ಟು ಮಾನವ ದಿನಗಳ ಅರ್ಧಕ್ಕಿಂತ ಹೆಚ್ಚು ಮಹಿಳೆಯರ ಪಾಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಯೋಜನೆಗಳನ್ನು ಸೀಮಿತಗೊಳಿಸುವುದರಿಂದ ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು, ಭೂರಹಿತ ಕಾರ್ಮಿಕರು ಹಾಗೂ ಬಡ OBC ಸಮುದಾಯಗಳು ಹೆಚ್ಚಾಗಿ ಹೊರಗುಳಿಯಲಿವೆ ಎಂದು ಎಚ್ಚರಿಸಿದರು.
ಸರಿಯಾದ ಪರಿಶೀಲನೆ, ತಜ್ಞರ ಸಲಹೆ ಮತ್ತು ಸಾರ್ವಜನಿಕ ವಿಚಾರಣೆಗಳಿಲ್ಲದೆ ಮಸೂದೆಯನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ ಎಂದು ಅವರು ಆರೋಪಿಸಿದರು.
ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa