


ಬಳ್ಳಾರಿ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇವರನ್ನು ನೆನಪಿಸಿಕೊಂಡು ಮಾಡುವ ಕೆಲಸಗಳು, ದಾನಗಳು ಮತ್ತು ಧರ್ಮದ ಪಾಲನೆಯಿಂದ ಬದುಕು ಸಾರ್ಥಕತೆಯನ್ನು ಪಡೆಯಲಿದೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ತಿಳಿಸಿದ್ದಾರೆ.
ಹಂದಿಹಾಳು ಗ್ರಾಮದ ಶ್ರೀಜಡೆಸಿದ್ದೇಶ್ವರ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವದಿಸಿ, ಶುದ್ಧ ಮನಸ್ಸಿನಿಂದ ಮಾಡಿದ ಕೆಲಸ ಕಾರ್ಯಗಳು, ಧರ್ಮದ ಪಾಲನೆಯಿಂದ ಸಿಗುವ ಸಮಾಧಾನ ಮತ್ತು ಸಾರ್ಥಕತೆಗಳು ಬೇರೆಲ್ಲೂ ಸಿಗುವುದಿಲ್ಲ ಎಂದರು.
ಪ್ರತಿಯೊಬ್ಬರೂ ಧರ್ಮದ ದಾರಿಯಲ್ಲಿ ನಡೆಯುವುದನ್ನು ಕಲಿಯಬೇಕು. ಪ್ರತಿಯೊಬ್ಬರಲ್ಲೂ ಇರುವ `ನಾನು' ಎಂಬ ಅಹಂ ಅನ್ನು ಬಿಟ್ಟರೆ ಮಾತ್ರ ಅವರ ಜೀವನಮಟ್ಟದಲ್ಲಿ ಸುಧಾರಣೆ ಕಾಣಲು ಸಾಧ್ಯ. ಪ್ರತಿಯೊಬ್ಬರಲ್ಲೂ ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಮೂಡಬೇಕಿದೆ. ಪ್ರತಿಯೊಬ್ಬರಲ್ಲೂ ಅಭಿವೃದ್ಧಿ, ಪ್ರಗತಿ ಮತ್ತು ಸಮಾಜದ ಹಿತಕ್ಕಾಗಿ ಶ್ರಮಿಸುವ ಬದ್ಧತೆ ಮೂಡಬೇಕಿದೆ ಎಂದರು.
ಶ್ರೀಧರಗಡ್ಡೆ ಶಾಖಾ ವಿರಕ್ತ ಮಠದ ಮರಿ ಕೊಟ್ಟೂರು ಸ್ವಾಮಿಗಳು, ಶ್ರದ್ಧೆ, ಭಕ್ತಿ ಮತ್ತು ಸೇವಾ ಮನೋಭಾವಗಳ ಮೂಲಕ ಪ್ರತಿಯೊಬ್ಬರೂ ಹುಟ್ಟನ್ನು ಸಾರ್ಥಕ ಮಾಡಿಕೊಳ್ಳಬೇಕು. ಸಮಾಧಾನ ಮತ್ತು ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದರು.
ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಿಂದ ಶ್ರೀಜಡೆಸಿದ್ದೇಶ್ವರ ಮಠದ ವರೆಗೆ ಶ್ರೀಕೊಪ್ಪಳ ಗವಿ ಮಠದ ಅಭಿನವ ಗವಿಸಿದ್ದೇಶ್ವರ
ಸ್ವಾಮಿಗಳು ಹಾಗೂ ಶ್ರೀಧರಗಡ್ಡೆ ಶಾಖಾ ವಿರಕ್ತ ಮಠದ ಮರಿ ಕೊಟ್ಟೂರು ಸ್ವಾಮಿಗಳನ್ನು ಭಕ್ತಾಧಿಗಳು ಭಜನೆ ಮೂಲಕ ಸ್ವಾಗತಿಸಿದರು.
ಶಾಸಕ ಜೆ ಎನ್ ಗಣೇಶ್ ಅತಿಥಿಗಳಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್