ನಿಮ್ಮ‌ ಮನೆಯಂತೆ, ನಿಮ್ಮ ಸುತ್ತಲಿನ ಪರಿಸರ ಸ್ವಚ್ಚತೆಗೆ ಜಾಗೃತಿ ವಹಿಸಿ : ಸುಭಾಷ ಬಿ ಅಡಿ
ಗದಗ, 01 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಾರ್ವಜನಿಕರು ನಿಮ್ಮ ನಿಮ್ಮ ಮನೆಗಳನ್ನು ಸ್ವಚ್ಚವಾಗಿ ಇಟ್ಟುಕೊಂಡಂತೆ ಮನೆಯ ಸುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಈ ಕುರಿತು ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರ
ಪೋಟೋ


ಗದಗ, 01 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಾರ್ವಜನಿಕರು ನಿಮ್ಮ ನಿಮ್ಮ ಮನೆಗಳನ್ನು ಸ್ವಚ್ಚವಾಗಿ ಇಟ್ಟುಕೊಂಡಂತೆ ಮನೆಯ ಸುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಈ ಕುರಿತು ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಾದ ಸುಭಾಷ ಬಿ ಅಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಾದ ಸುಭಾಷ ಬಿ ಅಡಿ ಅವರ ಅಧ್ಯಕ್ಷತೆ ಹಲ್ಲಿ ಜರುಗಿದ ಜಿಲ್ಲಾಮಟ್ಟದ ಕಾರ್ಯಪಡೆಯಲ್ಲಿ ಸಭೆಯಲ್ಲಿ ಅವರು ಮಾತನಾಡಿದರು.

ನಗರಗಳಲ್ಲಿ ತ್ಯಾಜ್ಯ ವಿಲೇವಾರಿ ಕೇಂದ್ರಗಳನ್ನು ಹಾಗೂ ಮರುಬಳಕೆ ಘಟಕಗಳನ್ನು ಇನ್ನಷ್ಟು ಬಲಪಡಿಸಬೇಕು. ಹಳೆಯ ಕಸದ ಗುಡ್ಡಗಳನ್ನು (ಲೆಗಸಿ ವೇಸ್ಟ್) ತೆರವುಗೊಳಿಸಿ ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಬೇಕು.

ಮನೆಮನೆಗಳಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ, ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಪರಿಣಾಮಕಾರಿಯಾಗಲಿ. ಮಳೆ ನೀರು ಮತ್ತು ಒಳಚರಂಡಿ ನೀರು ಮಿಶ್ರಣವಾಗದಂತೆ ತಾಂತ್ರಿಕ ಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು ಎಂದು ನಿರ್ದೇಶಿಸಿದರು.

ಕಟ್ಟಡ ನಿರ್ಮಾಣದಿಂದ ಉಂಟಾಗುವ ಕಸವನ್ನು ಮರುಬಳಕೆ ಮಾಡುವ ಘಟಕ ಸ್ಥಾಪಿಸುವದು. ಅಪಾಯಕಾರಿ ಮತ್ತು ವೈದ್ಯಕೀಯ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು. ನಗರಗಳಲ್ಲಿ ಮಲಿನಜಲ ಶುದ್ಧೀಕರಣ ಘಟಕಗಳನ್ನು ದುರಸ್ತಿಪಡಿಸಿ ನಿರಂತರ ಕಾರ್ಯನಿರ್ವಹಣೆಗೆ ಆದ್ಯತೆ ನೀಡಬೇಕು. ಘಟಕಗಳ ಬಳಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಸೂಚಿಸಿದರು.

ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಧಾರ್ಮಿಕ ಸೇರಿದಂತೆ ಎಲ್ಲ ತರಹದ ಕಾರ್ಯಕ್ರಮ ಸ್ಥಳಗಳಲ್ಲಿಯೂ ಸಹ ಕಸ ವಿಂಗಡನೆ ಮೂಲದಲ್ಲಿಯೇ ಆಗುವ ಮೂಲಕ ವಿಲೇವಾರಿಯಾಗಬೇಕು. ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮ ಕುರಿತು ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು. ಕಸ ವಿಂಗಡನೆ ಉಪಯುಕ್ತತೆ ಬಗ್ಗೆ ತಿಳಿಸಿಕೊಡಬೇಕೆಂದು ಹೇಳಿದರು.

ಸ್ಥಳೀಯ ಸಂಸ್ಥೆಗಳಿಂದ ವ್ಯಾಪಾರ ಮಾಡಲು ನೀಡುವ ಟ್ರೇಡ್ ಪರವಾನಿಗೆ ನೀಡುವಾಗ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂಬ ಷರತ್ತಿನೊಂದಿಗೆ ಪರವಾನಿಗೆ ನೀಡಬೇಕು, ತಪ್ಪಿದಲ್ಲಿ ಪರವಾನಗಿ ರದ್ದು ಮಾಡಬೇಕು ಎಂದರು.

ಪರಿಣಾಮಕಾರಿ ಜಾಗೃತಿ ವಹಿಸಿ, ಹಸಿ ಕಸ, ಒಣಕಸ‌ ಹಾಗೂ ವೈದ್ಯಕೀಯ ತ್ಯಾಜ್ಯ ವಿಂಗಡನೆ, ವಿಲೆವಾರಿ ಕುರಿತು ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕುರಿತಂತೆ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಆಗಬೇಕು ಎಂದು ಸೂಚಿಸಿದರು.

ನಿಮ್ಮ‌ ಆರೋಗ್ಯ ನಿಮ್ಮ ಕೈಯಲ್ಲಿ ಎಂಬುದನ್ನು ತಿಳಿಹೇಳಬೇಕು. ನಿಮ್ಮ ಆರೋಗ್ಯ ಸರಿಯಿರಲು ನಿಮ್ಮ ಸುತ್ತಲಿನ ಪರಿಸರ ಆರೋಗ್ಯ ಬಹಳ ಮುಖ್ಯವಾಗಿದೆ ಎಂಬುದನ್ಬು ಮನವರಿಕೆ ಮಾಡಿಕೊಡುವ ಕಾರ್ಯ ಅಧಿಕಾರಿ ವರ್ಗದವರು ಮಾಡಬೇಕು ಎಂದು ಹೇಳಿದರು.

6 ತಿಂಗಳ ಗಡುವು, ರೊಚ್ಚು ನೀರು ನಿರ್ವಹಣೆ ಘಟಕ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಹಾಗೂ ಮನೆಗಳಿಗೆ ಪೈಪ್ ಅಳವಡಿಕೆಯನ್ನು ಸ್ಥಳೀಯ ಸಂಸ್ಥೆಗಳು ಮತ್ತು ಕೆಯುಐಡಿಎಫ್ಸಿ ಹಾಗೂ ಕೆಯುಡಬ್ಲೂಎಸ್ & ಡಿಬಿ ಇಲಾಖೆಗಳು ಸೇರಿ ಸಮನ್ವಯದೊಂದಿಗೆ ಮುಂದಿನ ಆರು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಬಳಕೆಗೆ ನೀಡಬೇಕು ಎಂದು ಮುಚ್ಚಳಕ್ಕೆ ಪತ್ರ ನೀಡುವಂತೆ ಗಡುವು ನೀಡಿದರು. ಈ ಕಾರ್ಯವು ನೀಡಿದ ಗಡುವಿನೊಳಗೆ ಪೂರ್ಣವಾಗಬೇಕು ಎಂದು ಮತ್ತೊಮ್ಮೆ ಸುಭಾಷ ಬಿ ಅಡಿ ಅವರು ಎಚ್ಚರಿಸಿದರು.

ಸ್ಥಳೀಯ ಸಂಸ್ಥೆವಾರು ಪ್ರತಿ ದಿನ ಸಂಗ್ರಹಿಸುವ ಕಸದ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿದರು. ಗದಗನಲ್ಲಿ 75 ಟನ್, ಗಜೇಂದ್ರಗಡ 11 ಟನ್, ರೋಣ 8, ಮುಂಡರಗಿ 10, ಲಕ್ಷ್ಮೇಶ್ವರ 15, ನರಗುಂದ 14, ನರೇಗಲ್ ಶಿರಹಟ್ಟಿ ಹಾಗೂ ಮುಳುಗುಂದದಲ್ಲಿ ತಲಾ 7 ಟನ್ ಕಸ ಸಂಗ್ರಹಣೆ ಪ್ರತಿದಿನ ಮಾಡಿ ವಿಂಗಡಣೆ‌ ಮೂಲಕ ವಿಲೆ ಮಾಡಲಾಗುತ್ತಿದೆ. ಅದೇ ತರಹ ಗ್ರಾಮೀಣ ಬಾಗದಲ್ಲಿ ಒಣಕಸವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.

ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ತ್ಯಾಜ್ಯ ನಿರ್ವಹಣೆಯಲ್ಲಿ ಜನರ ಸಹಕಾರ ಅತ್ಯಂತ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಮುಖ್ಯವಾಗಿ ಘನ ತ್ಯಾಜ್ಯ, ಕಟ್ಟುಕಲ್ಲು ತ್ಯಾಜ್ಯ, ಇ-ತ್ಯಾಜ್ಯ ಮತ್ತು ಮಲಿನ ನೀರಿನ ಶುದ್ಧೀಕರಣ ಕೇಂದ್ರಗಳ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ ಎಲ್ ಶ್ರೀಧರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಡಿವೈಎಸ್ಪಿ ಮಹಾಂತೇಶ್ ಸಜ್ಜನರ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ, ಡಿಡಿಪಿಐ ಆರ್‌ ಎಸ್ ಬುರುಡಿ,‌ ಜಿಪಂ ಅಧಿಕಾರಿ ಚಳಗೇರಿ, ಡಿ ಎಚ್ ಓ ಡಾ. ಎಸ್ ಎಸ್ ನೀಲಗುಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕ ಬಸವಂತಪ್ಪ, ಪರಿಸರ ಮಾಲಿನ್ಯ ಅಧಿಕಾರಿಗಳು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande