
ಬೆಂಗಳೂರು, 19 ಜುಲೈ (ಹಿ.ಸ.):
ಆ್ಯಂಕರ್ : ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಚಂದಾಪುರದಲ್ಲಿ ಯುವಕನೊಬ್ಬನ ಮೇಲೆ ಲಾಂಗು-ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಬಲಗಾನಹಳ್ಳಿಯ ನಿವಾಸಿ ರಕ್ಷಿತ್ (19) ಹಲ್ಲೆಗೊಳಗಾದ ಯುವಕನಾಗಿದ್ದು, ಶನಿವಾರ ರಾತ್ರಿ ರಕ್ಷಿತ್ ತನ್ನ ಸ್ನೇಹಿತ ದರ್ಶನ್ನೊಂದಿಗೆ ಹಳೆ ಚಂದಾಪುರ ಬಳಿಯ ಮೀನಿನ ಅಂಗಡಿಯಲ್ಲಿ ಊಟ ಮಾಡುತ್ತಿದ್ದ. ಈ ವೇಳೆ ಏಕಾಏಕಿ ದಾಳಿ ನಡೆಸಿದ ಬೊಮ್ಮಸಂದ್ರದ ಮಂಜು, ಮನು, ಕಾರ್ತಿಕ್ ಹಾಗೂ ಅವರ ತಂಡ, ರಕ್ಷಿತ್ರನ್ನು ಅಟ್ಟಾಡಿಸಿ ತಲೆ ಮತ್ತು ಕೈ-ಕಾಲುಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.
ಗಂಭೀರವಾಗಿ ಗಾಯಗೊಂಡಿರುವ ರಕ್ಷಿತ್, ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಹಲ್ಲೆಗೊಳಗಾದ ಯುವಕನ ತಂದೆ ರಂಗಸ್ವಾಮಿ ಮಾತನಾಡಿ, ನಿನ್ನೆ ಸಂಜೆ ದರ್ಶನ್ ಎಂಬುವವನು ಬಾಡಿಗೆ ವಿಷಯವಾಗಿ ಮಗನನ್ನು ಕರೆದೊಯ್ದಿದ್ದ. ರಾತ್ರಿ 9 ಗಂಟೆಗೆ ಪೊಲೀಸರಿಂದ ಕರೆ ಬಂದು ವಿಷಯ ತಿಳಿಯಿತು. ಯಾರಿಗೂ ಯಾವುದೇ ಹಳೆ ದ್ವೇಷವಿರಲಿಲ್ಲ, ಈ ದಾಳಿ ನಡೆದಿದ್ದು ಏಕೆ ಎಂಬುದು ತಿಳಿಯುತ್ತಿಲ್ಲ. ದರ್ಶನ್ನನ್ನು ವಿಚಾರಣೆ ನಡೆಸಿದರೆ ಸತ್ಯಾಂಶ ಹೊರಬರಲಿದೆ, ಎಂದು ಕಣ್ಣೀರಿಟ್ಟಿದ್ದಾರೆ.
ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII