
ಕೊಪ್ಪಳ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಯುವನಿಧಿ ಸೌಲಭ್ಯ ಕುರಿತು ಇಲಾಖಾ ವತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಕೈಗೊಂಡು ನಿರುದ್ಯೋಗಿ ಯುವಕರು ಯುವನಿಧಿ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವಂತೆ ಕ್ರಮವಹಿಸಿ ಎಂದು ಕೊಪ್ಪಳ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಬಾಲಚಂದ್ರನ್ ಅವರು ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಸೋಮವಾರದಂದು ಕೊಪ್ಪಳ ತಾಲ್ಲೂಕು ಪಂಚಾಯತಿಯ ಸಭಾಂಗಣದಲ್ಲಿ ಜರುಗಿದ ಕೊಪ್ಪಳ ತಾಲ್ಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಂದ ಪ್ರತಿ ಸಿಲಿಂಡರಿಗೆ ರೂ.920/- ರಂತೆ ಮಾರಾಟ ಮಾಡುತ್ತಿವೆ. ಆದರೆ ಸಾಗಾಣಿಕೆ ವೆಚ್ಚ ಸೇರಿದಂತೆ ಒಟ್ಟು ರೂ.890/- ಇರುತ್ತದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಇದರ ಕುರಿತು ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಹಾಗೂ ಪೆಟ್ರೋಲ್ ಬಂಕ್ ನಲ್ಲಿ ಗಾಳಿ ತುಂಬುವ ಯಂತ್ರ ಹಾಗು ಶೌಚಾಲಯ ವ್ಯವಸ್ಥೆಯನ್ನು ನಿರ್ವಹಿಸಲು ನಿರ್ದೇಶನ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ ಅವರು ಮಾತನಾಡಿ, ಗ್ಯಾಸ್ ಏಜೆನ್ಸಿಯವರನ್ನು ವಿಚಾರಿಸಿದ್ದು, 5 ಕಿ.ಮೀ ವ್ಯಾಪ್ತಿಯೊಳಗೆ ಉಚಿತವಾಗಿ ಸಾಗಾಣಿಕೆ ಮಾಡಲಾಗುತ್ತದೆ. ಹೆಚ್ಚುವರಿಯಾಗಿ ಪ್ರತಿ ಕಿ.ಮೀ ಗೆ ರೂ.1.60 ಪೈಸೆ ಸಾಗಾಣಿಕೆ ವೆಚ್ಚವನ್ನು ಪಡೆಯಲು ಅವಕಾಶವಿರುವ ಕುರಿತು ಮಾಹಿತಿ ನೀಡಿದರು. ಗ್ಯಾಸ್ ಏಜೆನ್ಸಿಯವರು ತಮ್ಮ ಅಂಗಡಿಯಲ್ಲಿ ಸಂದರ್ಶನ ಪುಸಕ್ತವನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ತಿಳಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾಲ್ಲುಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ರಾಮಣ್ಣ ಚೌಡ್ಕಿ ಅವರು ಮಾತನಾಡಿ, ಇರಕಲ್ಲಗಡಾ ಮಾರ್ಗವಾಗಿ ಸಂಚರಿಸುವ ಬಸ್ಗಳನ್ನು ಟಣಕನಕಲ್ನ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಪದವಿಪೂರ್ವ ಕಾಲೇಜು ಹತ್ತಿರ ಕೋರಿಕೆಯ ಬಸ್ ನಿಲುಗಡೆ ಮಾಡುವಂತೆ ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ವರದಿಯ ಕುರಿತು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಅನುಷ್ಠಾನ ಸಮಿತಿ ಸದಸ್ಯರಾದ ದೇವರಾಜ ನಡುವಿನಮನಿ, ರಮೇಶ ಹ್ಯಾಟಿ, ಜ್ಯೋತಿ ಗೊಂಡಬಾಳ, ಸವಿತಾ ಗೋರಂಟ್ಲಿ, ಅನ್ನದಾನಯ್ಯಸ್ವಾಮಿ, ಪರಶುರಾಮ ಕೊರವರ, ಮೆಹಬೂಬಪಾಷಾ ಮಾನ್ವಿ, ಲಕ್ಷ್ಮಣ ಡೊಳ್ಳಿನ, ಅನ್ವರ ಹುಸೇನ ಗಡಾದ, ಪಂಚ ಗ್ಯಾರಂಟಿ ಯೋಜನೆಗಳ ಇಲಾಖಾಧಿಕಾರಿಗಳು, ತಾಲ್ಲೂಕು ಪಂಚಾಯತಿ ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್