ವಿಜಯಪುರ, 08 ಅಕ್ಟೋಬರ್ (ಹಿ.ಸ.)
ಆ್ಯಂಕರ್ : ವಿಶ್ವದರ್ಜೆಯ ಚಿಕಿತ್ಸೆ ಒದಗಿಸುವ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆ ಆಗಿರುವ ನಾರಾಯಣ ಹೆಲ್ತ್ ಸಿಟಿಯು ಗಂಭೀರವಾದ ರಕ್ತ ಮತ್ತು ರೋಗನಿರೋಧಕ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಪೀಡಿಯಾಟ್ರಿಕ್ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ ಮೂಲಕ ಚಿಕಿತ್ಸೆ ನೀಡಿ ಅತ್ಯುತ್ತಮ ಸಾಧನೆ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ ಎಂದು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಹೆಮಟೋ-ಆಂಕಾಲಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್, ಪೀಡಿಯಾಟ್ರಿಕ್ ಆಂಕಾಲಜಿ ಕನ್ಸಲ್ಟೆಂಟ್ ಡಾ. ಶೋಭಾ ಬಡಿಗೇರ್ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಮಕ್ಕಳಿಗೆ ಯಶಸ್ವಿಯಾಗಿ ಈ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗಳನ್ನು ನಡೆಸಿದ್ದಾರೆ. ಆ ಮೂಲಕ ಅದೆಷ್ಟೋ ಕುಟುಂಬಗಳ ಮನೆಗೆ ಆಶಾಕಿರಣವಾಗಿ ಮೂಡಿಬಂದಿದ್ದಾರೆ.
ಈ ಮಕ್ಕಳ ಪೈಕಿ ಕೆಲವರು ಗಂಭೀರವಾದ ಥಲಸ್ಸೇಮಿಯಾ ಮೇಜರ್ (ಇದು ಹುಟ್ಟಿನಿಂದಲೇ ಬರುವ ಗಂಭೀರ ರಕ್ತ ಸಮಸ್ಯೆಯಾಗಿದ್ದು, ಆಗಾಗ ರಕ್ತ ವರ್ಗಾವಣೆಯ ಅಗತ್ಯ ಇರುತ್ತದೆ), ಜಿ6ಪಿಐ ಕೊರತೆ (ರಕ್ತದ ಕೆಂಪು ರಕ್ತಕಣಗಳು ನಾಶವಾಗುವ ಆನುವಂಶಿಕ ಕಾಯಿಲೆ), ಅಪ್ಲಾಸ್ಟಿಕ್ ಎನಿಮಿಯಾ (ಅಸ್ಥಿ ಮಜ್ಜೆಯು ಕೆಂಪು ರಕ್ತಕಣಗಳ ಉತ್ಪಾದನೆಯನ್ನು ನಿಲ್ಲಿಸುವ ಸಂಕೀರ್ಣ ಸ್ಥಿತಿ) ಮತ್ತು ಗಂಭೀರ ಪ್ಲೇಟ್ಲೆಟ್ ಸಮಸ್ಯೆಗಳಂತಹ ತೊಂದರೆಗಳಿಂದ ಬಳಲುತ್ತಿದ್ದವು. ಅಂಥಾ ಮಕ್ಕಳಿಗೆ ಈ ಜೀವರಕ್ಷಕ ಚಿಕಿತ್ಸೆ ನೀಡಿ ಅವರ ಜೀವವನ್ನು ನಾರಾಯಣ ಹೆಲ್ತ್ ಸಿಟಿ ಕಾಪಾಡಿದೆ. “ನಾವು ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ ಮಾಡಿದ ಅತ್ಯಂತ ಚಿಕ್ಕ ರೋಗಿಯ ವಯಸ್ಸು 1.5 ವರ್ಷ ಆಗಿದೆ. ಹಿರಿಯ ರೋಗಿಯ ವಯಸ್ಸು 13 ಆಗಿದೆ. ಅದರಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ದಾನಿ ಎಂದರೆ ಎಂಟು ತಿಂಗಳ ಮಗು ಆಗಿದ್ದು, ದೊಡ್ಡ ವಯಸ್ಸಿನ ದಾನಿ 51 ವರ್ಷದವರು. ಈಗ ಎಲ್ಲರೂ ಚೆನ್ನಾಗಿ ಇದ್ದಾರೆ” ಎಂದು ಹೇಳಿದರು.
ಅಪ್ಲಾಸ್ಟಿಕ್ ಎನಿಮಿಯಾ (ಬೋನ್ ಮ್ಯಾರೋ ಫೇಲ್ಯೂರ್), ಇಮ್ಯುನೋ ಡೆಫಿಶಿಯನ್ಸಿ ಡಿಸಾರ್ಡರ್ ಗಳು (ದುರ್ಬಲ ರೋಗನಿರೋಧಕ ವ್ಯವಸ್ಥೆ) ಮತ್ತು ಗಂಭೀರ ಪ್ಲೇಟ್ ಲೆಟ್ ಸಮಸ್ಯೆಗಳು ಕಂಡು ಬಂದ ಮಕ್ಕಳಲ್ಲಿ ಉತ್ತಮ ಫಲಿತಾಂಶ ಪಡೆಯಲು ರೋಗ ನಿರ್ಧಾರದ ನಂತರ ತಕ್ಷಣ ಟ್ರಾನ್ಸ್ ಪ್ಲಾಂಟೇಶನ್ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ ಎಂದರೇನು?
ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ (ನಾಶ ಹೊಂದಿದ ರಕ್ತ ಉತ್ಪಾದಿಸುವ ಜೀವಕೋಶಗಳನ್ನು ಆರೋಗ್ಯಕರ ಜೀವಕೋಶಗಳಿಂದ ಬದಲಾಯಿಸುವುದು) ಅನ್ನು ಮುಂಚಿತವಾಗಿ ಮಾಡಿಸಿದರೆ ಯಶಸ್ಸಿನ ಪ್ರಮಾಣ ಶೇ.80ಕ್ಕಿಂತ ಜಾಸ್ತಿ ಇರುತ್ತದೆ. ಅಲೋಜೆನಿಕ್ ಎಚ್ ಎಸ್ ಸಿ ಟಿ (ದಾನಿಯ ಸ್ಟೆಮ್ ಸೆಲ್ ಗಳನ್ನು ಬಳಸುವುದು) ಚಿಕಿತ್ಸೆ ಮೂಲಕ ಥಲಸ್ಸೇಮಿಯಾ ಮೇಜರ್, ಅಪ್ಲಾಸ್ಟಿಕ್ ಎನಿಮಿಯಾ, ಗಂಭೀರ ಪ್ಲೇಟ್ ಲೆಟ್ ಸಮಸ್ಯೆಗಳು, ಜಿ6ಪಿಐ ಕೊರತೆ, ಪ್ರಾಥಮಿಕ ರೋಗನಿರೋಧಕ ಸಮಸ್ಯೆ ಮತ್ತು ಹೈ- ರಿಸ್ಕ್ ಅಥವಾ ಮತ್ತೆ ಬರಬಹುದಾದ ಲ್ಯುಕೇಮಿಯಾಗೆ ಚಿಕಿತ್ಸೆ ಮಾಡಬಹುದಾಗಿದೆ. ಆಟೋಲಾಗಸ್ ಟ್ರಾನ್ಸ್ ಪ್ಲಾಂಟ್ ಮಾಡುವ ಮೂಲಕ ಹೈ-ರಿಸ್ಕ್ ನ್ಯೂರೋಬ್ಲಾಸ್ಟೋಮಾ ಮತ್ತು ಮೆಡ್ಯುಲೋಬ್ಲಾಸ್ಟೋಮಾದಂತಹ ಕ್ಯಾನ್ಸರ್ ಗಳಿಗೆ ಚಿಕಿತ್ಸೆ ನೀಡಬಹುದು ಎಂದರು.
ವೈದ್ಯಕೀಯ ತಜ್ಞರು ಆರಂಭಿಕ ಹಂತದಲ್ಲಿ ರೋಗ ಪತ್ತೆ ಮಾಡುವ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವ ಮಹತ್ವದ ಕುರಿತು ಹೇಳುತ್ತಾರೆ, ಇದರಿಂದ ನಿರ್ದಿಷ್ಟವಾಗಿ ಲಿವರ್, ಹೃದಯ ಮತ್ತು ಬೋನ್ ಮ್ಯಾರೋ ಸೇರಿದಂತೆ ಅಂಗಾಂಗಳು ಹಾನಿ ಆಗುವುದನ್ನು ತಡೆಯಬಹುದಾಗಿದೆ. ಥಲಸ್ಸೇಮಿಯಾ ಮೇಜರ್ ಸಮಸ್ಯೆ ಇದ್ದಾಗ ಯಾವುದೇ ಅಂಗಗಳ ಗಾಯವಿಲ್ಲದಿದ್ದರೆ 18 ತಿಂಗಳುಗಳಿಂದ ಏಳು ವರ್ಷಗಳ ನಡುವಿನ ಮಕ್ಕಳಿಗೆ ಟ್ರಾನ್ಸ್ ಪ್ಲಾಂಟ್ ಮಾಡುವುದು ಉತ್ತಮ. ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಅಂಗಾಂಗಗಳ ಹಾನಿ ಇಲ್ಲದಿದ್ದರೆ ಟ್ರಾನ್ಸ್ ಪ್ಲಾಂಟೇಶನ್ ಮಾಡಬಹುದು. ರೋಗಿಯ ಪರಿಸ್ಥಿತಿಗೆ ತಕ್ಕಂತೆ ಟ್ರಾನ್ಸ್ ಪ್ಲಾಂಟೇಶನ್ ಪ್ರಕ್ರಿಯೆಯು ಎಂಟು ತಿಂಗಳುಗಳಿಂದ ಒಂದು ವರ್ಷದವರೆಗೆ ನಡೆಯಬಹುದು.
ಥಲಸ್ಸೇಮಿಯಾ ಮೇಜರ್ ಇರುವ ಎರಡು ವರ್ಷದ ಬಾಲಕನಿಗೆ ಅವನ ಪುಟಾಣಿ ಸಹೋದರಿಯ ಸ್ಟೆಮ್ ಸೆಲ್ ಗಳನ್ನು ಬಳಸಿ ಟ್ರಾನ್ಸ್ ಪ್ಲಾಂಟ್ ಮಾಡಲಾಯಿತು. ಟ್ರಾನ್ಸ್ ಪ್ಲಾಂಟ್ ಮಾಡಿದ ನಂತರ ಎರಡು ವರ್ಷಕ್ಕಿಂತ ಹೆಚ್ಚು ಸಮಯ ಆಗಿದ್ದು, ಇಬ್ಬರೂ ಸ್ಟೆಮ್ ಸೆಲ್ ಸ್ವೀಕರಿಸಿದವರು ಮತ್ತು ದಾನ ಮಾಡಿದವರು ಇಬ್ಬರೂ ಆರೋಗ್ಯಕರವಾಗಿದ್ದಾರೆ.
ಗ್ಲಾಂಜ್ಮ್ಯಾನ್ಸ್ ಥ್ರೊಂಬಾಸ್ಥೇನಿಯಾ (ಹುಟ್ಟಿನಿಂದಲೇ ಬರುವ ಗಂಭೀರ ಪ್ರಮಾಣದ ಪ್ಲೇಟ್ ಲೆಟ್ ಸಮಸ್ಯೆ) ಸಮಸ್ಯೆ ಇರುವ ಬಾಲಕಿಯೊಬ್ಬಳು ಬಾಲ್ಯದಿಂದಲೇ ರಕ್ತಸ್ರಾವ ಸಮಸ್ಯೆಯನ್ನು ಎದುರಿಸುತ್ತಿದ್ದಳು. 13 ವರ್ಷಗಳ ಹಿಂದೆ ಅವಳ ಸಹೋದರಿ ದಾನಿಯಾಗಿದ್ದು, ಯಶಸ್ವಿಯಾಗಿ ಟ್ರಾನ್ಸ್ ಪ್ಲಾಂಟ್ ಮಾಡಿಸಲಾಯಿತು. ಈಗ ಆಕೆ ಪಿಯುಸಿ ಎರಡನೇ ವರ್ಷದ ಪರೀಕ್ಷೆಗೆ ತಯಾರಿ ಮಾಡುತ್ತಿದ್ದು, ವೈದ್ಯಳಾಗಲು ಬಯಸುತ್ತಿದ್ದಾಳೆ.
ಇನ್ನೊಬ್ಬ ಥಲಸ್ಸೇಮಿಯಾ ಮೇಜರ್ ಇರುವ ಶಿಶುವಿಗೆ ಹ್ಯಾಪ್ಲೋಐಡೆಂಟಿಕಲ್ (ಅರ್ಧ ಹೊಂದಾಣಿಕೆ) ಟ್ರಾನ್ಸ್ ಪ್ಲಾಂಟ್ ಮಾಡಲಾಗಿದ್ದು, ಎರಡು ವರ್ಷಗಳಿಂದ ರೋಗಮುಕ್ತನಾಗಿದ್ದಾನೆ.
ಟ್ರಾನ್ಸ್ ಫ್ಯುಶನ್ ಅಗತ್ಯವಿರುವ ಜಿ6ಪಿಐ ಡೆಫಿಶಿಯೆನ್ಸಿ ಸಮಸ್ಯೆ ಇರುವ ಎರಡು ಸಹೋದರರಿಗೆ, ಅವರ ಸಹೋದರಿಯಿಂದ ಸ್ಟೆಮ್ ಸೆಲ್ ಪಡೆದು ಚಿಕಿತ್ಸೆ ನೀಡಲಾಯಿತು. ಈಗ ಆ ಸಹೋದರಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮೂರು ಸಹೋದರ, ಸಹೋದರಿಯರೂ ಚೆನ್ನಾಗಿದ್ದಾರೆ. ಈ ಪ್ರದೇಶದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸಲು ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಕಲಬುರಗಿಯಲ್ಲಿ ನಿಯಮಿತವಾಗಿ ಹೊರರೋಗಿಗಳ ಕ್ಲಿನಿಕ್ ಗಳನ್ನು ನಡೆಸುತ್ತಾರೆ.
“ಈ ರೀತಿಯ ಕ್ಲಿನಿಕ್ ನಡೆಸುವುದರಿಂದ ಚಿಕಿತ್ಸೆಯ ಅಗತ್ಯವಿರುವ ಮಕ್ಕಳನ್ನು ಗುರುತಿಸಲು, ಅವರ ಕುಟುಂಬಗಳಿಗೆ ಕೌನ್ಸೆಲಿಂಗ್ ನೀಡಲು ಮತ್ತು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ತಕ್ಷಣ ಟ್ರಾನ್ಸ್ ಪ್ಲಾಂಟೇಶನ್ ಮಾಡಿಸಲು ಸಹಾಯ ಮಾಡಬಹುದು” ಎಂದರು.
ಈ ಸಂದರ್ಭದಲ್ಲಿ ಗೋಪಾಲ್ ಎ ಆರ್ (ಕನ್ಸಲ್ಟೆಂಟ್ ನಾರಾಯಣ ಹಾಸ್ಪಿಟಲ್ ಬೆಂಗಳೂರು) ಕಾಶೀನಾಥ ಎಸ್ ಕೋರೆಗೋಳ( ಹಿರಿಯ ಮಾರುಕಟ್ಟೆ ಅಧಿಕಾರಿ ನಾರಾಯಣ ಹೆಲ್ತ್ ಬೆಂಗಳೂರು) ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande