ಗದಗ, 09 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ, ಉಪ ಸಂರಕ್ಷಣಾ ಅಧಿಕಾರಿಗಳ ಕಚೇರಿ ಪ್ರಾದೇಶಿಕ ವಿಭಾಗ, ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮೃಗಾಲಯ ಗದಗ ಹಾಗೂ ಪ್ರಾ.ಆ.ಕೇಂದ್ರ ಹುಲಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಬಿಂಕದಕಟ್ಟಿ ಮೃಗಾಲಯದಲ್ಲಿ ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಅವರು ಮಾತನಾಡಿ ನೈಸರ್ಗಿಕವಾಗಿ ಪ್ರಾಣಿ ಮತ್ತು ಮನುಷ್ಯ ಸಂಕುಲನದ ನಡುವೆ ಪರಸ್ಪರ ರೋಗ ಹರಡುವ ಪ್ರಕ್ರಿಯೆ ಇದೆ. ಪ್ರಾಣಿಜನ್ಯ ರೋಗಗಳ ಸರಿಯಾದ ನಿರ್ವಹಣೆ ಆಗದಿದ್ದರೆ ಮನುಕುಲದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ತಿಳಿಸಿದರು. ಪ್ರಾಣಿಗಳಿಂದ ಮನುಷ್ಯನಿಗೆ ರೇಬಿಸ್, ಹಕ್ಕಿಜ್ವರ, ಹಂದಿಜ್ವರ, ಬ್ರುಸ್ಸೆಲಾ, ಅಂತ್ರಾಕ್ಸ್ ಮುಂತಾದ ರೋಗಗಳು ಹರಡುವುದರ ಬಗ್ಗೆ ಹಾಗೂ ಪರಿಸರ ಸ್ವಚ್ಛತೆಗಳ ಬಗ್ಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ರೋಗ ನಿರೋಧಕ ಲಸಿಕೆಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ನೀಲಗುಂದ ಅವರು ಮಾತನಾಡಿ ಪ್ರಾಣಿಜನ್ಯ ರೋಗಗಳಲ್ಲಿ ವಿಶೇಷವಾಗಿ ರೇಬಿಸ್ ಪ್ರಕರಣಗಳ ಅಪಾಯಕಾರಿ ವಿಷಯದ ಬಗ್ಗೆ ಎಲ್ಲರಿಗೂ ಮನದಟ್ಟಾಗುವ ಹಾಗೆ ವಿವರಿಸಿದರು. ಜಿಲ್ಲೆಯಲ್ಲಿ ಎಲ್ಲ ಸರಕಾರಿ ಸಂಸ್ಥೆಗಳಲ್ಲಿ ರೇಬಿಸ್ಗೆ ಸಂಬಂಧಿಸಿದ ಲಸಿಕೆಗಳು ಉಚಿತವಾಗಿ ಸಿಗುವುದರ ಬಗ್ಗೆ ಖಚಿತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಮೃಗಾಲಯದ ಮಹಾಂತೇಶ ಪೋಲಿಸ್ಪಾಟೀಲ್, ಎ.ಸಿ.ಎಫ್. ಹಾಗೂ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಶ್ರೀಮತಿ ಗೀತಾ ಕಾಂಬ್ಳೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಜಿಆಕುಕ ಇಲಾಖೆ ಗದಗ ಮತ್ತು ಜಿಲ್ಲಾ ಸಮೀಕ್ಷಣಾ ಘಟಕದ ಅಧಿಕಾರಿಗಳು/ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP