
ಬೆಂಗಳೂರು, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಆರ್ ಎಸ್ ಎಸ್ ನಿಷೇಧಕ್ಕೆ ಸಂಬಂಧಪಟ್ಟಂತೆ ಖಾಸಗಿ ಚಾನೆಲ್ ಗೆ ಸಂದರ್ಶನ ನೀಡಿರುವ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡುವುದರ ಮೂಲಕ ಒಂದು ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಆರ್ ಎಸ್ ಎಸ್ ಬ್ಯಾನ್ ಮಾಡುವುದಾದರೆ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಬಹುದಲ್ಲವೇ ಎಂದು ಹೇಳುವ ಮೂಲಕ ತಮ್ಮ ದ್ವಂದ್ವ ವ್ಯಕ್ತಿತ್ವವನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ ಬಾಬು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸ್ವತಂತ್ರ ಪೂರ್ವದಲ್ಲಿ ಎರಡು ಬಾರಿ ಮತ್ತು ಸ್ವತಂತ್ರಾ ನಂತರ ಮೂರು ಬಾರಿ ಬ್ಯಾನ್ ಗೆ ಒಳಗಾಗಿದ್ದ ಸಂಘ ಪರಿವಾರದ ಪರವಾಗಿ ಸಮರ್ಥ ವಕ್ತಾರರಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಹೆಗಲಿಗೆ ಹೇರಿಸಿಕೊಂಡಿದ್ದಾರೆ!
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲಿಗೆ ಯತ್ನಿಸಿದ ಸನಾತನಿಗಳ ಮೇಲೆ ಧ್ವನಿಯೆತ್ತದ ಸಂತೋಷ ಹೆಗ್ಡೆ, ಒಂದೂ ಸಾರ್ವಜನಿಕ ಚರ್ಚೆಗೆ ವೇದಿಕೆ ಕಲ್ಪಿಸದ ಖಾಸಗಿ ಚಾನೆಲ್ ಗಳು ಆರ್ ಎಸ್ ಎಸ್ ಪರವಾಗಿ ಪೈಪೋಟಿಗೆ ಬಿದ್ದು ಸಮರ್ಥನೆಗೆ ಮುಂದಾಗಿರುವುದು ವ್ಯವಸ್ಥೆಯ ವಿಪರ್ಯಾಸ! ಕಾರ್ಯಕ್ರಮದ ಮಧ್ಯೆ ಆರ್ ಎಸ್ ಎಸ್ ಗೆ ಅನುಮತಿ ನಿರಾಕರಿಸಲು ಯಾವುದೇ ಗುರುತರ ಆರೋಪ ಇಲ್ಲ, ಅವರು ಕೊಲೆ ಮಾಡಿಲ್ಲ ಎನ್ನುವ ಹೆಗ್ಡೆರವರಿಗೆ ಮಹಾತ್ಮ ಗಾಂಧಿಯವರ ಕೊಲೆ ಮತ್ತು ಕೊಲೆ ಆರೋಪಿಗಳು ಕಣ್ಣಿಗೆ ಕಾಣಿಸುವುದಿಲ್ಲ. ಅದೇ ರೀತಿ ವಯೋಸಹಜ ಗಾಂಧಿ ರವರ ಊರುಗೋಲು, ಸಂಘ ಪರಿವಾರದ ಲಾಠಿಗೆ ಸಮೀಕರಿಸಿ ನಕ್ಕು ಮಾತನಾಡುವ ಮನಸ್ಥಿತಿ ಇವರ ಇನ್ನೊಂದು ಮುಖವನ್ನು ಬಿಚ್ಚಿಡುತ್ತದೆ. ಆರ್ ಎಸ್ ಎಸ್ ಎಂದರೆ ಒಂದು ಸಂಘ ಪರಿವಾರ ದೇಶದಲ್ಲಿ ಸುಮಾರು 50 ಸಂಘಟನೆಗಳು ಬೇರೆಬೇರೆ ಹೆಸರಿನಲ್ಲಿ ವಿಷಬೀಜ ಬಿತ್ತಲು ಅರ್ಪಣೆಗೊಂಡಿದೆ.
ನಮ್ಮ ದೇಶದಲ್ಲಿ ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಗೊಂಡ ನ್ಯಾಯಾಧೀಶರಲ್ಲಿ ಸಂತೋಷ್ ಹೆಗ್ಡೆ ಒಬ್ಬರು. ಅವರ ತಂದೆ ಕೆ.ಎಸ್. ಹೆಗ್ಡೆ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು. ಕೇಂದ್ರದ ಮೊದಲ ಕಾಂಗ್ರೆಸ್ಸೇತರ ಜನತಾ ಪಕ್ಷದ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆ.ಎಸ್. ಹೆಗ್ಡೆ, ಕಾಂಗ್ರೆಸ್ ಪಕ್ಷ ಮತ್ತು ಇಂದಿರಾ ಗಾಂಧಿಯವರ ವಿರುದ್ಧವಾಗಿದ್ದರು. ಕೇಂದ್ರ ಕಾಂಗ್ರೆಸ್ ಸರ್ಕಾರದಲ್ಲಿ ತಮಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಾಧೀಶರಾಗುವ ಅವಕಾಶ ತಪ್ಪಿತ್ತೆಂಬ ಇವರ ಭಾವನೆಗೆ ಪೂರಕವಾಗಿ ಸಂತೋಷ್ ಹೆಗ್ಡೆರವರ ಹೇಳಿಕೆಯನ್ನು ಗಮನಿಸಬಹುದು. ತಾತ್ವಿಕ ಕಾರಣಗಳಿಗಾಗಿ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ 2010ರಲ್ಲಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದ ಸಂತೋಷ್ ಹೆಗ್ಡೆ, ಅಂದು ಬಿಜೆಪಿಯ ಎಲ್.ಕೆ.ಅಡ್ವಾಣಿರವರ ಕರೆಗೆ ಓಗೊಟ್ಟು ತಮ್ಮ ರಾಜೀನಾಮೆ ಪತ್ರ ಹಿಂದಕ್ಕೆ ಪಡೆದಿದ್ದರು. ಈಗಿನ ಅವರ ಹೇಳಿಕೆ ಅದರ ಮುಂದುವರೆದ ಭಾಗ.
ಪ್ರಿಯಾಂಕ ಖರ್ಗೆ ರವರ ಒಂದು ಪತ್ರಕ್ಕೆ ತಲ್ಲಣಗೊಂಡಿರುವ ಆರ್ ಎಸ್ ಎಸ್ ಮತ್ತು ಸಂಘ ಪರಿವಾರ, ವೈಯಕ್ತಿಕ ನಿಂದನೆಯಿಂದ ಹಿಡಿದು ಪ್ರಾಣ ಬೆದರಿಕೆ ಒತ್ತುವ ತನಕ ತನ್ನ ಪ್ರಯತ್ನಗಳನ್ನು ಬಿಚ್ಚಿಡುತ್ತಿದೆ. ಸಂತೋಷ್ ಹೆಗ್ಡೆ ರವರ ಸಂಘ ಪರಿವಾರದ ಹೇಳಿಕೆ ಇದರಿಂದ ಹೊರತಾಗಿಲ್ಲ. ಸಂವಿಧಾನದ ಅಡಿಯಲ್ಲಿ ನೀಡಿರುವ ಆರ್ಟಿಕಲ್ 19ರ ಮೂಲಭೂತ ಹಕ್ಕನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸಂತೋಷ್ ಹೆಗ್ಡೆ ಮತ್ತು ಅವರ ಪಟಾಲಂ ವ್ಯಾಖ್ಯಾನ ಮಾಡಲು ಹೊರಟಿದೆ. ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರಗಳ ನಿಯಂತ್ರಣ ಅಧಿಕಾರವ ಸಮರ್ಥಿಸಿದೆ.
ಕರ್ನಾಟಕದಲ್ಲಿ ಮತ್ತು ದೇಶದಲ್ಲಿ ನಡೆದಿರುವ ಹಲವಾರು ಕೋಮು ಗಲಭೆಗಳ ಹಿಂದೆ ಸಂಘ ಪರಿವಾರದ ಚಿತಾವಣೆ ಇರುವುದು ಅಂಕಿ ಅಂಶಗಳ ಸಮೇತ ಗೃಹ ಇಲಾಖೆ ನೀಡಿರುತ್ತದೆ. ಸಂಘ ಪರಿವಾರದ ಜೊತೆಗೆ ಯಾವುದೇ ಸಂಘಟನೆಗಳು ದೇಶದ ಕಾನೂನು ಸುವ್ಯವಸ್ಥೆ ಕದಡುವ, ಶಾಂತಿ ಕದಡುವ, ಕೋಮು ಪ್ರಚೋದನೆ ಉಂಟು ಮಾಡುವ, ದೇಶದ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಸಂದರ್ಭದಲ್ಲಿ ಸರ್ಕಾರಗಳು ಕೈಕಟ್ಟಿ ಕೂರಲು ಸಾಧ್ಯವಿಲ್ಲ ಎಂದು ರಮೇಶ್ ಬಾಬು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa