


ಬಳ್ಳಾರಿ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಯೋಡಿನ್ ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾಗುವ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು, ಪ್ರತಿಯೊಬ್ಬರು ಅಯೋಡಿನ್ ಯುಕ್ತ ಉಪ್ಪು ಬಳಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ.ವಿ.ಕೆ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕದ ಆಶ್ರಯದಲ್ಲಿ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ‘ವಿಶ್ವ ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಯೋಡಿನ್ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯವಶ್ಯಕವಾಗಿದೆ. ಥೈರಾಯಿಡ್ ಗ್ರಂಥಿಯು ನಮ್ಮ ದೇಹಕ್ಕೆ ಅವಶ್ಯಕವಿರುವ ಹಾರ್ಮೋನ್ಗಳನ್ನು ಉತ್ಪತ್ತಿ ಮಾಡಲು ಅಯೋಡಿನ್ ಅಂಶ ಪೂರಕವಾಗಿದೆ. ಹಾಗಾಗಿ ದಿನನಿತ್ಯ ಹಸಿರು ಸೊಪ್ಪು ಮತ್ತು ತರಕಾರಿ ಸೇವನೆಯ ಮೂಲಕ ತಾಜಾ ತರಕಾರಿಯೊಂದಿಗೆ ಅಯೋಡಿನ್ಯುಕ್ತ ಉಪ್ಪು ಬಳಕೆ ಮಾಡುಬೇಕು ಎಂದು ಅವರು ತಿಳಿಸಿದರು.
ಮೈಕ್ರೋಬಯಾಲಾಜಿಸ್ಟ್ ಶರತ್ಬಾಬು. ಕೆ ಅವರು, ಅಯೋಡಿನ್ ಕೊರತೆಯಿಂದ ಹೆಚ್ಚಾಗಿ ಮಕ್ಕಳು, ವಯಸ್ಕರು, ಗರ್ಭಿಣಿ ಮಹಿಳೆಯರಲ್ಲಿ ನ್ಯೂನತೆಗಳು ಕಂಡುಬರುತ್ತವೆ. ಮುಖ್ಯವಾಗಿ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕುಬ್ಜತನ, ದೇಹದ ಅಂಗಾಂಗಳ ಕುಂಠಿತ ಬೆಳವಣಿಗೆ, ವಯಸ್ಕರಲ್ಲಿ ನಿಶ್ಯಕ್ತಿ, ಕಾರ್ಯನಿರ್ವಹಣೆಯಲ್ಲಿ ವೈಫಲ್ಯತೆ, ಗಳಗಂಡ ರೊಗ, ಗರ್ಭೀಣಿಯರಲ್ಲಿ ಪದೇ ಪದೇ ಗರ್ಭಪಾತ, ಸಂತಾನೋತ್ಪತ್ತಿಯ ತೊಂದರೆ, ಅಂಗವಿಕಲತೆ, ಬುದ್ಧಿಮಾಂದ್ಯತೆ ಇರುವ ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಂಕಪ್ಪ ಅವರು, ಮನುಷ್ಯನ ಆರೋಗ್ಯ ಸ್ಥಿರವಾಗಿರುವಲ್ಲಿ ಅಯೋಡಿನ್ ಅಂಶ ತುಂಬಾ ಅವಶ್ಯಕವಾಗಿದೆ. ಹಾಗಾಗಿ ಆರೋಗ್ಯ ಇಲಾಖೆಯಿಂದ ತಿಳಿಸಲಾದ ಮುಂಜಾಗ್ರತಾ ಕ್ರಮಗಳನ್ವಯ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ತಮ್ಮ ಕುಟುಂಬರಿಗೆ ಮತ್ತು ಅಕ್ಕಪಕ್ಕದ ಸಾರ್ವಜನಿಕರಿಗೆ ಅಯೋಡಿನ್ಯುಕ್ತ ಉಪ್ಪನ್ನು ಬಳಸಲು ತಿಳಿಸಬೇಕು ಮತ್ತು ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಧ್ಯಾಪಕರಾದ ನಾಗರಾಜಪ್ಪ, ಗಾದಿಲಿಂಗಪ್ಪ, ತಿಮ್ಮಪ್ಪ, ಅಕ್ಕಿ ಮಲ್ಲಿಕಾರ್ಜುನ, ಎನ್.ಸಿ.ಡಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ. ಜಬೀನ್ ತಾಜ್, ಜಿಲ್ಲಾ ಮೈಕ್ರೋಬಯಾಲಾಜಿಸ್ಟ್ ಶರತ್ಬಾಬು, ಜಿಲ್ಲಾ ತಂಬಾಕು ಸಲಹೆಗಾರ ಪ್ರಶಾಂತ್ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್