ಗದಗ, 12 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಭಾರಿ ಮಳೆ ಆಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅವಾಂತರ ಉಂಟಾಗಿದೆ.
ಲಕ್ಷ್ಮೇಶ್ವರ ತಾಲ್ಲೂಕಿನ ಕುಂದ್ರಳ್ಳಿ ಗ್ರಾಮದಲ್ಲಿ ಭಾರೀ ಮಳೆಗೆ ದಿಢೀರ್ ಮನೆಗಳಿಗೆ ನೀರು ನುಗ್ಗಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾತ್ರಿ ಹೊತ್ತಿಗೆ ಪ್ರವಾಹದ ರೀತಿಯಲ್ಲಿ ಹರಿದ ನೀರು ಅಂದಾಜು 15 ಮನೆಗಳಿಗೆ ನುಗ್ಗಿ ಅಪಾರ ನಷ್ಟ ಉಂಟುಮಾಡಿದೆ. ಮನೆಗಳಲ್ಲಿ ಸಂಗ್ರಹಿಸಿದ್ದ ಆಹಾರ ಸಾಮಾಗ್ರಿಗಳು ಗೃಹೋಪಯೋಗಿ ಸಾಮಗ್ರಿಗಳು, ವಿದ್ಯುತ್ ಸಾಧನಗಳು ನೀರಿನಲ್ಲಿ ನೆನೆಸಿರುವ ದೃಶ್ಯಗಳು ಮನಕಲಕುವಂತಿದೆ.
ಮನೆಯೊಳಗೆ ತೀವ್ರ ಮಟ್ಟದಲ್ಲಿ ನೀರು ಸೇರಿದ್ದರಿಂದ, ಗ್ರಾಮಸ್ಥರು ಸಂಪೂರ್ಣ ಜಾಗರಣದಲ್ಲೇ ಕಳೆಯಬೇಕಾದ ಪರಿಸ್ಥಿತಿ ಎದುರಾದ್ದು. ಹೆಣ್ಣು ಮಕ್ಕಳು, ಹಿರಿಯರು, ಮಕ್ಕಳು ಎಲ್ಲರೂ ಬಕೆಟ್ಗಳು, ಬಡಗಿ ಪಂಪ್ಗಳು ಇತ್ಯಾದಿ ಉಪಕರಣಗಳೊಂದಿಗೆ ನೀರನ್ನು ಹೊರಹಾಕಲು ಹಗಲಿರುಳು ಶ್ರಮಿಸುತ್ತಿರುವ ದೃಶ್ಯಗಳು ಭಾವುಕತೆಯಿಂದ ಕೂಡಿವೆ.
ಮಳೆ ಬಂದಾಗ ಓಡಿಸೋದು ನೀರನ್ನಾ ಅಲ್ಲ, ಬದುಕನ್ನಾ ಅಂತಾಯ್ತು ಎಂಬ ಗ್ರಾಮಸ್ಥರ ಆಕ್ರೋಶ ತುಂಬಿದ ಮಾತುಗಳು ಈ ಅವಾಂತರದ ತೀವ್ರತೆಯನ್ನು ಸ್ಪಷ್ಟಪಡಿಸುತ್ತವೆ.
ನಿರಂತರ ಮಳೆಯಿಂದಾಗಿ ಬೆಣ್ಣೆ ಹಳ್ಳ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಹಳ್ಳದ ಪ್ರವಾಹದ ಹಿನ್ನಲೆಯಲ್ಲಿ ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ.
ಯಾವಗಲ್, ಮೆಣಸಗಿ (ರೋಣ ತಾಲೂಕು), ಹಾಗೂ ಕುರ್ಲಗೇರಿ, ಸುರಕೋಡ (ನರಗುಂದ ತಾಲೂಕು) ಸೇತುವೆಗಳು ನೀರಿನಲ್ಲಿ ಮುಳುಗಿದ ಪರಿಣಾಮ, ಈ ಭಾಗದ ಹಲವಾರು ಗ್ರಾಮಗಳು ಹೊರಜಗತ್ತಿನಿಂದ ಸಂಪರ್ಕವಿಲ್ಲದಂತಾಗಿವೆ. ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಳ್ಳದ ನೀರು ರಸ್ತೆ ಮಾರ್ಗಗಳನ್ನು ಮುಚ್ಚಿರುವುದು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ತಂದಿದೆ.
ರೋಣ ಹಾಗೂ ನರಗುಂದ ತಾಲೂಕಿನ ದಡದ ಹಳ್ಳಿಗಳು ಹೆಚ್ಚು ಪೀಡಿತವಾಗಿದ್ದು, ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಕಪ್ಪುನೀರು ತುಂಬಿದ ನದಿಗೆ ಪರಿವರ್ತನೆಯಾಗಿವೆ. ಪ್ರಮುಖ ಸಂಪರ್ಕ ರಸ್ತೆಗಳೆಲ್ಲಾ ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳೂ ತಲುಪಲಾಗದ ಸ್ಥಿತಿ ಉಂಟಾಗಿದೆ.
ಜಮೀನು ಜಲಾವೃತ, ಬೆಳೆ ನಾಶದ ಭೀತಿ
ಹಳ್ಳದ ಪಕ್ಕದ ಹಲವಾರು ಎಕರೆ ಕೃಷಿಭೂಮಿ ನೀರಿನಲ್ಲಿ ಮುಳುಗಿದ್ದು, ಬೆಣ್ಣೆ ಹಳ್ಳದ ಪ್ರದೇಶದ ರೈತರು ಕಂಗಾಲಾಗಿದ್ದಾರೆ. ಹತ್ತಿ, ಜೋಳ, ಸೇರಿದಂತೆ ಮಳೆಪಾಲಾದ ಬೆಳೆಗಳು ನಾಶವಾಗುವ ಆತಂಕವಿದೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಂದಾಜು ಹಾಕಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP