ಶಾಲಾ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಲಿ : ಸಚಿವ ಎಚ್.ಕೆ.ಪಾಟೀಲ್
ಗದಗ, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಶಾಲಾ ಶೌಚಾಲಯಗಳ ಸ್ಥಿತಿಗತಿಗಳ ನೈಜ ವರದಿ ನೀಡಬೇಕು ಜೊತೆಗೆ ಶಾಲಾಹಂತದಲ್ಲಿ ಶಾಲಾ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಬೇಕು . ಮೇ ಅಂತ್ಯದೊಳಗಾಗಿ ಶೌಚಾಲಯಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹ
ಪೋಟೋ


ಗದಗ, 15 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಶಾಲಾ ಶೌಚಾಲಯಗಳ ಸ್ಥಿತಿಗತಿಗಳ ನೈಜ ವರದಿ ನೀಡಬೇಕು ಜೊತೆಗೆ ಶಾಲಾಹಂತದಲ್ಲಿ ಶಾಲಾ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಬೇಕು . ಮೇ ಅಂತ್ಯದೊಳಗಾಗಿ ಶೌಚಾಲಯಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿನ ಶಾಲಾ ಶೌಚಾಲಯ ಕುರಿತು ಸಭೆ ಜರುಗಿಸಿ ಮಾತನಾಡಿದರು.

ಜಿಲ್ಲೆಯಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೌಚಾಲಯಗಳು ವ್ಯವಸ್ಥಿತವಾಗಿ ಇರುವಂತೆ ಕ್ರಮ ವಹಿಸಬೇಕು. ಸ್ವಚ್ಛತೆ ಹಾಗೂ ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶೌಚಾಲಯಗಳ ಸ್ಥಿತಿಗತಿ ಪರಿಶೀಲಿಸಿ ಅವುಗಳು ಸಮರ್ಪಕ ಬಳಕೆಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು.

ಜಿಲ್ಲೆಯಲ್ಲಿನ ನಗರದ ಹಾಗೂ ಗ್ರಾಮೀಣ ಪ್ರದೇಶಗಳ ಶಾಲಾ ಮೂತ್ರಾಲಯ ಹಾಗೂ ಶೌಚಾಲಯಗಳ ಸ್ಥಿತಿಗತಿಗಳನ್ನು ಪಿಪಿಟಿ ಮೂಲಕ ವೀಕ್ಷಣೆ ಮಾಡಿ ನಂತರ ಸಚಿವರು ಮಾತನಾಡಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ ಶೌಚಾಲಯಗಳ ದುರಸ್ತಿ ಬಗೆಗಿನ ಪಟ್ಟಿಯನ್ನು ಮಾಡಬೇಕು. ಶಾಲಾ ಶೌಚಾಲಯ ಹಾಗೂ ಮೂತ್ರಾಲಯಗಳಿಗೆ ನೀರಿನ ಪೂರೈಕೆ ಸಮಸ್ಯೆ ಇರುವ ಕುರಿತು ಪಟ್ಟಿ ಮಾಡಿ ಒದಗಿಸಬೇಕೆಂದರು. ಶಾಲೆಗಳಲ್ಲಿನ ಹಾಗೂ ಶೌಚಾಲಯ ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶೌಚಾಲಯದ ದುರಸ್ತಿಗೆ 10,000 ರೂ. ಒಳಗೆ, 10,000 ರೂ. ದಿಂದ 50,000 ಒಳಗಡೆ, 50,000 ರಿಂದ 70,000 ಒಳಗಡೆ ಹಾಗೂ 70,000 ದಿಂದ 1,00,000 ಒಳಗೆ ದುರಸ್ತಿ ವೆಚ್ಚ ಇರುವ ಶಾಲಾ ಶೌಚಾಲಯಗಳ ಪಟ್ಟಿಯನ್ನು ತಯಾರಿಸಿ ಏಪ್ರಿಲ್ 18 ರಂದು ಜರುಗುವ ಸಭೆಗೆ ಹಾಜರಾಗುವಂತೆ ನಿರ್ದೇಶಿಸಿದರು.

ಜಿಲ್ಲೆಯ ಶೌಚಾಲಯಗಳ ಅವ್ಯವಸ್ಥೆ ಸ್ಥಿತಿಗತಿಗಳನ್ನು ಗಂಭೀರವಾಗಿ ಪರಿಗಣಿಸಿ ಶೌಚಾಲಯಗಳು ಬಳಕೆಗೆ ಯೋಗ್ಯವೇ ಎಂಬುದರ ಕುರಿತು ನೈಜ ವರದಿ ನೀಡಬೇಕು. ಸಣ್ಣ ಪುಟ್ಟ ದುರಸ್ತಿ ಅಗತ್ಯವಿದ್ದಲ್ಲಿ ತಮ್ಮ ಹಂತದಲ್ಲಿ ಸರಿಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ ಶಿಕ್ಷಣ ಇಲಾಖೆಯಿಂದ ಶೌಚಾಲಯಗಳ ವಸ್ತುಸ್ಥಿತಿ ಕುರಿತು ನೀಡಿದ ವರದಿ ಸಮರ್ಪಕವಾಗಿಲ್ಲ. ಈಗಿರುವ ಶೌಚಾಲಯಗಳ ಸಣ್ಣ ಪುಟ್ಟ ವರದಿ ಮಾಡಿದರೆ ಎಷ್ಟು ಸರಿ ಹೋಗುತ್ತದೆ ಎನ್ನುವುದರ ಕುರಿತು ಮಾಹಿತಿ ನೀಡುವಂತೆ ಹೇಳಿದರು. ಶಾಲೆಗಳಲ್ಲಿ ಶೌಚಾಲಯಗಳೇ ಇರದ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು. ಶೌಚಾಲಯಗಳಿದ್ದು ಸಹ ನೀರಿನ ಸಂಪರ್ಕವಿರದ ಶೌಚಾಲಯಗಳ ಪಟ್ಟಿ ಮುಂದಿನ ಸಭೆಗೆ ತರುವಂತೆ ನಿರ್ದೇಶಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ ಶೌಚಾಲಯಗಳ ನಿರ್ವಹಣೆಗೆ ನೀಡಿರುವ ಅನುದಾನ ವೆಚ್ಚವಾಗಿಯೂ ಸಹ ಶೌಚಾಲಯ ಸುಸ್ಥಿತಿಯಲ್ಲಿಲ್ಲ ಎಂದರೆ ಹೇಗೆ? ವಿನಾಕಾರಣ ಶೌಚಾಲಯ ನಿರ್ವಹಣಾ ವೆಚ್ಚ ಪೋಲಾಗುತ್ತಿದೆ ಎಂದೆನಿಸುವುದಿಲ್ಲವೇ . ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮಂಜಸ ಉತ್ತರ ನಿರೀಕ್ಷಿಸಲಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ ಅವರು ಮಾತನಾಡಿ ಜಿಲ್ಲೆಯಲ್ಲಿ 689 ಶಾಲಾ ಶೌಚಾಲಯಗಳಿದ್ದು ಅವುಗಳ ತಾಲೂಕಾವಾರು ಸುಸ್ಥಿತಿ , ದುರಸ್ತಿ , ನಿರ್ವಹಣೆ ಕುರಿತು ವರದಿ ನೀಡಲಾಗುವುದು. ಈ ಕುರಿತು ಬಿ.ಇ.ಓಗಳಿಗೆ ಸೂಚಿಸಲಾಗಿದೆ ಎಂದರು.

ತಾಲೂಕಾವಾರು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಶಾಲಾ ಶೌಚಾಲಯಗಳ ಸಂಖ್ಯೆ ಹಾಗೂ ಸುಸ್ಥಿತಿ ಹಾಗೂ ದುರಸ್ತಿ ಯಲ್ಲಿರುವ ಶೌಚಾಲಯಗಳ ಮತ್ತು ನಿರ್ವಹಣೆ ಕುರಿತಂತೆ ವರದಿಯನ್ನು ಸಭೆಗೆ ಮಂಡಿಸಿದರು.

ಸಭೆಯಲ್ಲಿ ಡಾ.ಎನ್.ಎಚ್. ನಾಗನೂರ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನ್ನಪೂರ್ಣ ಎಂ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ ಕೊಟ್ಟೂರ, ಡಯಟ್ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ ಸೇರಿದಂತೆ ಶಿಕ್ಷಣ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಬಿಆರ್ ಸಿ, ಸಿಆರ್‌ಸಿ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande