ಸಂಸತ್ತ್ ಮುಂಗಾರು ಅಧಿವೇಶನ: ಮೊದಲ ದಿನ ವಿಪಕ್ಷಗಳ ಗದ್ದಲ; ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ
ನವದೆಹಲಿ, 20 ಜುಲೈ (ಹಿ.ಸ.): ಆ್ಯಂಕರ್: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ವಿಪಕ್ಷಗಳ ನಿರಂತರ ಗದ್ದಲದಿಂದ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳು ಪದೇಪದೇ ಸ್ಥಗಿತಗೊಂಡು, ಅಂತಿಮವಾಗಿ ಮಂಗಳವಾರ ಬೆಳಿಗ್ಗೆಯವರೆಗೆ ಮುಂದೂಡಲಾಯಿತು. ರಾಮ ಮಂದಿರದ ಕಾಣಿಕೆ ದುರ್ಬಳಕೆ ಆರೋಪ, ನೀಟ್ ಹಾಗೂ ಇತರೆ ಪ
ಸಂಸತ್ತು ಅಧಿವೇಶನ


ನವದೆಹಲಿ, 20 ಜುಲೈ (ಹಿ.ಸ.):

ಆ್ಯಂಕರ್:

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ವಿಪಕ್ಷಗಳ ನಿರಂತರ ಗದ್ದಲದಿಂದ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳು ಪದೇಪದೇ ಸ್ಥಗಿತಗೊಂಡು, ಅಂತಿಮವಾಗಿ ಮಂಗಳವಾರ ಬೆಳಿಗ್ಗೆಯವರೆಗೆ ಮುಂದೂಡಲಾಯಿತು.

ರಾಮ ಮಂದಿರದ ಕಾಣಿಕೆ ದುರ್ಬಳಕೆ ಆರೋಪ, ನೀಟ್ ಹಾಗೂ ಇತರೆ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧದ ಕ್ರಮ ಸೇರಿದಂತೆ ವಿವಿಧ ವಿಷಯಗಳ ಕುರಿತು ತಕ್ಷಣ ಚರ್ಚೆ ನಡೆಸಬೇಕೆಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು. ಇದರಿಂದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯಲಿಲ್ಲ.

ಲೋಕಸಭೆಯಲ್ಲಿ ಸಭಾಧ್ಯಕ್ಷರು ಕತಾರದ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಸೇರಿದಂತೆ ಆರು ಮಾಜಿ ಸದಸ್ಯರ ನಿಧನಕ್ಕೆ ಸಂತಾಪ ಸೂಚಿಸಿದರು. ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸದನವನ್ನು ಮೊದಲು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ನಂತರವೂ ಗದ್ದಲ ಮುಂದುವರಿದ ಕಾರಣ ಹಲವು ಬಾರಿ ಕಲಾಪ ಸ್ಥಗಿತಗೊಂಡು, ಕೊನೆಗೆ ದಿನಪೂರ್ತಿ ಮುಂದೂಡಲಾಯಿತು.

ಈ ಮಧ್ಯೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 33ರಿಂದ 37ಕ್ಕೆ ಹೆಚ್ಚಿಸುವ ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ–2026 ಅನ್ನು ಲೋಕಸಭೆಯಲ್ಲಿ ಮಂಡಿಸಿದರು.

ರಾಜ್ಯಸಭೆಯಲ್ಲಿ ಅಧಿವೇಶನದ ಮೊದಲ ದಿನ ಗುಜರಾತ್‌ನ ಮುಕೇಶ್‌ಭಾಯಿ ಜೆ. ರಾಠವಾ, ಕರ್ನಾಟಕದ ಪವನ್ ಖೇರಾ, ಮಧ್ಯಪ್ರದೇಶದ ಮಹೇಶ್ ಕೇವಟ್, ಮೇಘಾಲಯದ ಜೇಮ್ಸ್ ಪಾಂಗ್ಸಾಂಗ್ ಕಾಂಗ್ಕಲ್ ಸಂಗ್ಮಾ, ಮಿಜೋರಾಂನ ಖಿಯಾಂಗ್ಟೆ ಲಲ್ತಲುವಾಗ್ಕಿಮಾ, ರಾಜಸ್ಥಾನದ ಸತೀಶ್ ಪೂನಿಯಾ ಹಾಗೂ ಪಶ್ಚಿಮ ಬಂಗಾಳದ ಪ್ರಕಾಶ್ ಚಿಕ್ ಬರೈಕ್, ಸುಷ್ಮಿತಾ ದೇವ್ ಮತ್ತು ಸುಖೇಂದು ಶೇಖರ್ ರಾಯ್ ಸೇರಿದಂತೆ ಒಂಬತ್ತು ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮಾಜಿ ಸದಸ್ಯರಾದ ಬಲಬೀರ್ ಪುಂಜ್, ಸ್ವಪನ್ ಸಾಧನ್ ಬೋಸ್ (ಟುಟು ಬೋಸ್), ರಂಗಸಾಯಿ ರಾಮಕೃಷ್ಣ ಮತ್ತು ಎಚ್. ಹನುಮಂತಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಕತಾರದ ಮಾಜಿ ಅಮೀರ್ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದಾದ ಬಳಿಕ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧದ ಲಾಠಿಚಾರ್ಜ್ ಆರೋಪ, ನೀಟ್ ಹಾಗೂ ಇತರೆ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ತಕ್ಷಣ ಚರ್ಚೆ ನಡೆಸುವಂತೆ ಆಗ್ರಹಿಸಿದರು. ವಿಪಕ್ಷ ಸದಸ್ಯರ ಗದ್ದಲದಿಂದ ರಾಜ್ಯಸಭೆಯ ಕಲಾಪವನ್ನು ಮೊದಲು ಮಧ್ಯಾಹ್ನ 12 ಗಂಟೆಗೆ, ಬಳಿಕ 12.30, 12.50, 2 ಗಂಟೆ ಮತ್ತು ನಂತರ 2.30 ಗಂಟೆಯವರೆಗೆ ಮುಂದೂಡಲಾಯಿತು.

ಮಧ್ಯಾಹ್ನದ ನಂತರ ಕಲಾಪ ಆರಂಭವಾದಾಗ ಉಪಸಭಾಪತಿ ಹರಿವಂಶ್ ಅವರು ಸದಸ್ಯರಿಗೆ ಸದನದ ಗೌರವ ಕಾಪಾಡುವಂತೆ ಮನವಿ ಮಾಡಿ, ಸಂಸತ್ತು ಸಂವಾದ ಮತ್ತು ಚರ್ಚೆಯ ವೇದಿಕೆಯಾಗಿದೆ ಎಂದು ಹೇಳಿದರು. ಆದರೆ ಗದ್ದಲ ಮುಂದುವರಿದ ಕಾರಣ ಯಾವುದೇ ಮಹತ್ವದ ಶಾಸನ ಕಾರ್ಯ ನಡೆಯದೆ, ರಾಜ್ಯಸಭೆಯ ಕಲಾಪವನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಯಿತು.

ಇದೇ ವೇಳೆ ರಾಜ್ಯಸಭೆಯಲ್ಲಿ ಮಂಡನೆಯಾಗಬೇಕಿದ್ದ 'ವಂದೇ ಮಾತರಂ'ಗೆ ರಾಷ್ಟ್ರಗೀತೆಯ ಸಮಾನ ಗೌರವ ನೀಡುವ ಮಸೂದೆ ಗದ್ದಲದ ಕಾರಣ ಮಂಡನೆಯಾಗಲಿಲ್ಲ.

ಸಂಸತ್ ಭವನದ ಹೊರಭಾಗದಲ್ಲಿಯೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಇದರಿಂದ ಸಂಸತ್ ಭವನದ ಸುತ್ತಮುತ್ತ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande