
ಚಾಮರಾಜನಗರ, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಚಾಮರಾಜನಗರ ಜಿಲ್ಲೆಯ ಬಂಡಿಪುರ ಹುಲಿ ಮೀಸಲು ಅರಣ್ಯದ ಹೆಡಿಯಾಲಾ ಶ್ರೇಣಿಯ ಮುಲ್ಲೂರು ಹುಂಡಿಯಲ್ಲಿ ಇಂದು ಬೆಳಿಗ್ಗೆ ನಡೆದ ದಾರುಣ ಘಟನೆಯಲ್ಲಿ 61 ವರ್ಷದ ರೈತ ಶಿವಣ್ಣ ಅವರು ಹುಲಿಯ ದಾಳಿಗೆ ಬಲಿಯಾಗಿದ್ದಾರೆ. ಹುಲಿ ಹೊಲದ ಬಳಿಯಲ್ಲಿ ಏಕಾಏಕಿ ದಾಳಿ ನಡೆಸಿದ್ದು, ಸ್ಥಳದಲ್ಲಿಯೇ ಶಿವಣ್ಣ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಈ ಪ್ರದೇಶದಲ್ಲಿ ಹುಲಿಗಳ ಚಟುವಟಿಕೆಗಳು ಹೆಚ್ಚಾಗಿದ್ದು, ಕಳೆದ ವಾರ ನುಗು ವನ್ಯಜೀವಿ ಅಭಯಾರಣ್ಯದ ಗಡಿಯಲ್ಲಿ ಮತ್ತೊಬ್ಬ ರೈತನ ಮೇಲೆ ಹುಲಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿತ್ತು.
ಆ ಘಟನೆಯ ನಂತರ ಹೆಡಿಯಾಲಾ ಮತ್ತು ನುಗು ಅರಣ್ಯ ವಲಯಗಳಲ್ಲಿ ಎರಡು ಹುಲಿಗಳನ್ನು ಸೆರೆಹಿಡಿದು ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೂ, ಸ್ಥಳೀಯ ಗ್ರಾಮಾಂತರ ಪ್ರದೇಶಗಳಲ್ಲಿ ಹುಲಿಗಳ ಸಂಚಾರ ಮುಂದುವರೆದಿರುವುದು ಆತಂಕ ಉಂಟುಮಾಡಿದೆ.
ಗ್ರಾಮಸ್ಥರು ಈಗ ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, “ಹುಲಿಗಳು ಹಳ್ಳಿಯ ಅಂಚಿನಲ್ಲಿ ಅಡಗಿಕೊಂಡಿವೆ, ನಮ್ಮ ಜೀವಕ್ಕೆ ಭಯವಾಗಿದೆ” ಎಂದು ಕಿಡಿಕಾರಿದ್ದಾರೆ. ಅವರು ತಕ್ಷಣ ಕ್ರಮ ಕೈಗೊಂಡು ಹುಲಿಯನ್ನು ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಬಂಡಿಪುರ ಹುಲಿ ಮೀಸಲು ಅರಣ್ಯದ ಕ್ಷೇತ್ರ ನಿರ್ದೇಶಕ ಎಸ್. ಪ್ರಭಾಕರನ್ ಅವರು ಸ್ಥಳೀಯ ಅಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದು, “ನಾವು ತಂಡದೊಂದಿಗೆ ನೆಲಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಜನರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ” ಎಂದು ಹೇಳಿದ್ದಾರೆ.
ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮುಲ್ಲೂರು ಹುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಯದ ವಾತಾವರಣ ಉಂಟಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa