
ಬೆಂಗಳೂರು, 09 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕಾನೂನುಬದ್ಧವಾಗಿಲ್ಲ ಎನ್ನುವ ಆರೋಪಗಳ ಬಗ್ಗೆ ಸರ್ಸಂಘಚಾಲಕ ಡಾ.ಮೊಹನ್ ಭಾಗವತ್ ಪ್ರತಿಕ್ರಿಯೆ ನೀಡಿದ್ದು, “ಸಂಘದ ಅಸ್ತಿತ್ವ ಹಾಗೂ ಕಾನೂನು ಮಾನ್ಯತೆಯನ್ನು ಪ್ರಶ್ನಿಸುವ ಅಗತ್ಯವೇ ಇಲ್ಲ. ನ್ಯಾಯಾಲಯ, ಸರ್ಕಾರ ಮತ್ತು ತೆರಿಗೆ ಇಲಾಖೆ ಎಲ್ಲವೂ ಸಂಘಕ್ಕೆ ಮಾನ್ಯತೆ ನೀಡಿವೆ,” ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಂಘ ಶತಾಬ್ದಿ ಉಪನ್ಯಾಸ ಮಾಲಿಕೆಯ ಎರಡನೇ ದಿನವಾದ ಇಂದು ಪ್ರಶೋತ್ತರಗಳಿಗೆ ಉತ್ತರಿಸಿದ ಅವರು,
“ಸಂಘ 1925ರಲ್ಲಿ ಆರಂಭವಾಯಿತು. ಆಗ ನಾವು ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತಿದ್ದೆವು. ಹಾಗಿರುವಾಗ ಅವರ ಸರ್ಕಾರದ ಬಳಿ ಹೋಗಿ ನೋಂದಣಿ ಮಾಡಿಸಿಕೊಳ್ಳುವುದು ಹೇಗೆ ಸಾಧ್ಯ?” ಎಂದು ಭಾಗವತ್ ಪ್ರಶ್ನಿಸಿದರು.
ಸ್ವಾತಂತ್ರ್ಯಾನಂತರದ ಭಾರತದಲ್ಲಿಯೂ ನೋಂದಣಿ ಕಡ್ಡಾಯವಲ್ಲ. ಕಾನೂನು ಪ್ರಕಾರ ‘ಬಾಡಿ ಆಫ್ ಇಂಡಿವಿಡ್ಯುಯಲ್ಸ್’ ಎಂಬ ವರ್ಗದಲ್ಲಿ ಸಂಘ ಅಸ್ತಿತ್ವದಲ್ಲಿದೆ. ಆದಾಯ ತೆರಿಗೆ ಇಲಾಖೆಯು ತೆರಿಗೆ ವಿಧಿಸಿದಾಗ, ನ್ಯಾಯಾಲಯವು ‘ಗುರುದಕ್ಷಿಣೆ ತೆರಿಗೆಮುಕ್ತ’ ಎಂದು ತೀರ್ಪು ನೀಡಿತು. ಮೂರು ಬಾರಿ ಸರ್ಕಾರ ಸಂಘದ ಮೇಲೆ ನಿಷೇಧ ಹೇರಿದರೂ, ನ್ಯಾಯಾಲಯವೇ ಪ್ರತೀ ಬಾರಿ ಅದನ್ನು ರದ್ದುಮಾಡಿದೆ. ಹೀಗಾಗಿ ಕಾನೂನಾತ್ಮಕವಾಗಿ ಸಂಘ ಮಾನ್ಯತೆ ಹೊಂದಿದೆ,” ಎಂದು ಸ್ಪಷ್ಟಪಡಿಸಿದರು.
ಮುಂದಿನ ಇಪ್ಪತ್ತು ವರ್ಷಗಳ ದೃಷ್ಟಿಕೋಣದ ಕುರಿತು ಮಾತನಾಡಿದ ಭಾಗವತ್ ನಮ್ಮ ಧ್ಯೇಯ ಸ್ಪಷ್ಟವಾಗಿದೆ, ಸಂಪೂರ್ಣ ಹಿಂದೂ ಸಮಾಜವನ್ನು ಸಂಘಟಿಸುವುದು, ಸತ್ಪ್ರವೃತ್ತಿಯುಳ್ಳ ಬಲಿಷ್ಠ ಸಮಾಜ ನಿರ್ಮಿಸುವುದು. ಈ ಸಂಘಟಿತ ಹಿಂದೂ ಸಮಾಜವೇ ಧರ್ಮಜ್ಞಾನದ ಮೂಲಕ ವಿಶ್ವಕ್ಕೆ ಶಾಂತಿ ಮತ್ತು ಆನಂದ ನೀಡಬೇಕು. ಇದೇ ನಮ್ಮ ಏಕೈಕ ದೃಷ್ಟಿ ಎಂದರು. ಇದನ್ನು ಸಾಧಿಸಿದ ನಂತರ ಸಂಘಕ್ಕೆ ಬೇರೆ ಗುರಿ ಅಗತ್ಯವಿಲ್ಲ. ಸಂಘಟಿತ ಸಮಾಜವೇ ಉಳಿದ ಕೆಲಸ ಮಾಡುತ್ತದೆ,” ಎಂದು ಹೇಳಿದರು.
ಅಲ್ಪಸಂಖ್ಯಾತರ ಕುರಿತು ಕೇಳಿದ ಪ್ರಶ್ನೆಗೆ ಭಾಗವತ್ ಉತ್ತರಿಸಿ,
ಸಂಘ ಯಾರಿಗೂ ಜಾತಿ, ಮತ ಅಥವಾ ಪಂಥದ ಆಧಾರದ ಮೇಲೆ ಬಾಗಿಲು ಮುಚ್ಚುವುದಿಲ್ಲ. ಶಾಖೆಯಲ್ಲಿ ಎಲ್ಲರೂ ‘ಭಾರತ ಮಾತೆಯ ಪುತ್ರರು’ ಎಂಬ ಭಾವದಿಂದ ಭಾಗವಹಿಸಬಹುದಾಗಿದೆ ಎಂದರು.
“ಸಂಘ ಯಾರಿಗಾಗಿಯೂ ವಿಶೇಷ ಅನುಕೂಲ ಕೊಡುವುದಿಲ್ಲ, ಯಾರಿಗಾಗಿಯೂ ಬೇರೆ ಶಾಲೆ ಅಥವಾ ಸಂಸ್ಥೆ ಆರಂಭಿಸುವುದಿಲ್ಲ. ಸಂಘದ ಕೆಲಸ ‘ಶಾಖೆ’ ಮತ್ತು ‘ಮಾನವ ನಿರ್ಮಾಣ’. ವಿದ್ಯಾಭಾರತಿ ಮುಂತಾದ ಸ್ವತಂತ್ರ ಸಂಸ್ಥೆಗಳು ಬೇರೆ ಕಾರ್ಯಗಳನ್ನು ನಡೆಸುತ್ತಿವೆ.
ಭಾಗವತ್ ಅವರ ಈ ಹೇಳಿಕೆ ಸಂಘದ ಕಾನೂನುಬದ್ಧತೆ, ಧ್ಯೇಯ–ದೃಷ್ಟಿ ಮತ್ತು ಅಲ್ಪಸಂಖ್ಯಾತರೊಂದಿಗೆ ಸಂಘದ ನಿಲುವನ್ನು ಸ್ಪಷ್ಟಪಡಿಸಿದೆ. ಸಂಘದ ಪ್ರಕಾರ, ಅದು ನೋಂದಣಿ ರಹಿತವಾದರೂ ಕಾನೂನುಬದ್ಧ ಸಂಸ್ಥೆಯಾಗಿದ್ದು, “ಸರ್ವರು ತಮ್ಮ ಕರ್ತವ್ಯ ತಾವೇ ನಿರ್ವಹಿಸಬೇಕು” ಎಂಬ ತತ್ತ್ವದ ಮೇಲೇ ನಿಂತಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa