

ಹಾಸನ, 09 ನವೆಂಬರ್ (ಹಿ.ಸ.) :
ಆ್ಯಂಕರ್ : ಶತಮಾನೋತ್ಸವದ ಅಂಗವಾಗಿ ಕರ್ನಾಟಕದ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆದ ಪರಮಪೂಜ್ಯ ಆಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ವಿಗ್ರಹವನ್ನು ಅನಾವರಣಗೊಳಿಸಿ, ದಿಗಂಬರ ಸಂಪ್ರದಾಯದ ಪುನರುಜ್ಜೀವನದಲ್ಲಿ ಅವರ ಅಪಾರ ಕೊಡುಗೆಯನ್ನು ಶ್ಲಾಘಿಸಿದರು.
ಉಪರಾಷ್ಟ್ರಪತಿಗಳು ಮಾತನಾಡಿ, ಆಚಾರ್ಯರ ಜೀವನವು ಅಹಿಂಸಾ, ಅಪರಿಗ್ರಹ ಮತ್ತು ಅನೇಕಾಂತವಾದ ಎಂಬ ಜೈನ ಧರ್ಮದ ಶಾಶ್ವತ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಇಂದಿನ ಜಗತ್ತಿನಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು ಈ ಆದರ್ಶಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.
ಶ್ರವಣಬೆಳಗೊಳದ ಆಧ್ಯಾತ್ಮಿಕ ಮಹತ್ವವನ್ನು ಉಲ್ಲೇಖಿಸಿದ ಅವರು, ಭಗವಾನ್ ಬಾಹುಬಲಿಯ ಪ್ರತಿಮೆ ಮತ್ತು ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ತ್ಯಾಗದ ಪರಂಪರೆ ಜೈನ ಧರ್ಮದ ಉನ್ನತ ಮೌಲ್ಯಗಳ ಪ್ರತೀಕಗಳೆಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಾದೇಶಿಕ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದು ಮತ್ತು ‘ಜ್ಞಾನ ಭಾರತಂ ಮಿಷನ್’ ಮೂಲಕ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆಗೆ ಕೈಗೊಂಡ ಕ್ರಮಗಳನ್ನು ಉಪರಾಷ್ಟ್ರಪತಿಗಳು ಪ್ರಶಂಸಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಯೋಜನೆ ಮತ್ತು ಅಂಕಿಅಂಶ ಸಚಿವ ಡಿ. ಸುಧಾಕರ್, ಹಾಗೂ ಶ್ರವಣಬೆಳಗೊಳ ಜೈನ ಮಠದ ಪೂಜ್ಯ ಸನ್ಯಾಸಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
ನಂತರ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿರುವ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಪ್ರಾರ್ಥನೆ ಸಲ್ಲಿಸಿದರು
ಹಿಂದೂಸ್ತಾನ್ ಸಮಾಚಾರ್ / Rakesh Mahadevappa