
ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಕರ್ನಾಟಕದ ಆನೆ ಶಿಬಿರಗಳಲ್ಲಿ ಬಂಧಿತ ಆನೆಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಜೋಸೆಫ್ ಹೂವರ್ ಅವರು, ಶಿಬಿರಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವುದರ ಜತೆಗೆ ತಜ್ಞ ವನ್ಯಜೀವಿ ಪಶುವೈದ್ಯರನ್ನು ನೇಮಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ಕರ್ನಾಟಕದ ಅಮೂಲ್ಯ ವನ್ಯಜೀವಿಗಳು ಹಾಗೂ ದುರ್ಬಲ ರೈತರ ಹಿತದೃಷ್ಟಿಯಿಂದ ಸಮಸ್ಯೆಯನ್ನು ಸಕಾರಾತ್ಮಕವಾಗಿ ಪರಿಹರಿಸುವಂತೆ ಅವರು ಮನವಿ ಮಾಡಿದ್ದಾರೆ. ರಾಜ್ಯದ ಎಲ್ಲ ಆನೆ ಶಿಬಿರಗಳಲ್ಲಿ ನಿರ್ಲಕ್ಷ್ಯದ ಕಾರಣದಿಂದ ಬಂಧಿತ ಆನೆಗಳು ತೊಂದರೆ ಅನುಭವಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಕುಂಕಿಗಳಾಗಿ ಪಳಗಿಸಲು ತರಬೇತಿ ನೀಡುವ ಸಂದರ್ಭದಲ್ಲಿ ಆನೆಗಳನ್ನು ನಿರ್ದಯವಾಗಿ ಹಿಂಸಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಲ್ಲಿನ ಪರಿಸ್ಥಿತಿ ಹದಗೆಡುತ್ತಿದೆ ಎಂದು ತಿಳಿಸಿರುವ ಅವರು, ಹಂಚಿಕೊಂಡಿರುವ ಛಾಯಾಚಿತ್ರಗಳು ಸಕ್ರೆಬೈಲು ಶಿಬಿರಕ್ಕೆ ಸಂಬಂಧಿಸಿದವು ಎಂದು ಹೇಳಿದ್ದಾರೆ.
ಬಾಲಣ್ಣ ಎಂಬ ಆನೆಗೆ ಕಿವಿಗೆ ಗಾಯವಾಗಿದ್ದು, ಅಡಕ್ಕಾ ಬಡಕ್ಕಾ ಎಂಬ ಆನೆ ಕಾಲು ಮುರಿತದಿಂದ ಬಳಲುತ್ತಿದೆ. ವಿಕ್ರಾಂತ್ ಮತ್ತು ಶೌರ್ಯ ಸೇರಿದಂತೆ ಆನೆಗಳು ತಜ್ಞ ವನ್ಯಜೀವಿ ಪಶುವೈದ್ಯರ ಕೊರತೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಇಲಾಖೆಯಿಂದ ಪಶುವೈದ್ಯರನ್ನು ನಿಯೋಜಿಸಲಾಗುತ್ತಿದೆಯಾದರೂ, ಅವರು ತಜ್ಞ ವನ್ಯಜೀವಿ ಪಶುವೈದ್ಯರಲ್ಲ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಜ್ಞ ವನ್ಯಜೀವಿ ಪಶುವೈದ್ಯರನ್ನು ನೇಮಿಸುವ ತುರ್ತು ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ರಾಜ್ಯದ ಯಾವುದೇ ಆನೆ ಶಿಬಿರದಲ್ಲೂ ಅಗತ್ಯ ವೈದ್ಯಕೀಯ ಸೌಲಭ್ಯಗಳಿಲ್ಲ ಎಂದು ಆರೋಪಿಸಿರುವ ಅವರು, ಈ ವಿಷಯವನ್ನು ಮಾಜಿ ಅರಣ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಆನೆ ಶಿಬಿರಗಳಲ್ಲಿ, ವಿಶೇಷವಾಗಿ ಸಕ್ರೆಬೈಲು ಶಿಬಿರದಲ್ಲಿ ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಮುಖ್ಯಮಂತ್ರಿ ಅವರನ್ನು ಜೋಸೆಫ್ ಹೂವರ್ ಅವರು ವಿನಮ್ರವಾಗಿ ಕೋರಿದ್ದಾರೆ. ಕರ್ನಾಟಕದ ಜೀವವೈವಿಧ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.