ಬಳ್ಳಾರಿ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರೈತರು ನೋಂದಾಯಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪಗಳು/ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರ ನೀಡುವುದರ ಮೂಲಕ ರೈತರಿಗೆ ನೆರವಾಗುತ್ತದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ,ಅನುಷ್ಠಾನಗೊಳಿಸಲು ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳ ಬಳ್ಳಾರಿ, ಮೋಕಾ, ರೂಪನಗುಡಿ, ಕೋಳೂರು, ಕುರುಗೋಡು ಮತ್ತು ಕಂಪ್ಲಿ ಹೋಬಳಿಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಸಿಮೆಣಸಿನಕಾಯಿ ಮತ್ತು ದಾಳಿಂಬೆ ಬೆಳೆಯನ್ನು ಅಧಿಸೂಚಿಸಲಾಗಿದೆ.
ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಆಗಸ್ಟ್ 11 ಕೊನೆಯ ದಿನ. ವಿಮಾ ಕಂಪನಿ-ಎಸ್ಬಿಐ ಇನ್ಸುರೆನ್ಸ್.
ಹಸಿಮೆಣಸಿನಕಾಯಿ:
ವಿಮಾ ಮೊತ್ತ-ರೂ.71,000(ಪ್ರತಿ ಹೆಕ್ಟೇರ್ಗೆ), ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ(ಪ್ರತಿ ಹೆಕ್ಟೇರ್ಗೆ)-ರೂ.3,550.
ದಾಳಿಂಬೆ:
ವಿಮಾ ಮೊತ್ತ-ರೂ.1,27,000(ಪ್ರತಿ ಹೆಕ್ಟೇರ್ಗೆ), ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ(ಪ್ರತಿ ಹೆಕ್ಟೇರ್ಗೆ)- ರೂ.6,350 ಪಾವತಿಸಬೇಕು.
ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಹಾಗೂ ಪಾವತಿಸಬೇಕಾದ ವಿಮಾ ಕಂತಿನ ಮೊತ್ತವು ಒಂದೇ ಆಗಿರುತ್ತದೆ. ನೋಂದಣಿ ಮಾಡಲು ಉದ್ದೇಶಿಸಿರುವ ಬೆಳೆಯು ಹಿಂದಿನ ವರ್ಷಗಳ, ಋತುಗಳ (ಮುಂಗಾರಿನ) ಬೆಳೆ ಸಮೀಕ್ಷೆಯಲ್ಲಿ ಕಂಡುಬರದಿದ್ದರೆ ನೋಂದಣಿಗೆ ಅನುಮತಿ ಇರುವುದಿಲ್ಲ.
ರೈತರು ಪ್ರಸಕ್ತ ಸಾಲಿನ ಪಹಣಿ, ಎಫ್ಐಡಿ ಸಂಖ್ಯೆ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸಕ್ತದ ಪ್ರತಿಯೊಂದಿಗೆ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಬ್ಯಾಂಕ್ ಗಳಲ್ಲಿ ಅಥವಾ ಸಿ.ಎಸ್.ಸಿ ಕೇಂದ್ರಗಳಲ್ಲಿ ವಿಮಾ ಯೋಜನೆಗೆ ನೋಂದಾಯಿಸಿಕೊಳ್ಳಬೇಕು.
ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಬಳ್ಳಾರಿ ಜಿಲ್ಲೆಗೆ ಎಸ್.ಬಿ.ಐ ಇನ್ಸುರೆನ್ಸ್ ಕಂಪನಿಯು ವಿಮಾ ಸಂಸ್ಥೆಯಾಗಿರುತ್ತದೆ.
ಹವಾಮಾನ ಅಂಶಗಳಾದ ಮಳೆ ಪ್ರಮಾಣ, ಗಾಳಿಯ ವೇಗ, ಆದ್ರ್ರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮಳೆಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟ ತೀರ್ಮಾನಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಸಿಬ್ಬಂದಿ ಹಾಗೂ ಹತ್ತಿರದ ಬ್ಯಾಂಕ್ ಶಾಖೆಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್