
ಗಂಗಾವತಿ, 15 ಮೇ (ಹಿ.ಸ.) :
ಆ್ಯಂಕರ್ : ಸರ್ಕಾರದ ನಿರ್ದೇಶನದಂತೆ ಮೇ ಹಾಗೂ ಜೂನ್ ತಿಂಗಳ ಎನ್.ಎಫ್.ಎಸ್.ಎ. ಅಕ್ಕಿ ದಾಸ್ತಾನನ್ನು ಒಟ್ಟಿಗೆ ಮೇ ತಿಂಗಳಲ್ಲಿಯೇ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಗಂಗಾವತಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳ ಅಕ್ಕಿಯನ್ನು ಒಂದೇ ಬಾರಿ ವಿತರಿಸಲಾಗುತ್ತದೆ. ಅಂತ್ಯೋದಯ ಅನ್ನ ಯೋಜನೆ (AAY) ಕಾರ್ಡ್ ಹೊಂದಿದ ಪ್ರತಿ ಪಡಿತರ ಚೀಟಿಗೆ ಪ್ರತಿ ತಿಂಗಳಿಗೆ 35 ಕೆ.ಜಿ.ಯಂತೆ ಒಟ್ಟು 70 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ಬಿ.ಪಿ.ಎಲ್. ಕಾರ್ಡ್ ಹೊಂದಿದ ಕುಟುಂಬಗಳಿಗೆ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆ.ಜಿ.ಯಂತೆ, ಎರಡು ತಿಂಗಳಿಗೆ ಒಟ್ಟು 10 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತದೆ.
ಎರಡು ತಿಂಗಳ ಪಡಿತರವನ್ನು ಒಂದೇ ಬಾರಿ ಪಡೆಯುವ ಹಿನ್ನೆಲೆಯಲ್ಲಿ ತಾಂತ್ರಿಕ ದಾಖಲೀಕರಣಕ್ಕಾಗಿ ಪಡಿತರ ಚೀಟಿದಾರರು ಎರಡು ಬಾರಿ ಬಯೋಮೆಟ್ರಿಕ್ (ಹೆಬ್ಬೆರಳಿನ ಗುರುತು) ನೀಡುವುದು ಕಡ್ಡಾಯವಾಗಿದೆ.
ಎರಡು ಬಾರಿ ಬೆರಳು ಮುದ್ರೆ ನೀಡಿದ ನಂತರವೇ ಪೂರ್ಣ ಪ್ರಮಾಣದ ಧಾನ್ಯ ವಿತರಣೆ ಸಾಧ್ಯವಾಗಲಿದೆ ಆದ್ದರಿಂದ ಜಿಲ್ಲೆಯ ಪಡಿತರ ಚೀಟಿದಾರರು ಮೇ ತಿಂಗಳಲ್ಲಿಯೇ ತಮ್ಮ ಎರಡು ತಿಂಗಳ ಅಕ್ಕಿಯನ್ನು ಪಡೆದುಕೊಳ್ಳುವಂತೆ ಗಂಗಾವತಿ ತಹಶೀಲ್ದಾರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್