
ಬಳ್ಳಾರಿ, 16 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಮಹೋತ್ಸವದ ಅಂಗವಾಗಿ ಬಳ್ಳಾರಿಯಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸೇವಾಭಾವದ ವಾತಾವರಣ ಕಂಡು ಬಂದಿತು.
ರಾಷ್ಟ್ರೀಯ ಬಸವದಳ, ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಬೆಂಗಳೂರು ರಸ್ತೆಯ ಎ.ಪಿ.ಎಂ.ಸಿ ಆವರಣದಲ್ಲಿರುವ ರೈತ ಭವನದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಶರಣ ಸಂಗಮ ಹಾಗೂ ದಾಸೋಹ ನಡೆಯಿತು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನಡೆಸುತ್ತಿರುವ ‘ರೈತಣ್ಣನ ಊಟ'ದಲ್ಲಿ ಬಸವ ಭಕ್ತರು, ಸಾರ್ವಜನಿಕರು ಹಾಗೂ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಸವಣ್ಣನವರ ತತ್ವಗಳನ್ನು ಸ್ಮರಿಸಿದರು.
ಬಸವ ತತ್ವ ಪ್ರಸಾರಕರಾದ ಪರಮಪೂಜ್ಯ ಬಸವ ದೇವರು (ಬಸವಕಲ್ಯಾಣ) ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಸವಣ್ಣನವರ ಸಮಾನತೆ, ಸಮಾಜ ಸುಧಾರಣೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ರೈತರಿಗೆ ವಿಶೇಷವಾಗಿ ದಾಸೋಹ (ಅನ್ನಸಂತರ್ಪಣೆ) ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು. ಇದೇ ವೇಳೆ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ರೈತ ಭವನದಲ್ಲಿ ಅನ್ನಸಂತರ್ಪಣೆಯು ನಡೆಯಿತು. ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ. ಸಿ. ಸುರೇಶ ಬಾಬು, ಮಾಜಿ ಅಧ್ಯಕ್ಷರು ಹಾಗೂ ರೈತಣ್ಣನ ಕಲ್ಯಾಣ ಸಮಿತಿಯ ಚೇರ್ಮನರಾದ ಬಿ. ಮಹಾರುದ್ರ ಗೌಡ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.
ಎಂ. ಗುರುಸ್ವಾಮಿ, ಬಿ.ವಿ. ಬದರಿನಾರಾಯಣ ಹಾಗೂ ರೈತಣ್ಣನ ಕಲ್ಯಾಣ ಸಮಿತಿಯ ಸದಸ್ಯರು ಹಾಗೂ ಎಪಿಎಂಸಿ ವರ್ತಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಒಟ್ಟಾರೆ, ಬಸವಣ್ಣನವರ ಜಯಂತಿ ಅಂಗವಾಗಿ ನಡೆದ ಈ ಶರಣ ಸಂಗಮ ಮತ್ತು ದಾಸೋಹ ಕಾರ್ಯಕ್ರಮವು ಭಕ್ತಿ, ಸೇವಾ ಮನೋಭಾವ ಮತ್ತು ಸಾಮಾಜಿಕ ಏಕತೆಯ ಸಂಕೇತವಾಗಿ ಯಶಸ್ವಿಯಾಗಿ ನೆರವೇರಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa