ಪಂಚ ಕಾಯಕಗಳ ಮೂಲಕ ಸಮಾಜ ನಿರ್ಮಾಣಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ಎಸ್.ವಿ. ಸಂಕನೂರ
ಗದಗ, 17 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ವಿಶ್ವಕರ್ಮ ಸಮುದಾಯದವರು ದೈವದತ್ತವಾಗಿ ಪಂಚ ವಿದ್ಯೆಗಳನ್ನು ಕರಗತ ಮಾಡಿಕೊಂಡು, ದೇಶದ ಕಲೆ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು. ನಗರದ ಜಿಲ್ಲಾಡಳಿತ, ಜಿಲ್ಲಾ
ಫೋಟೋ


ಗದಗ, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ವಿಶ್ವಕರ್ಮ ಸಮುದಾಯದವರು ದೈವದತ್ತವಾಗಿ ಪಂಚ ವಿದ್ಯೆಗಳನ್ನು ಕರಗತ ಮಾಡಿಕೊಂಡು, ದೇಶದ ಕಲೆ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.

ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡಗಿತನ, ಕಮ್ಮಾರಿಕೆ, ಶಿಲ್ಪಕಲೆ ಸೇರಿದಂತೆ ವಿವಿಧ ಕಲೆಗಳಲ್ಲಿ ವಿಶ್ವಕರ್ಮ ಸಮುದಾಯದವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದೇವತೆಗಳ ಅರಮನೆ, ಪಾಂಡವರ ಅರಗಿನ ಮನೆ ಹಾಗೂ ದೇಶದ ಅನೇಕ ಭವ್ಯ ದೇವಾಲಯಗಳ ನಿರ್ಮಾಣ ಮತ್ತು ಶಿಲ್ಪಕಲೆಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಸ್ಮರಣೀಯವಾಗಿದೆ ಎಂದರು.

ಸಮುದಾಯದ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಮಧ್ಯಮ ಹಾಗೂ ಕೆಳವರ್ಗದಲ್ಲಿದ್ದು, ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಕನೂರ ಕರೆ ನೀಡಿದರು.

ಮಕ್ಕಳು ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕಾದರೆ ಶಿಕ್ಷಣವೇ ಪ್ರಮುಖ ಮಾರ್ಗವಾಗಿದೆ. ಆದ್ದರಿಂದ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಅವರಿಗೆ ಉತ್ತಮ ಶಿಕ್ಷಣ ಹಾಗೂ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ವಿಶ್ವಕರ್ಮ ಸಮುದಾಯ ಸಂಖ್ಯೆಯಲ್ಲಿ ಸಣ್ಣದಾಗಿದ್ದರೂ, ಸಮುದಾಯದ ಸದಸ್ಯರಲ್ಲಿರುವ ಒಗ್ಗಟ್ಟು ಮಾದರಿಯಾಗಿದೆ. “ಒಗ್ಗಟ್ಟಿರುವಲ್ಲಿ ಬಲವಿದೆ, ಬಲವಿರುವಲ್ಲಿ ಯಶಸ್ಸಿದೆ” ಎಂಬ ಮಾತಿನಂತೆ ಪ್ರತಿಯೊಬ್ಬರೂ ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಮಾಜದ ಯುವಜನರು ತಮ್ಮ ಸಾಂಪ್ರದಾಯಿಕ ಕಲೆ ಮತ್ತು ಕೌಶಲ್ಯಗಳನ್ನು ಉಳಿಸಿಕೊಂಡು, ಆಧುನಿಕ ಶಿಕ್ಷಣ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಅವಕಾಶಗಳು ದೊರೆಯಲಿವೆ. ಸಮಾಜದ ಎಲ್ಲರೂ ಪರಸ್ಪರ ಸಹಕಾರ, ಶಿಕ್ಷಣ ಮತ್ತು ಸಂಘಟನೆಯ ಮೂಲಕ ಮುನ್ನಡೆದರೆ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ತಿಳಿಸಿದರು.

ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ಬಿ.ಎಂ. ಯರಕದ ಅವರು ಮಾತನಾಡಿ, ಶ್ರೀಕೃಷ್ಣ ಪರಮಾತ್ಮನಿಗಾಗಿ ದ್ವಾರಕಾ ನಗರಿಯನ್ನು ನಿರ್ಮಿಸಿದ ಶಿಲ್ಪಿ ವಿಶ್ವಕರ್ಮ ಎಂದು ಪೌರಾಣಿಕ ಕಥನಗಳಲ್ಲಿ ಉಲ್ಲೇಖಿಸಲಾಗಿದೆ. ಶ್ರೀವಿಷ್ಣುವಿಗೆ ಸುದರ್ಶನ ಚಕ್ರ, ಪರಮೇಶ್ವರನಿಗೆ ತ್ರಿಶೂಲ ಹಾಗೂ ಷಣ್ಮುಖನಿಗೆ ಶಕ್ತ್ಯಾಯುಧ ಸೇರಿದಂತೆ ಹಲವು ದಿವ್ಯಾಸ್ತ್ರಗಳನ್ನು ನಿರ್ಮಿಸಿಕೊಟ್ಟ ಮಹಾನ್ ತಕ್ಷನಾಗಿ ವಿಶ್ವಕರ್ಮನನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು.

ರೈತನ ಕಾಯಕಕ್ಕೆ ಅಗತ್ಯವಾದ ಉಪಕರಣಗಳನ್ನು ರೂಪಿಸಿ, ಅವುಗಳನ್ನು ನಿರಂತರವಾಗಿ ದುರಸ್ತಿ ಹಾಗೂ ಸುಧಾರಣೆ ಮಾಡುವ ಮೂಲಕ ವಿಶ್ವಕರ್ಮ ಸಮುದಾಯದ ಕಾಯಕಜೀವಿಗಳು ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿದ್ದಾರೆ. ಕಮ್ಮಾರ, ಬಡಗಿ, ಶಿಲ್ಪಿ ಸೇರಿದಂತೆ ವಿಶ್ವಕರ್ಮ ಸಮುದಾಯದ ವಿವಿಧ ಕಾಯಕಗಳು ಸಮಾಜದ ನಿತ್ಯಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಇವರ ಕಾಯಕ ಮತ್ತು ಶ್ರಮವಿಲ್ಲದೆ ಕೃಷಿ ಸೇರಿದಂತೆ ಸಮಾಜದ ಹಲವು ಮೂಲಭೂತ ಚಟುವಟಿಕೆಗಳು ಸುಗಮವಾಗಿ ಸಾಗುವುದು ಕಷ್ಟವಾಗುತ್ತಿತ್ತು ಎಂದು ವಿವರಿಸಿದರು.

ದೇಶದ ಶಿಲ್ಪಕಲೆ ಹಾಗೂ ವಾಸ್ತುಶಿಲ್ಪದ ಇತಿಹಾಸದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ವಿಶೇಷವಾಗಿದೆ. ಐಹೊಳೆ, ಬಾದಾಮಿ, ಬೇಲೂರು ಹಾಗೂ ಹಳೆಬೀಡು ಸೇರಿದಂತೆ ಕರ್ನಾಟಕದ ಹಲವು ಐತಿಹಾಸಿಕ ತಾಣಗಳಲ್ಲಿರುವ ಭವ್ಯ ದೇವಾಲಯಗಳು ಹಾಗೂ ಶಿಲ್ಪಕೃತಿಗಳು ಶಿಲ್ಪಿಗಳ ಅಪೂರ್ವ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.

ವಿಶ್ವಕರ್ಮ, ಜಕಣಾಚಾರಿ ಹಾಗೂ ಡಂಕಣಾಚಾರಿ ಅವರಂತಹ ಪ್ರಸಿದ್ಧ ಶಿಲ್ಪಿಗಳ ಕಲಾ ಪರಂಪರೆಯನ್ನು ಸ್ಮರಿಸಿದ ಅವರು, ಕಲ್ಲಿಗೆ ಕೇವಲ ರೂಪ ನೀಡುವುದಷ್ಟೇ ಅಲ್ಲದೆ, ಅದರಲ್ಲಿ ಭಾವನೆ, ಸೌಂದರ್ಯ ಹಾಗೂ ಕಲಾತ್ಮಕತೆಯನ್ನು ಮೂಡಿಸುವ ಸಾಮರ್ಥ್ಯವನ್ನು ನಮ್ಮ ಶಿಲ್ಪಿಗಳು ಹೊಂದಿದ್ದರು ಎಂದು ತಿಳಿಸಿದರು.

ವಿಶ್ವಕರ್ಮ ಸಮುದಾಯದ ಪಂಚ ಕಾಯಕಗಳ ಪರಂಪರೆಯಲ್ಲಿ ಕೌಶಲ್ಯ, ಶ್ರಮ, ಸೃಜನಶೀಲತೆ ಮತ್ತು ನಿಖರತೆ ಪ್ರಮುಖವಾಗಿವೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಈ ಕಾಯಕ ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ವಿಶ್ವಕರ್ಮರ ಕಾಯಕವನ್ನು ಗೌರವಿಸುವುದು ಎಂದರೆ ಕೇವಲ ಒಂದು ಸಮುದಾಯದ ಪರಂಪರೆಯನ್ನು ಗೌರವಿಸುವುದಲ್ಲ; ಶ್ರಮ, ಕೌಶಲ್ಯ, ಸೃಜನಶೀಲತೆ ಮತ್ತು ದೇಶದ ನಿರ್ಮಾಣಕ್ಕೆ ಕೊಡುಗೆ ನೀಡಿದ ಸಮಸ್ತ ಕಾಯಕ ಸಂಸ್ಕೃತಿಯನ್ನು ಗೌರವಿಸಿದಂತಾಗುತ್ತದೆ ಎಂದು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಸಾಧನೆಗೈದ ಗಣ್ಯರಿಗೆ, ಹಿರಿಯರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ವಿ. ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande