ಕ್ವಿಂಗ್ಡಾವೊ, 26 ಜೂನ್ (ಹಿ.ಸ.) :
ಆ್ಯಂಕರ್ : ಚೀನಾದ ಕ್ವಿಂಗ್ಡಾವೊದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ರಕ್ಷಣಾ ಸಚಿವರ ಸಭೆಯಲ್ಲಿ ಭಾರತ ಮಹತ್ವದ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ. ಭಯೋತ್ಪಾದನೆಯ ಕುರಿತ ಜಂಟಿ ಘೋಷಣೆಯ ಕರಡಿನಲ್ಲಿ ಸ್ಪಷ್ಟತೆ ಕೊರತೆಯಿರುವುದರಿಂದ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ಪರವಾಗಿ ಘೋಷಣೆಗೆ ಸಹಿ ಹಾಕಲು ನಿರಾಕರಿಸಿದ್ದಾರೆ.
ಭಯೋತ್ಪಾದನೆಗೆ ನಿಖರ ವ್ಯಾಖ್ಯಾನವಿಲ್ಲದ ಕಾರಣ, ಮತ್ತು ಪಾಕಿಸ್ತಾನ ಹಾಗೂ ಚೀನಾದಂತಹ ದೇಶಗಳು ಮೃದು ನಿಲುವು ತಾಳುತ್ತಿರುವುದು ಭಾರತಕ್ಕೆ ಅಸ್ವೀಕಾರ್ಯವಾಗಿದೆ ಎಂಬುದಾಗಿ ಅವರು ವಿವರಿಸಿದ್ದಾರೆ. ಈ ಪೈಕಿ ಪಾಕಿಸ್ತಾನ, ಭಯೋತ್ಪಾದಕರಿಗೆ ಆಶ್ರಯ ನೀಡುವುದರ ಜೊತೆಗೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ರಾಜಕೀಯ ಸಾಧನೆಯ ಸಾಧನವನ್ನಾಗಿ ಬಳಸುತ್ತಿದೆ ಎಂಬ ಆರೋಪವನ್ನು ಅವರು ಪರೋಕ್ಷವಾಗಿ ಮಾಡಿದರು.
ಈ ಸಭೆಯಲ್ಲಿ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದ್ದು, 26 ನಾಗರಿಕರು ಮೃತಪಟ್ಟಿರುವ ಈ ದಾಳಿಯ ಹಿಂದೆ ಪಾಕಿಸ್ತಾನ ಬೆಂಬಲಿತ ಸಂಘಟನೆಗಳ ಕೈವಾಡವಿದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು. ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಸೈನಿಕ ಕ್ರಮವನ್ನು ಅವರು ಉಲ್ಲೇಖಿಸಿದರು.
ಭಾರತ ಭಯೋತ್ಪಾದನೆ ವಿರುದ್ಧದ ತನ್ನ ಶೂನ್ಯ ಸಹಿಷ್ಣುತೆ ನಿಲುವನ್ನು ಪುನಃ ದೃಢಪಡಿಸಿದ್ದು, ಜಂಟಿ ಕ್ರಮದ ಜೊತೆಗೆ ಸ್ಪಷ್ಟ ಕಾರ್ಯತಂತ್ರದ ಅಗತ್ಯವಿದೆ ಎಂದು ಒತ್ತಿಹೇಳಿದ್ದು, ಭಾರತ ತನ್ನ ರಾಷ್ಟ್ರೀಯ ಸ್ವಾಯತ್ತತೆ ಹಾಗೂ ಭದ್ರತಾ ತತ್ವಗಳಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ಸ್ಪಷ್ಟಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa