
ನವದೆಹಲಿ, 14 ಆಗಸ್ಟ್ (ಹಿ.ಸ.):
ಆ್ಯಂಕರ್:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿರುವ ಅಮೃತ ಉದ್ಯಾನದ 2026ರ ಬೇಸಿಗೆ ವಾರ್ಷಿಕೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿದರು. ಆಗಸ್ಟ್ 16ರಿಂದ ಸೆಪ್ಟೆಂಬರ್ 15ರವರೆಗೆ ಉದ್ಯಾನ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ.
ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಉದ್ಯಾನ ತೆರೆದಿರಲಿದ್ದು, ಸಂಜೆ 5ರವರೆಗೆ ಪ್ರವೇಶಕ್ಕೆ ಅವಕಾಶವಿದೆ. ನಿರ್ವಹಣಾ ಕಾರ್ಯಕ್ಕಾಗಿ ಪ್ರತಿ ಸೋಮವಾರ ಉದ್ಯಾನ ಮುಚ್ಚಿರುತ್ತದೆ. ಪ್ರವೇಶ ಉಚಿತವಾಗಿದ್ದು, ಆನ್ಲೈನ್ನಲ್ಲಿ ಮುಂಗಡ ನೋಂದಣಿ ಕಡ್ಡಾಯ. ಸ್ಥಳದಲ್ಲೇ ನೋಂದಣಿಗೆ ಅವಕಾಶವಿರುವುದಿಲ್ಲ.
ಆಗಸ್ಟ್ 29ರ ರಾಷ್ಟ್ರೀಯ ಕ್ರೀಡಾ ದಿನದಂದು ಕ್ರೀಡಾಪಟುಗಳಿಗೆ ಹಾಗೂ ಸೆಪ್ಟೆಂಬರ್ 5ರ ಶಿಕ್ಷಕರ ದಿನದಂದು ಶಿಕ್ಷಕರಿಗೆ ವಿಶೇಷ ಪ್ರವೇಶ ವ್ಯವಸ್ಥೆ ಮಾಡಲಾಗಿದೆ.
ಉತ್ತರ ಅವೆನ್ಯೂ ರಸ್ತೆಯ ಸಮೀಪದ 35ನೇ ಗೇಟ್ ಮೂಲಕ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶವಿದೆ. ಮೊಬೈಲ್, ಎಲೆಕ್ಟ್ರಾನಿಕ್ ಕೀ, ಪರ್ಸ್, ಕೈಚೀಲ, ನೀರಿನ ಬಾಟಲಿ, ಶಿಶುಗಳ ಹಾಲಿನ ಬಾಟಲಿ ಹಾಗೂ ಛತ್ರಿ ತರಲು ಅನುಮತಿ ನೀಡಲಾಗಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಕೇಂದ್ರ, ಮಳೆ ಆಶ್ರಯ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸಚಿವಾಲಯ ಮೆಟ್ರೋ ನಿಲ್ದಾಣದಿಂದ ಉದ್ಯಾನದ ಪ್ರವೇಶ ದ್ವಾರದವರೆಗೆ ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಪ್ರತಿ 30 ನಿಮಿಷಕ್ಕೊಮ್ಮೆ ಉಚಿತ ಶಟಲ್ ಬಸ್ ಸೇವೆ ಇರಲಿದೆ.
ಅಮೃತ ಉದ್ಯಾನದಲ್ಲಿ ಬಾಲವಾಟಿಕಾ, ಪ್ಲೂಮೇರಿಯಾ ಉದ್ಯಾನ, ಆಲದಮರ ಉಪವನ, ಬೋನ್ಸಾಯಿ ಉದ್ಯಾನ, ಬಬ್ಲಿಂಗ್ ಬ್ರೂಕ್ಸ್, ಕೇಂದ್ರ ಹುಲ್ಲುಹಾಸು, ಲಾಂಗ್ ಗಾರ್ಡನ್ ಹಾಗೂ ವೃತ್ತಾಕಾರದ ಉದ್ಯಾನ ಸೇರಿದಂತೆ ವಿವಿಧ ಆಕರ್ಷಣೀಯ ತಾಣಗಳನ್ನು ವೀಕ್ಷಿಸಬಹುದಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.