
ನಾಗ್ಪುರ, 28 ಫೆಬ್ರವರಿ (ಹಿ.ಸ.):
ಆ್ಯಂಕರ್:
ಮಹಾರಾಷ್ಟ್ರ ಸರ್ಕಾರದ ಮರಾಠಿ ವಿಶ್ವಕೋಶ ಮಂಡಲ್ ಪ್ರಕಟಿಸಿದ ಮರಾಠಿ ವಿಶ್ವಕೋಶದಲ್ಲಿ 1857ರ ಸ್ವಾತಂತ್ರ್ಯ ಸಂಗ್ರಾಮವನ್ನು “ಉತವ್/ದಂಗೆ” ಎಂದು ಉಲ್ಲೇಖಿಸಿರುವುದು ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳಿಗೆ ಇದು ಅವಮಾನಕಾರಿಯಾಗಿದೆ ಎಂದು ಆರೋಪಿಸಿ ಪತ್ರಿಕೋದ್ಯಮ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಗಣ್ಯರು ತಿದ್ದುಪಡಿ ಒತ್ತಾಯಿಸಿ ರಾಜ್ಯ ಶಾಸಕಾಂಗದ ಸಭಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ, 1857ರ ಹೋರಾಟವು ಕೇವಲ ದಂಗೆ ಅಲ್ಲ ಅದು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಮೊದಲ ಸಶಸ್ತ್ರ ಸಮರ ಎಂದು ಸ್ಪಷ್ಟಪಡಿಸಲಾಗಿದೆ. ಕ್ರಾಂತಿಕಾರಿ ಚಿಂತಕ ವಿನಾಯಕ ದಾಮೋದರ್ ಸಾವರ್ಕರ್ ರಚಿಸಿದ ಭಾರತದ ಸ್ವಾತಂತ್ರ್ಯ ಸಂಗ್ರಾಮ 1857 ಕೃತಿಯನ್ನು ಉಲ್ಲೇಖಿಸಿ, ಹೋರಾಟವನ್ನು “ಸ್ವಾತಂತ್ರ್ಯ ಸಮರ”ವೆಂದು ಪರಿಗಣಿಸಬೇಕೆಂದು ಆಗ್ರಹಿಸಲಾಗಿದೆ.
ಉಲ್ಲೇಖದ ಅಸಮಂಜಸತೆ ಬಗ್ಗೆ ಆಕ್ಷೇಪಣೆ
ಮರಾಠಿ ವಿಶ್ವಕೋಶದ ಕೆಲವು ಸಂಪುಟಗಳಲ್ಲಿ 1857ರ ಘಟನೆಯನ್ನು “ಉತವ್” ಎಂದು, ಇತರಡೆ “ದಂಗೆ” ಹಾಗೂ ಕೆಲವೆಡೆ “ಸ್ವಾತಂತ್ರ್ಯ ಹೋರಾಟ” ಎಂದು ಉಲ್ಲೇಖಿಸಿರುವ ಅಸಮಂಜಸತೆ ಇತಿಹಾಸಕ್ಕೆ ಅನ್ಯಾಯವೆಂದು ಅರ್ಜಿದಾರರು ತಿಳಿಸಿದ್ದಾರೆ.
ಇದೇ ವೇಳೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ರಾಣಿ ಲಕ್ಷ್ಮೀಬಾಯಿ, ನಾನಾ ಸಾಹಿಬ್ ಮತ್ತು ತಾತ್ಯಾ ಟೋಪೆ ಅವರ ಏಕವಚನ ಉಲ್ಲೇಖಕ್ಕೂ ತೀವ್ರ ಆಕ್ಷೇಪಣೆ ವ್ಯಕ್ತವಾಗಿದೆ. ದೇಶಕ್ಕಾಗಿ ತ್ಯಾಗ ಮಾಡಿದ ವೀರರನ್ನು ಗೌರವಯುತವಾಗಿ ಉಲ್ಲೇಖಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಗಣ್ಯರಿಂದ ಜ್ಞಾಪಕ ಪತ್ರ
ನಾಗ್ಪುರದ ಹಿರಿಯ ಪತ್ರಕರ್ತ ಅವಿನಾಶ್ ಪಾಠಕ್ ನೇತೃತ್ವದಲ್ಲಿ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಮತ್ತು ವಿಧಾನ ಪರಿಷತ್ ಸಭಾಪತಿ ರಾಮ ಶಿಂಧೆ ಅವರಿಗೆ ಅರ್ಜಿ ಸಲ್ಲಿಸಲಾಗಿದೆ.
ವಿಷಯದ ಗಂಭೀರತೆಯನ್ನು ಮನಗಂಡು ಅರ್ಜಿಯ ಪ್ರತಿಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂಧೆ ಹಾಗೂ ಸುನೇತ್ರಾ ಪವಾರ, ಮರಾಠಿ ಭಾಷಾ ಸಚಿವ ಉದಯ್ ಸಮಂತ್ ಅವರಿಗೆ ಕಳುಹಿಸಲಾಗಿದೆ.
ತಕ್ಷಣ ತಿದ್ದುಪಡಿ ಒತ್ತಾಯ
ಐತಿಹಾಸಿಕ ಘಟನೆಗಳ ಪರಿಭಾಷೆ ಬದಲಿಸುವುದು ರಾಷ್ಟ್ರೀಯ ಹೆಮ್ಮೆಗೆ ಧಕ್ಕೆ ಎಂದು ಅರ್ಜಿದಾರರು ಹೇಳಿದ್ದು, 1857ರ ಸಂಘರ್ಷವನ್ನು “ಸ್ವಾತಂತ್ರ್ಯದ ಯುದ್ಧ”ವೆಂದು ಸ್ಪಷ್ಟವಾಗಿ ಉಲ್ಲೇಖಿಸಿ, ಸಂಬಂಧಿತ ವಿಶ್ವಕೋಶ ಹಾಗೂ ಅದರ ಅಧಿಕೃತ ವೆಬ್ಸೈಟ್ನಲ್ಲಿ ತಕ್ಷಣ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa