

ಕಠ್ಮಂಡು, 27 ಆಗಸ್ಟ್ (ಹಿ.ಸ.):
ಆ್ಯಂಕರ್:ನೇಪಾಳದ ರಸುವಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೋಟೆಕೋಶಿ ನದಿಯಲ್ಲಿ ಬುಧವಾರ ಬೆಳಗ್ಗೆ ಏಕಾಏಕಿ ಉಂಟಾದ ಭೀಕರ ಪ್ರವಾಹಕ್ಕೆ ಕನಿಷ್ಠ 157 ಮಂದಿ ಮೃತಪಟ್ಟಿದ್ದು, ಸುಮಾರು 700 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ವಿದೇಶಿ ಪ್ರಜೆಗಳು ಹಾಗೂ ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ. ಮೂರು ಜಿಲ್ಲೆಗಳಲ್ಲಿ ಪ್ರವಾಹ ಭಾರೀ ಹಾನಿ ಉಂಟುಮಾಡಿದ್ದು, ಮನೆಗಳು, ವಾಹನಗಳು ಹಾಗೂ ಪ್ರಮುಖ ಮೂಲಸೌಕರ್ಯಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇತ್ತೀಚಿನ ವರ್ಷಗಳಲ್ಲಿ ನೇಪಾಳ ಕಂಡ ಅತ್ಯಂತ ಭೀಕರ ಜಲ ದುರಂತ ಇದಾಗಿದೆ ಎಂದು ಹೇಳಲಾಗಿದೆ.
ನೇಪಾಳ ಪೊಲೀಸರ ಪ್ರಕಾರ, ಪ್ರವಾಹದಲ್ಲಿ ಮೃತಪಟ್ಟವರ ಶವಗಳು ಚೀನಾದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಿಂದ ಹಿಡಿದು ಭಾರತದ ಗಡಿ ಸಮೀಪದ ಪ್ರದೇಶಗಳವರೆಗೆ ಪತ್ತೆಯಾಗಿವೆ. ಚಿತ್ವನ್ನ ನಾರಾಯಣಿ ನದಿಯಿಂದ 64, ಗೋರಖಾದಿಂದ 19, ಧಾದಿಂಗ್ನಿಂದ 18, ನುವಾಕೋಟ್ನಿಂದ 11, ತನಹುನಿಂದ 9 ಹಾಗೂ ನವಲಪರಾಸಿಯಿಂದ ಒಂದು ಶವ ಪತ್ತೆಯಾಗಿದೆ.
ಜಿಲ್ಲಾಡಳಿತಗಳ ಮಾಹಿತಿಯಂತೆ 245 ಸ್ಥಳೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ. ನೇಪಾಳ ಪೊಲೀಸರ 26, ಸೇನೆಯ 22 ಹಾಗೂ ಸಶಸ್ತ್ರ ಪೊಲೀಸ್ ಪಡೆಯ 13 ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 384 ಪ್ರವಾಸಿಗರೊಂದಿಗೆ ಸಂಪರ್ಕ ಕಡಿತಗೊಂಡಿದ್ದು, ಅವರಲ್ಲಿ 139 ಭಾರತೀಯರು ಹಾಗೂ ಭಾರತೀಯ ಮೂಲದ 37 ಅನಿವಾಸಿ ಭಾರತೀಯರು ಸೇರಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.
ಪ್ರವಾಹದಲ್ಲಿ ಗಾಯಗೊಂಡ 81 ಮಂದಿಯನ್ನು ಕಠ್ಮಂಡು ಹಾಗೂ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಈವರೆಗೆ 216 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅವರಲ್ಲಿ 123 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಹಾಗೂ 93 ಮಂದಿಯನ್ನು ಭೂಮಾರ್ಗದ ಮೂಲಕ ಸ್ಥಳಾಂತರಿಸಲಾಗಿದೆ.
ಪ್ರವಾಹದಿಂದ ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆಗೂ ಭಾರೀ ಹಾನಿಯಾಗಿದೆ. 35 ಸೇತುವೆಗಳು ಹಾಗೂ 45 ತೂಗು ಸೇತುವೆಗಳು ಕೊಚ್ಚಿಹೋಗಿದ್ದು, ಸುಮಾರು 40 ಕಿಲೋಮೀಟರ್ ಹೆದ್ದಾರಿ ಪ್ರವಾಹಕ್ಕೆ ಹಾನಿಗೊಳಗಾಗಿದೆ. ಹಲವು ಪ್ರದೇಶಗಳ ಸಂಪರ್ಕ ಕಡಿತಗೊಂಡಿದ್ದು, ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.