
ಬೆಂಗಳೂರು, 18 ಜನವರಿ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಥ ಹಾಗೂ ಪರಿಣಾಮಕಾರಿ ಅನುಷ್ಠಾನದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯವು ದೇಶದ ದೊಡ್ಡ ರಾಜ್ಯಗಳ ಪೈಕಿ ದ್ವಿತೀಯ ಸ್ಥಾನ ಗಳಿಸಿದೆ. ಯೋಜನೆಯ ಒಟ್ಟಾರೆ ಪ್ರಗತಿ, ರೈತರ ನೋಂದಣಿ ಮತ್ತು ಪರಿಹಾರ ವಿತರಣೆಯಲ್ಲಿನ ಸಾಧನೆಗೆ ರಾಜ್ಯ ಕೃಷಿ ಇಲಾಖೆಗೆ ರಾಷ್ಟ್ರಮಟ್ಟದ ಗೌರವ ಲಭಿಸಿದೆ.
ರಾಜ್ಯದಲ್ಲಿ ಒಟ್ಟು 27,04,166 ರೈತರು ಫಸಲ್ ಭೀಮಾ ಯೋಜನೆಯಲ್ಲಿ ನೋಂದಾಯಿತರಾಗಿದ್ದು, ಇದರಲ್ಲಿ 11,85,642 ರೈತರು ಬೆಳೆ ನಷ್ಟದ ಹಿನ್ನೆಲೆಯಲ್ಲಿ ಕ್ಲೇಮ್ ಸಲ್ಲಿಸಿದ್ದಾರೆ. ಈ ರೈತರಿಗೆ ಒಟ್ಟು ರೂ. 2,094 ಕೋಟಿ ಮೊತ್ತದ ವಿಮಾ ಪರಿಹಾರ ವಿತರಿಸಲಾಗಿದೆ.
2024–25ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಅಧಿಕೃತ ಪ್ರಶಂಸನ ಪತ್ರ ನೀಡಿದೆ.
ಈ ಪ್ರಶಸ್ತಿಯನ್ನು ರಾಜ್ಯ ಕೃಷಿ ಇಲಾಖೆಯ ಆಯುಕ್ತರು ಹಾಗೂ ಕೃಷಿ ನಿರ್ದೇಶಕರು, ದಿನಾಂಕ 18-01-2026ರಂದು ಬೆಂಗಳೂರಿನಲ್ಲಿ ನಡೆದ 13ನೇ ರಾಷ್ಟ್ರೀಯ ಸಮ್ಮೇಳನದಲ್ಲಿ, ಸಹಕಾರ ಸಚಿವಾಲಯ, ಭಾರತ ಸರ್ಕಾರದ ಕಾರ್ಯದರ್ಶಿಗಳಿಂದ ಸ್ವೀಕರಿಸಿದರು.
ರೈತರ ಹಿತಾಸಕ್ತಿಗೆ ಒತ್ತು ನೀಡಿ, ಸಮಯಬದ್ಧವಾಗಿ ಪರಿಹಾರ ವಿತರಣೆ ಮತ್ತು ಪಾರದರ್ಶಕ ಅನುಷ್ಠಾನವನ್ನು ಸಾಧಿಸಿರುವುದು ಈ ಗೌರವಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa