
ಗಂಗಾವತಿ, 07 ಜೂನ್ (ಹಿ.ಸ.) :
ಆ್ಯಂಕರ್ : ಆನ್ ಲೈನ್ ಗೇಮ್ ಆಡಬೇಡ ಎಂದಿದಕ್ಕೆ ಯುವಕನೋರ್ವ ಸ್ವಂತ ತಂದೆ ಮತ್ತು ಅಕ್ಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಂಗಾವತಿಯ ಹೊಸ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ
ವೆಂಕಟ ನಾಯ್ಡು ಮತ್ತು ಪ್ರಗತಿ (19) ಕೊಲೆಯಾದವರು. ಸಾಯಿ ವೆಂಕಟ ಮಣಿದೀಪ (18) ಕೊಲೆ ಆರೋಪಿಯಾಗಿದ್ದಾನೆ.
ಆರೋಪಿಯು ತಾಯಿ ಸೌಜನ್ಯಾ ಅವರ ಮೇಲೂ ದಾಳಿ ಮಾಡಿದ್ದಾನೆ, ತಂದೆ ವೆಂಕಟ ನಾಯ್ಡು ಚಿಕಿತ್ಸೆ ಫಲಿಸದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ತಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆನ್ ಲೈನ್ ಗೇಮ್ ಆಡುವ ವಿಚಾರಕ್ಕೆ ತಂದೆ ಮಗನ ಮಧ್ಯೆ ಮನೆಯ ಅಂಗಳದಲ್ಲಿ ವಾಗ್ವಾದ ನಡೆದಿದ್ದು ಬಳಿಕ ಮನೆಯೊಳಗೆ ತೆರಳಿದ ಮೇಲು ಅಲ್ಲು ತೀವ್ರ ವಾಗ್ವಾದ ಮುಂದುವರಿದಿತ್ತೆನ್ನಲಾಗಿದೆ. ಬಳಿಕ ಇವರು ಮಲಗಿದ್ದ ವೇಳೆ ವೆಂಕಟ ನಾಯ್ಡು ಅವರ ಕಿರಿಯ ಪುತ್ರ ಸಾಯಿ ವೆಂಕಟ ಚಾಕುವಿನಿಂದ ತಂದೆ, ತಾಯಿ ಮತ್ತು ಅಕ್ಕನ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಈ ದಾಳಿಯಲ್ಲಿ ಅಕ್ಕ ಪ್ರಗತಿಯ ಕುತ್ತಿಗೆಗೆ ಗಂಭೀರ ಹಲ್ಲೆ ಮಾಡಿದ್ದು ಇದನ್ನು ತಡೆಯಲು ಬಂದ ತಂದೆಯ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಮನೆಯಲ್ಲಿ ಆಗುತ್ತಿದ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಸಹಾಯಕ್ಕಾಗಿ ಧಾವಿಸಿದ್ದಾರೆ. ಆದರೆ ಮನೆಯ ಬಾಗಿಲು ಮುಚ್ಚಿ ಒಳಗಿನಿಂದ ಚಿಲಕ ಹಾಕಿದ್ದರಿಂದ ಅದು ಸಾಧ್ಯವಾಗಿಲ್ಲ. ಬಳಿಕ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ನಾಲ್ವರು ಕೂಡಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ದಾಳಿ ನಡೆಸಿದ ಆರೋಪಿ ಸಾಯಿ ವೆಂಕಟ ಕೂಡ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿಯ ಅಜ್ಜ ತತಾರಾವ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿ ಸದ್ಯ ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ನಾನು ಭೇಟಿ ನೀಡಿ ತನಿಖೆ ನಡೆಸಿದ್ದೇವೆ, ಮಲಗಿದ್ದಾಗ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ ಎಂದು ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದು, ಘಟನಾ ಸ್ಥಳದಿಂದ ಸಾಕ್ಷ್ಯ ಸಂಗ್ರಹಕ್ಕೆ ಸೂಚಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದೇವೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್