
ಗದಗ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕ್ರೀಡೆಗಳಲ್ಲಿ ಹೆಚ್ಚು ಪ್ರತಿಭೆಗಳಿರುವ ಜಿಲ್ಲೆ ಗದಗ ಜಿಲ್ಲೆಯಾಗಿದೆ. ಇದು ನಮ್ಮ ಹೆಮ್ಮೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ) ಗದಗ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ದೇಶ್ವರ ವಿಜ್ಞಾನ ವಾಣಿಜ್ಯ ಹಾಗೂ ಕಲಾ ಪದವಿ ಪೂರ್ವ ಕಾಲೇಜು ಗದಗ ಇವುಗಳ ಸಹಯೋಗದಲ್ಲಿ ಗದಗ ನಗರದ ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪ್ರಸಕ್ತ ಸಾಲಿನ ಪದವಿ ಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಯುವಕರು ಕ್ರೀಡಾ ಮನೋಭಾವವನ್ನು ಅಳವಡಿಸಿಕೊಂಡರೆ ಶಾರೀರಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ದೃಢತೆ ಹಾಗೂ ನಾಯಕತ್ವ ಗುಣಗಳು ಬೆಳೆಯುತ್ತವೆ. ಇಂತಹ ಯುವ ಶಕ್ತಿಯೇ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂದರು.
ಕ್ರೀಡೆ ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ. ಸೋಲಿನಲ್ಲಿ ಸಹ ಕಲಿಯುವ ನೈತಿಕತೆ, ಗೆಲುವಿನಲ್ಲಿ ಸಹ ವಿನಮ್ರತೆ ಇರಬೇಕೆಂಬ ಗುಣ ಕ್ರೀಡೆಯಿಂದಲೇ ಬರುವುದು. ವಿದ್ಯಾರ್ಥಿಗಳು ಕೇವಲ ಪಾಠ್ಯ ವಿಷಯಗಳಲ್ಲ, ಕ್ರೀಡಾಂಗಣದಲ್ಲೂ ಸಮರ್ಥರಾಗಬೇಕು. ನಿಜವಾದ ಶಿಕ್ಷಣವು ಶರೀರ, ಮನಸ್ಸು ಹಾಗೂ ಆತ್ಮದ ಸಮತೋಲನದಲ್ಲಿದೆ ಎಂದು ಸಚಿವ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಕ್ರೀಡೊತ್ಸಾಹ ತುಂಬಿದರು.
ಗದಗ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡೆ ಮತ್ತು ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು. ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿಯೂ ಜಿಲ್ಲೆ ಮುಂಚೂಣಿಯಲ್ಲಿರಲಿ ಎಂಬ ಆಶಯ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯು ಕಬ್ಬಡ್ಡಿ ಹಾಕಿ ಅಥ್ಲೆಟಿಕ್ ಪುಟ್ಬಾಲ್ ಕ್ರೀಡೆಗಳಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗದಗಿಗೆ ಕೀರ್ತಿಯನ್ನು ತಂದುಕೊಟ್ಟಿದೆ. ಇದು ನಮ್ಮ ಹೆಮ್ಮೆ. ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ ಜೊತೆಗೆ ತರಬೇತಿಗೆ ಹಾಗೂ ಕ್ರೀಡಾ ಸೌಲಭ್ಯವನ್ನು ಸರ್ಕಾರದಿಂದ ಹೆಚ್ಚು ಹೆಚ್ಚು ಒದಗಿಸಲಾಗಿದೆ ಎಂದು ಹೇಳಿದರು.
ಯುವ ಜನರು ಯುವ ಜನರು ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ಕ್ರೀಡಾ ಸಾಧನೆ ಮಾಡಬೇಕು ದುಷ್ಟಗಳಿಂದ ಮುಕ್ತರಾಗಿ ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರು ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲ್ಲುಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಕಡೇಮನಿ, ಯೋಗೇಶ್ ಕುಮಾರ, ಎಸ್.ಪಿ ರೋಹನ್ ಜಗದೀಶ್, ಎಡಿಸಿ ಡಾ. ದುರಗೇಶ್ ಕೆ ಆರ್, ಎಸಿ ಗಂಗಪ್ಪ ಎಂ, ಡಿಡಿಪಿಯು ಸಿದ್ದಲಿಂಗ ಮಸನಾಯಕ, ಶರಣು ಗೊಗೇರಿ, ಕೊಟ್ರೇಶ್ ವಿಭೂತಿ, ಕೊಟ್ರೇಶ್ ಮೆಣಸಿನಕಾಯಿ ಸೇರಿದಂತೆ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಕರು, ನಿರ್ಣಾಯಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP