
ಕೋಲಾರ, ೯ ಜುಲೈ(ಹಿ.ಸ):
ಆಂಕರ್ : ಕೃಷಿ ಇಲಾಖೆಯ ವತಿಯಿಂದ ರೈತರಿಗಾಗಿ ಹಮ್ಮಿಕೊಳ್ಳಲಾಗಿರುವ ೨೦೨೬-೨೭ನೇ ಸಾಲಿನ 'ಬೆಳೆ ವಿಮೆ ಯೋಜನೆ' ಹಾಗೂ 'ಬೆಳೆ ಸಮೀಕ್ಷೆ ಯೋಜನೆ'ಯ ಜಾಗೃತಿ ಮತ್ತು ಪ್ರಚಾರ ಆಂದೋಲನಕ್ಕೆ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಕೋಲಾರದ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ ಅವರು ಜಂಟಿಯಾಗಿ ಈ ಪ್ರಚಾರ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು. ರೈತರಲ್ಲಿ ಬೆಳೆ ವಿಮೆ ಮಾಡಿಸುವ ಮಹತ್ವ, ವಿಮಾ ಕಂತು ಪಾವತಿಸುವ ಕಡೆಯ ದಿನಾಂಕ ಹಾಗೂ ಬೆಳೆ ಸಮೀಕ್ಷೆಯ ನಿಖರತೆಯ ಅಗತ್ಯತೆಯ ಬಗ್ಗೆ ಪ್ರತಿ ಹಳ್ಳಿಯಲ್ಲೂ ಅರಿವು ಮೂಡಿಸಲು ಈ ಆಂದೋಲನವನ್ನು ರೂಪಿಸಲಾಗಿದೆ.
ಈ ಪ್ರಚಾರ ಆಂದೋಲನವು ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ, ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ನೋಂದಣಿ ಮಾಡಲು ಮತ್ತು ಸರ್ಕಾರದ ಕೃಷಿ ಯೋಜನೆಗಳ ಸೌಲಭ್ಯವನ್ನು ಯಾವುದೇ ಅಡೆತಡೆಯಿಲ್ಲದೆ ಪಡೆದುಕೊಳ್ಳಲು ಅಗತ್ಯ ಮಾಹಿತಿಯನ್ನು ಒದಗಿಸಲಿದೆ ಎಂದು ಕೃಷಿ ಉಪನಿರ್ದೇಶಕರು ತಿಳಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ, ಉಪ ಕೃಷಿ ನಿರ್ದೇಶಕಿ ಮಂಜುಳ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್